ಭಾರತದ ಆರ್ಥಿಕ ವ್ಯವಸ್ಥೆ | ||
---|---|---|
ನಾಣ್ಯ | ೧ ಭಾರತದ ರೂಪಾಯಿ (ಐ.ಎನ್.ಆರ್) (ರೂ.) = ೧೦೦ ಪೈಸೆ = ೦.೦೨೨೮೩ ಅಮೇರಿಕನ್ ಡಾಲರ್ = ೦.೦೧೮೯೭ ಯೂರೊ | |
ಆರ್ಥಿಕ ವರ್ಷ | ಎಪ್ರಿಲ್ ೧—ಮಾರ್ಚ್ ೩೧ | |
ಪ್ರಚಲಿತ ಆರ್ಥಿಕ ವರ್ಷ | (೨೦೦೬—೦೬) | |
ಪ್ರಚಲಿತ ಪಂಚವಾರ್ಷಿಕ ಯೋಜನೆ | ೧೦ನೆಯದು (೨೦೦೨—೨೦೦೭) | |
ಕೇಂದ್ರ ಬ್ಯಾಂಕ್ | ಭಾರತೀಯ ರಿಸರ್ವ್ ಬ್ಯಾಂಕ್ (RBI) | |
ವಾಣಿಜ್ಯ ಸಂಸ್ಥೆಗಳು ಮತ್ತು ಒಪ್ಪಂದಗಳು | ಸಾಫ್ಟಾ (ಎಸ್.ಎ.ಎಫ್.ಟಿ.ಎ), ಆಸಿಯಾನ್(ಎ.ಎಸ್.ಇ.ಎ.ಎನ್), ವಿಪೊ (ಡಬ್ಲ್ಯು.ಐ.ಪಿ.ಒ) ಮತ್ತು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯು.ಟಿ.ಒ) | |
ಕೇಂದ್ರ ಮುಂಗಡ ಪತ್ರ (ಬಜೆಟ್) | $೬೭೩.೩ ಕೋಟಿ (ಆದಾಯ) $೧೦೪ ಕೋಟಿ (ವೆಚ್ಚ) | |
ಹಣದುಬ್ಬರ (ಪ್ರತಿ ತಿಂಗಳ) | ೩.೫೩% (ಸೆಪ್ಟೆಂಬರ್) | |
ಜನರು | ||
ಪ್ರಧಾನ ಮಂತ್ರಿ (ಯೋಜನಾ ಆಯೋಗದ ಅಧ್ಯಕ್ಷ) |
ನರೇಂದ್ರ ಮೋದಿ | |
ಹಣಕಾಸು ಮಂತ್ರಿ | ಅರುಣ್ ಜೇಟ್ಲಿ | |
ವಾಣಿಜ್ಯ ಮಂತ್ರಿ | ಕಮಲ್ ನಾಥ್ | |
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ | ರಾಘುರಾಮನ್ | |
ಭಾರತೀಯ ಪ್ರತಿಭೂತಿ ಮತ್ತು ವಿನಿಮಯ ಮಂಡಳಿ(ಸೆಬಿ)(SEBI)ಅಧ್ಯಕ್ಷ | ಸಿನ್ಹಾ | |
ಸ್ಥಾನ | ||
ಭ್ರಷ್ಟಾಚಾರ | ೯೦ ನೆಯ ಸ್ಥಾನ | |
ವಾಣಿಜ್ಯ ಹಾಗು ಆರ್ಥಿಕ ಸ್ವಾತಂತ್ರ | ೧೧೮ ನೆಯ ಸ್ಥಾನ (ಹೆಚ್ಚು ಸ್ವಾತಂತ್ರವಿಲ್ಲಾ) | |
ಸಂಯುಕ್ತ ರಾಷ್ಟ್ರ ಸಂಸ್ಥೆ ಜನಾಭಿವೃದ್ಧಿ ಸೂಚಿ | ೧೨೭ನೆ ಸ್ಥಾನ (೨೦೦೫) | |
Gross Domestic Product (GDP) | ||
GDP at PPP | $3,362,960 million(4th) | |
GDP at current exchange rates | $691,876,300,000 million(10th) | |
GDP real growth rate (at PPP) | 6.2% (43rd) | |
GDP per Capita | $3,100 (155th) | |
GDP by sector | agriculture (21.8%), industry (26.1%), services (52.2%) | |
ಸಾಮಾಜಿಕ ಅಂಕಿ ಅಂಶಗಳು | ||
ಬಡತನ ರೇಖೆಯ ಕೆಳಗಿರುವ ಜನಸಂಖ್ಯೆ | 25% (2002 est.) | |
ಕಾರ್ಮಿಕ ಬಲ | 482.2 ಮಿಲಿಯನ್ | |
ವೃತ್ತಿಯಾಧರಿಸಿದ ಕಾರ್ಮಿಕ ಬಲ (1999) | agriculture (57%), industry (17%), services (23%) (2005-06) | |
ನಿರುದ್ಯೋಗದ ಗತಿ | 7.32% (1999-2000) | |
ಉತ್ಪಾದನೆ | ||
ಕೃಷಿ ಉತ್ಪನ್ನ | ಅಕ್ಕಿ, ಗೋದಿ, ಎಣ್ಣೆಬೀಜ, ಹತ್ತಿ, ಸೆಣಬು, ಚಹ, ಕಬ್ಬು, ಆಲೂಗೆಡ್ಡೆ; ಹಸು, ಎಮ್ಮೆ, ಕುರಿ, ಮೇಕೆ, ಕೋಳಿ, ಮೀನು | |
ಮುಖ್ಯ ಕೈಗಾರಿಕೆಗಳು | ಜವಳಿ, ರಾಸಾಯನ, ಆಹಾರ ಸಂಸ್ಕರಣೆ, ಉಕ್ಕು, ಸಾರಿಗೆ ಉಪಕರಣ, ಸಿಮೆಂಟ್, ಗಣಿಗಾರಿಕೆ, ಪೆಟ್ರೋಲಿಯಂ, ಯಂತ್ರೋಪಕರಣ, ತಂತ್ರಾಂಶ | |
ಹೊರ ವ್ಯಾಪಾರ | ||
ಆಮದುಗಳ ಮೌಲ್ಯ (೨೦೦೩) | $೮೯.೩೩ ಬಿಲಿಯನ್ (ಶತ ಕೋಟಿ) f.o.b (೨೫ ನೆಯದು) | |
ಪ್ರಮುಖ ಆಮದು ಮಾಡುವ ವಸ್ತುಗಳು | ಕಚ್ಚಾ ತೈಲ, ಯಂತ್ರೋಪಕರಣ, ಹವಳ, ಗೊಬ್ಬರ, ರಾಸಾಯನ | |
ಪ್ರಮುಖ ಆಮದು ಮಾಡುವ ದೇಶಗಳು | ಆಮೇರಿಕಾ ೭.೦%, ಬೆಲ್ಜಿಯಂ ೬.೧%, ಚೀನಾ ೫.೯%, ಸಿಂಗಾಪುರ ೪.೮%, ಯುನೈಟೆಡ್ ಕಿಂಗ್ಡಮ್ ೪.೬%, ಆಸ್ಟ್ರೆಲಿಯಾ ೪.೬%, ಜರ್ಮನಿ ೪.೫% (೨೦೦೪) | |
ರಫ್ತುಗಳ ಮೌಲ್ಯ | $೬೯.೧೮ ಬಿಲಿಯನ್ (ಶತ ಕೋಟಿ) f.o.b (೩೫ ನೆಯದು) | |
ಪ್ರಮುಖ ರಫ್ತು ಮಾಡುವ ವಸ್ತುಗಳು | ಜವಳಿ, ಹವಳ ಮತ್ತು ಆಭರಣ, ಯಂತ್ರಶಾಸ್ತ್ರ ಉತ್ಪನ್ನಗಳು, ರಾಸಾಯನ, ಚರ್ಮದ ಉತ್ಪನ್ನ | |
ಪ್ರಮುಖ ರಫ್ತು ಮಾಡುವ ದೇಶಗಳು (೨೦೦೩) | ಆಮೇರಿಕಾ ೧೮.೪%, ಚೀನಾ ೭.೮%, ಯುನೈಟೆಡ್ ಅರಬ್ ಎಮಿರೆಟ್ಸ್ ೬.೭%, ಯುನೈಟೆಡ್ ಕಿಂಗ್ಡಮ್ ೪.೮%, ಹಾಂಗ್ ಕಾಂಗ್ ೪.೩%, ಜರ್ಮನಿ ೪.೦% | |
ಒಟ್ಟಾರೆ ಬಾಕಿ ಸಂದಾಯ(೨೦೦೩) | $೩೧,೪೨೧ | |
Note:
|
ಭಾರತದ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಶೀಲ ಮಾರುಕಟ್ಟೆ ಅರ್ಥವ್ಯವಸ್ಥೆ ಎಂದು ವಿವರಿಸಲಾಗಿದೆ.[೧][೨] ಪಿ.ಪಿ.ಪಿ.ವುಳ್ಳ (ಕೊಳ್ಳುವ ಶಕ್ತಿಯ ಸಾಮ್ಯತೆ) ಜಿ.ಡಿ.ಪಿ ಪ್ರಕಾರ ಭಾರತ ವಿಶ್ವದಲ್ಲೇ ಮೂರನೆಯ ಸ್ಥಾನದಲ್ಲಿದೆ ಮತ್ತು ಅಮೇರಿಕನ್ ಡಾಲರಿನಲ್ಲಿನ ಒಟ್ಟೂ ದೇಶಿಯ ಉತ್ಪನ್ನ(ಜಿ.ಡಿ.ಪಿ) ಪ್ರಕಾರ $೬೯೧.೮೭೬ ಕೋಟಿ ಹೊಂದಿ ವಿಶ್ವದಲ್ಲೇ ಐದನೆಯ ಸ್ಥಾನದಲ್ಲಿದೆ. ಐಎಂಎಫ್ ಪ್ರಕಾರ, ತಲಾವಾರು ಆದಾಯದ ಆಧಾರದಲ್ಲಿ, ೨೦೧೮ರಲ್ಲಿ ಭಾರತವು ಜಿಡಿಪಿ ಪ್ರಕಾರ ೧೩೯ನೇ (ನಾಮಮಾತ್ರದ) ಮತ್ತು ಜಿಡಿಪಿ ಪ್ರಕಾರ ೧೧೮ನೇ (ಪಿಪಿಪಿ) ಸ್ಥಾನ ಹೊಂದಿತ್ತು.[೩]
೧೯೪೭ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ೧೯೯೧ರ ವರೆಗೆ, ಅನುಕ್ರಮದ ಸರ್ಕಾರಗಳು ವ್ಯಾಪಕ ಸರ್ಕಾರಿ ಹಸ್ತಕ್ಷೇಪ ಮತ್ತು ನಿಯಂತ್ರಣವುಳ್ಳ ರಕ್ಷಣಾವಾದಿ ಆರ್ಥಿಕ ನೀತಿಗಳನ್ನು ಪ್ರೋತ್ಸಾಹಿಸಿದವು; ಶೀತಲ ಸಮರದ ಅಂತ್ಯ ಮತ್ತು ೧೯೯೧ ರಲ್ಲಿ ತೀವ್ರ ಪಾವತಿ ಬಾಕಿ ಬಿಕ್ಕಟ್ಟಿನ ಕಾರಣ ಭಾರತವು ಆರ್ಥಿಕ ಉದಾರೀಕರಣದ ವಿಶಾಲ ಕಾರ್ಯಕ್ರಮವನ್ನು ಅಳವಡಿಸಿಕೊಂಡಿತು.[೪][೫] ೨೧ನೇ ಶತಮಾನದ ಆರಂಭದಿಂದ, ವಾರ್ಷಿಕ ಸರಾಸರಿ ಜಿಡಿಪಿ ಬೆಳವಣಿಗೆಯು 6% ನಿಂದ 7% ಆಗಿದೆ,[೨] ಮತ್ತು ೨೦೧೪ ರಿಂದ ೨೦೧೮ರ ವರೆಗೆ, ಭಾರತವು ಚೀನಾವನ್ನು ಮೀರಿಸಿ ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿದ್ದ ಪ್ರಮುಖ ಅರ್ಥವ್ಯವಸ್ಥೆಯಾಗಿತ್ತು.[೬][೭] ಐತಿಹಾಸಿಕವಾಗಿ, ೧ ರಿಂದ ೧೯ನೇ ಶತಮಾನದವರೆಗೆ ಎರಡು ಸಹಸ್ರಮಾನಗಳ ಬಹುತೇಕ ಭಾಗದಲ್ಲಿ ಭಾರತವು ವಿಶ್ವದಲ್ಲಿನ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿತ್ತು.[೮][೯][೧೦]
ಭಾರತದ ಯುವ ಜನತೆ ಮತ್ತು ಕಡಿಮೆಯಿರುವ ಅನುರೂಪವಾದ ಅವಲಂಬನಾ ಅನುಪಾತ, ಆರೋಗ್ಯಕರ ಉಳಿತಾಯಗಳು ಮತ್ತು ಹೂಡಿಕೆ ದರಗಳ ಕಾರಣದಿಂದ ಭಾರತದ ಅರ್ಥವ್ಯವಸ್ಥೆಯ ದೀರ್ಘಾವಧಿ ಬೆಳವಣಿಗೆಯ ದೃಷ್ಟಿಕೋನವು ಸಕಾರಾತ್ಮಕವಾಗಿದೆ. ಭಾರತವು ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಏಕೀಕರಣವನ್ನು ಹೆಚ್ಚಿಸುತ್ತಿದೆ.[೧೧] ೨೦೧೬ರಲ್ಲಿನ ಅನಾಣ್ಯೀಕರಣ ಮತ್ತು ೨೦೧೭ರಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ಚಾಲ್ತಿಗೆ ತಂದ ನಂತರ ಆದ ಆಘಾತಗಳ ಕಾರಣ ಅರ್ಥವ್ಯವಸ್ಥೆಯು ೨೦೧೭ರಲ್ಲಿ ನಿಧಾನಿಸಿತು.[೧೧] ಭಾರತದ ಜಿಡಿಪಿಯ ಸುಮಾರು 60% ದೇಶೀಯ ಖಾಸಗಿ ಬಳೆಕೆಯಿಂದ ಚಾಲಿತವಾಗಿದೆ[೧೨] ಮತ್ತು ಭಾರತವು ವಿಶ್ವದ ಆರನೇ ಅತಿ ದೊಡ್ಡ ಗ್ರಾಹಕ ಮಾರುಕಟ್ಟೆಯಾಗಿ ಇರುವುದು ಮುಂದುವರೆದಿದೆ.[೧೩] ಖಾಸಗಿ ಬಳೆಯಲ್ಲದೆ, ಭಾರತದ ಜಿಡಿಪಿಯು ಸರ್ಕಾರಿ ವ್ಯಯ, ಹಣಹೂಡಿಕೆ ಮತ್ತು ರಫ್ತುಗಳಿಂದ ಚಾಲಿತವಾಗಿದೆ.[೧೪] ೨೦೧೮ರಲ್ಲಿ, ಭಾರತವು ಹತ್ತನೇ ಅತಿ ದೊಡ್ಡ ಆಮದುಗಾರ ಮತ್ತು ಹತ್ತೊಂಬತ್ತನೇ ಅತಿ ದೊಡ್ಡ ರಫ್ತುದಾರವಾಗಿತ್ತು.[೧೫] ಭಾರತವು ೧೯೯೫ರಿಂದ ವಿಶ್ವ ವ್ಯಾಪಾರ ಸಂಸ್ಥೆಯ ಸದಸ್ಯವಾಗಿದೆ.[೧೬] ಭಾರತವು ವ್ಯವಹಾರ ನಡೆಸುವ ಸುಗಮತೆಯ ಸೂಚ್ಯಂಕದಲ್ಲಿ ೬೩ನೇ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯ ವರದಿಯಲ್ಲಿ ೬೮ನೇ ಸ್ಥಾನ ಪಡೆದಿದೆ.[೧೭] ೫೨೦ ದಶಲಕ್ಷ ಕಾರ್ಮಿಕರಿರುವ ಭಾರತದ ಕಾರ್ಮಿಕ ಬಲವು ೨೦೧೯ರ ವೇಳೆಗೆ ವಿಶ್ವದ ಎರಡನೇ ಅತಿ ದೊಡ್ಡ ಬಲವಾಗಿದೆ. ವಿಶ್ವದ ಅತಿ ಹೆಚ್ಚಿನ ಸಂಖ್ಯೆಯ ಬಿಲಿಯನೇರ್ಗಳಿರುವ ದೇಶಗಳಲ್ಲಿ ಭಾರತ ಒಂದೆನಿಸಿದೆ ಮತ್ತು ಅತಿಯಾದ ಆದಾಯ ಅಸಮಾನತೆಯನ್ನು ಹೊಂದಿದೆ.[೧೮][೧೯] ಭಾರತವು ವಿಶಾಲವಾದ ಅನೌಪಚಾರಿಕ ಅರ್ಥವ್ಯವಸ್ಥೆಯನ್ನು ಹೊಂದಿರುವುದರಿಂದ, ಕೇವಲ 2% ಭಾರತೀಯರು ಆದಾಯ ತೆರಿಗೆಯನ್ನು ಪಾವತಿಸುತ್ತಾರೆ.[೨೦] ೨೦೦೮ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ವೇಳೆ, ಅರ್ಥವ್ಯವಸ್ಥೆಯು ಸೌಮ್ಯವಾದ ನಿಧಾನೀಕರಣವನ್ನು ಎದುರಿಸಿತು. ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಬೇಡಿಕೆಯನ್ನು ಸೃಷ್ಟಿಸಲು ಭಾರತವು ಉತ್ತೇಜಕ ಕ್ರಮಗಳನ್ನು (ಹಣಕಾಸಿನ ಮತ್ತು ವಿತ್ತೀಯ ಎರಡೂ) ಕೈಗೊಂಡಿತು; ನಂತರದ ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆಯು ಪುನರೂರ್ಜಿತವಾಯಿತು.[೨೧] ೨೦೧೭ರ ಪಿಡಬ್ಲ್ಯುಸಿ ವರದಿಯ ಪ್ರಕಾರ, ಪಿಪಿಪಿ ಯಲ್ಲಿನ ಭಾರತದ ಜಿಡಿಪಿಯು ೨೦೧೫೦ರ ವೇಳೆಗೆ ಅಮೇರಿಕವನ್ನು ಹಿಂದೆಹಾಕಬಹುದು.[೨೨] ವಿಶ್ವ ಬ್ಯಾಂಕ್ ಪ್ರಕಾರ, ಸುಸ್ಥಿರವಾದ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಭಾರತವು ಸಾರ್ವಜನಿಕ ವಲಯದ ಸುಧಾರಣೆ, ಮೂಲಸೌಕರ್ಯ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ, ಭೂ ಹಾಗೂ ಕಾರ್ಮಿಕ ನಿಯಂತ್ರಣಗಳನ್ನು ತೆಗೆಯುವುದು, ಹಣಕಾಸು ಅಂತರ್ವೇಶನದ ಮೇಲೆ ಕೇಂದ್ರೀಕರಿಸಬೇಕು ಮತ್ತು ಖಾಸಗಿ ಹಣಹೂಡಿಕೆ ಹಾಗೂ ರಫ್ತುಗಳು, ಶಿಕ್ಷಣ ಹಾಗೂ ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸಬೇಕು.[೨೩]
೨೦೧೯ರಲ್ಲಿ, ಅಮೇರಿಕ, ಚೈನಾ, ಯುಎಇ, ಸೌದಿ ಅರೇಬಿಯಾ, ಹಾಂಗ್ ಕಾಂಗ್, ಇರಾಕ್, ಸಿಂಗಾಪುರ, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜ಼ರ್ಲಂಡ್ ಭಾರತದ ಹತ್ತು ಅತಿ ದೊಡ್ಡ ವ್ಯಾಪಾರ ಪಾಲುದಾರರಾಗಿದ್ದವು.[೨೪] 2018–19 ರಲ್ಲಿ, ಭಾರತದಲ್ಲಿ ವಿದೇಶಿ ನೇರ ಬಂಡವಾಳವು (ಎಫ಼್ಡಿಐ) $64.4 ಬಿಲಿಯನ್ ಆಗಿತ್ತು. ಸೇವಾ ವಲಯ, ಕಂಪ್ಯೂಟರ್ ಮತ್ತು ದೂರಸಂಪರ್ಕ ಕೈಗಾರಿಕೆಗಳು ಎಫ಼್ಡಿಐ ಒಳಹರಿವಿಗೆ ಮುಂಚೂಣಿಯ ವಲಯಗಳಾಗಿದ್ದವು.[೨೫] ಆಸಿಯಾನ್, ಸ್ಯಾಫ಼್ಟಾ, ಮರ್ಕೊಸುರ್, ದಕ್ಷಿಣ ಕೊರಿಯಾ, ಜಪಾನ್ ಸೇರಿದಂತೆ, ಹಲವಾರು ದೇಶಗಳೊಡನೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹೊಂದಿದೆ. ಕೆಲವು ಇತರ ಒಪ್ಪಂದಗಳು ಜಾರಿಯಲ್ಲಿವೆ ಅಥವಾ ಮಾತುಕತೆಯ ಹಂತದಲ್ಲಿವೆ.[೨೬][೨೭] ಸೇವಾ ವಲಯವು ಜಿಡಿಪಿಯ 55.6% ನಷ್ಟನ್ನು ರೂಪಿಸುತ್ತದೆ ಮತ್ತು ಅತಿ ವೇಗವಾಗಿ ಬೆಳೆಯುತ್ತಿರುವ ವಲಯವಾಗಿ ಉಳಿದುಕೊಂಡಿದೆ. ಕೈಗಾರಿಕಾ ವಲಯ ಮತ್ತು ಕೃಷಿ ವಲಯಗಳು ಕಾರ್ಮಿಕ ಬಲದ ಬಹುಪಾಲಿಗೆ ಉದ್ಯೋಗ ನೀಡಿದೆ.[೨೮] ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಗಳು (ಎನ್ಎಸ್ಇ) ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯದ ಪ್ರಕಾರ ವಿಶ್ವದ ಅತಿ ದೊಡ್ಡ ಷೇರುಪೇಟೆಗಳಲ್ಲಿ ಒಂದಾಗಿವೆ.[೨೯] ಭಾರತವು ವಿಶ್ವದ ಆರನೇ ಅತಿ ದೊಡ್ಡ ಉತ್ಪಾದಕವಾಗಿದೆ ಮತ್ತು ಜಾಗತಿಕ ಉತ್ಪಾದನಾ ಪ್ರಮಾಣದ 3% ರಷ್ಟನ್ನು ಪ್ರತಿನಿಧಿಸುತ್ತದೆ ಮತ್ತು 57 ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ.[೩೦][೩೧] ಸರಿಸುಮಾರು 70% ಭಾರತೀಯರು ಹಳ್ಳಿಗಳಲ್ಲಿದ್ದಾರೆ ಮತ್ತು ಕೃಷಿಯು ಇವರ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಕೃಷಿಯು ಭಾರತದ ಜಿಡಿಪಿಗೆ ಸುಮಾರು 50% ನಷ್ಟು ಕೊಡುಗೆ ನೀಡುತ್ತದೆ.[೩೨] ಭಾರತವು $476 ಬಿಲಿಯನ್ ಮೊತ್ತದ ವಿಶ್ವದ ಏಳನೇ ಅತಿ ದೊಡ್ಡ ವಿದೇಶೀ ವಿನಿಮಯ ಮೀಸಲು ನಿಧಿಯನ್ನು ಹೊಂದಿದೆ.[೩೩] ಭಾರತದ ರಾಷ್ಟ್ರೀಯ ಸಾಲವು ಹೆಚ್ಚಿದ್ದು ಜಿಡಿಪಿಯ 68% ನಷ್ಟಿದೆ. ವಿತ್ತೀಯ ಕೊರತೆಯು ಜಿಡಿಪಿಯ 3.4% ನಷ್ಟಿದೆ.[೩೪][೩೫] ಆದರೆ, ೨೦೧೯ರ ಸಿಎಜಿ ವರದಿಯ ಪ್ರಕಾರ, ವಾಸ್ತವಿಕ ವಿತ್ತೀಯ ಕೊರತೆಯು ಜಿಡಿಪಿಯ 5.85% ನಷ್ಟಿದೆ.[೩೬] ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಏರುತ್ತಿರುವ ಹೋಕು ಸಾಲಗಳನ್ನು ಎದುರಿಸುತ್ತಿರುವ ಕಾರಣ ಜಮಾಹಣದ ಬೆಳವಣಿಗೆಯು ಕಡಿಮೆಯಾಗುತ್ತಿದೆ.[೩೭] ಇದೇ ವೇಳೆ ಎನ್ಬಿಎಫ಼್ಸಿ ವಲಯವು ದ್ರವತೆಯ ಬಿಕ್ಕಟ್ಟಿನಲ್ಲಿ ಮುಳುಗಿದೆ.[೩೮] ಭಾರತವು ಹೆಚ್ಚಿನ ನಿರುದ್ಯೋಗ, ಏರುತ್ತಿರುವ ಆದಾಯ ಅಸಮಾನತೆ, ಮತ್ತು ಒಟ್ಟು ಬೇಡಿಕೆಯಲ್ಲಿ ಪ್ರಮುಖ ಕುಸಿತವನ್ನು ಎದುರಿಸುತ್ತಿದೆ.[೩೯][೪೦] ಇತ್ತೀಚಿನ ವರ್ಷಗಳಲ್ಲಿ, ಸರ್ಕಾರವು ವಿವಿಧ ಆರ್ಥಿಕ ದತ್ತಾಂಶಗಳು, ವಿಶೇಷವಾಗಿ ಜಿಡಿಪಿ ಬೆಳವಣಿಗೆಯನ್ನು ಸೃಷ್ಟನೆ ಮಾಡುತ್ತಿದೆ ಎಂದು ಸ್ವತಂತ್ರ ಅರ್ಥಶಾಸ್ತ್ರಜ್ಞರು ಮತ್ತು ಹಣಕಾಸು ಸಂಸ್ಥೆಗಳು ಆರೋಪಿಸಿವೆ.[೪೧][೪೨]
ಆಹಾರ ಮತ್ತು ಕೃಷಿ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನ ಪಡೆದಿದೆ. ಕೃಷಿ ರಫ್ತುಗಳು $38.5 ಬಿಲಿಯನ್ನಷ್ಟು ಇದ್ದವು.[೪೩][೪೪] ಕೃಷಿಯ ನಂತರ ನಿರ್ಮಾಣ ಮತ್ತು ಸ್ಥಿರಾಸ್ತಿ ವಲಯವು ಎರಡನೇ ಅತಿ ದೊಡ್ಡ ಉದ್ಯೋಗದಾತವಾಗಿದೆ ಮತ್ತು ಆರ್ಥಿಕ ಚಟುವಟಿಕೆಯನ್ನು ಅಂದಾಜಿಸುವ ಪ್ರಮುಖ ವಲಯವಾಗಿದೆ.[೪೫] ಭಾರತದ ಜವಳಿ ಉದ್ಯಮವು $150 ಬಿಲಿಯನ್ನಷ್ಟಿದೆ ಎಂದು ಅಂದಾಜಿಸಲಾಗಿದೆ ಮತ್ತು ಕೈಗಾರಿಕಾ ಪ್ರಮಾಣದ 7% ಹಾಗೂ ಭಾರತದ ಜಿಡಿಪಿಗೆ 2% ನಷ್ಟು ಕೊಡುಗೆ ನೀಡುತ್ತದೆ ಮತ್ತು ೪೫ ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ನೇರವಾಗಿ ಉದ್ಯೋಗ ನೀಡುತ್ತದೆ.[೪೬] ಭಾರತದ ಐಟಿ ಉದ್ಯಮವು ಐಟಿ ಸೇವೆಗಳ ಪ್ರಮುಖ ರಫ್ತುದಾರವಾಗಿದ್ದು ಇದರ ಆದಾಯ $180 ಬಿಲಿಯನ್ನಷ್ಟಿದ್ದು ನಾಲ್ಕು ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ.[೪೭] ಭಾರತದ ದೂರಸಂಪರ್ಕ ಉದ್ಯಮವು ಮೊಬೈಲ್ ಫ಼ೋನ್, ಸ್ಮಾರ್ಟ್ಫ಼ೋನ್ ಹಾಗೂ ಅಂತರಜಾಲ ಬಳಕೆದಾರರ ಸಂಖ್ಯೆಯ ಪ್ರಕಾರ ವಿಶ್ವದ ಎರಡನೇ ಅತಿ ದೊಡ್ಡ ದೂರಸಂಪರ್ಕ ಉದ್ಯಮವಾಗಿದೆ. ಭಾರತವು ವಿಶ್ವದ ಹತ್ತನೇ ಅತಿ ದೊಡ್ಡ ತೈಲ ಉತ್ಪಾದಕ ಮತ್ತು ಮೂರನೇ ಅತಿ ದೊಡ್ಡ ತೈಲ ಗ್ರಾಹಕವಾಗಿದೆ.[೪೮][೪೯] ಭಾರತದ ಚಿಲ್ಲರೆ ಮಾರುಕಟ್ಟೆಯ ಮೌಲ್ಯ $672 ಬಿಲಿಯನ್ನಷ್ಟಿದ್ದು ಭಾರತದ ಜಿಡಿಪಿಗೆ 10% ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ಒಂದಾಗಿದೆ.[೫೦] ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ. ಗಣಿಗಾರಿಕಾ ವಲಯವು ದೇಶದ ಕೈಗಾರಿಕಾ ಜಿಡಿಪಿಯ 11% ನಷ್ಟು ಮತ್ತು ಒಟ್ಟು ಜಿಡಿಪಿಯ 2.5% ನಷ್ಟು ಕೊಡುಗೆ ನೀಡುತ್ತದೆ.[೫೧] ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ, ಎರಡನೇ ಅತಿ ದೊಡ್ಡ ಸಿಮೆಂಟ್ ಉತ್ಪಾದಕ, ಎರಡನೇ ಅತಿ ದೊಡ್ಡ ಉಕ್ಕಿನ ಉತ್ಪಾದಕ, ಮತ್ತು ಮೂರನೇ ಅತಿ ದೊಡ್ಡ ವಿದ್ಯುತ್ ಉತ್ಪಾದಕವೂ ಆಗಿದೆ.[೫೨][೫೩]
ಭಾರತದ ಆರ್ಥಿಕ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಮಾನದಲ್ಲಿ ವಿಂಗಡಿಸಬಹುದು.
ಕ್ರಿ.ಪೂ. 2800 ರಿಂದ 1800 ರವರೆಗೆ ಮೆರೆದ ಸಿಂಧೂ ಕಣಿವೆಯ ನಾಗರೀಕತೆಯು ಬಹುತೇಕ ಪಟ್ಟಣ ಪ್ರದೇಶಗಳ ಪಕ್ಕಾ ಒಕ್ಕಲುಗಳನ್ನು ಒಳಗೊಂಡಿತ್ತು. ಇಲ್ಲಿಯ ಜನರು ಬೇಸಾಯ ಮತ್ತು ಪಶುಪಾಲನೆಯನ್ನು ರೂಢಿಸಿಕೊಂಡಿದ್ದರು, ಏಕ ರೀತಿಯ ತೂಕ ಮತ್ತು ಅಳತೆಗಳನ್ನು ಬಳಸುತ್ತಿದ್ದರು,ಆಯುಧೋಪಕರಣಗಳನ್ನು ತಯಾರಿಸುತ್ತಿದ್ದರು ಹಾಗೂ ಇತರ ಪಟ್ಟಣಗಳೋಂದಿಗೆ ವ್ಯಾಪಾರ ಸಂಬಂಧವನ್ನು ಇಟ್ಟುಕೊಂಡಿದ್ದರು. ಸುನಿಯೋಜಿತ ಬೀದಿಗಳು,ಚರಂಡಿ ಹಾಗೂ ನೀರು ಸರಬರಾಜು ವ್ಯವಸ್ಥೆ,ಇವೆಲ್ಲವುಗಳ ಕುರುಹು,ನಗರ ಯೋಜನೆಯಲ್ಲಿ ಇವರಿಗಿದ್ದ ಜ್ಞಾನವನ್ನು ತೋರಿಸುತ್ತದೆ.ಅಷ್ಟೇ ಅಲ್ಲ, ಜಗತ್ತಿನ ಮೊಟ್ಟ ಮೊದಲ ನಗರ ನೈರ್ಮಲ್ಯ ವ್ಯವಸ್ಥೆ ಹಾಗೂ ಸ್ಥಳೀಯ ಸರ್ಕಾರಗಳ ಕೀರ್ತಿಯು ಈ ನಾಗರೀಕತೆಗೆ ಸಲ್ಲುತ್ತದೆ.[೫೪]
ಈಗ ಭಾರತದ ಭಾಗವಾಗಿರುವ ಆ ಪ್ರದೇಶದ ಬಹುತೇಕ ಜನರು, ಗ್ರಾಮವಾಸಿಗಳಾಗಿದ್ದು,ಅವರ ಹಣಕಾಸು ವ್ಯವಸ್ಥೆಯು ಬಹಳವಾಗಿ ಪ್ರತ್ಯೇಕವಾಗಿದ್ದು, ಸ್ವಾವಲಂಬಿಯಾಗಿತ್ತು. ಬೇಸಾಯ ಮುಖ್ಯ ಉದ್ಯೋಗವಾಗಿತ್ತು.ಅವರ ಕೃಷಿಯು ಗ್ರಾಮದ ಆಹಾರದ ಅಗತ್ಯಗಳನ್ನಷ್ಟೇ ಅಲ್ಲದೆ, ಬಟ್ಟೆ,ಆಹಾರ ಸಂಸ್ಕರಣೆ, ಕರಕುಶಲ ವಸ್ತುಗಳು ಇತ್ಯಾದಿ ಗ್ರಾಮೀಣ ಕೈಗಾರಿಕೆಗಳ ಕಚ್ಚಾ ವಸ್ತುಗಳನ್ನೂ ಪೂರೈಸುತ್ತಿತ್ತು. ಅನೇಕ ರಾಜರುಗಳು ತಮ್ಮದೇ ಆದ ನಾಣ್ಯಗಳನ್ನು ಚಲಾವಣೆಯಲ್ಲಿಟ್ಟಿದ್ದರೂ, ವಸ್ತು ವಿನಿಮಯ ಕೂಡಾ ಬಹಳ ಕಡೆಗಳಲ್ಲಿ ಬಳಕೆಯಲ್ಲಿತ್ತು.ಗ್ರಾಮಸ್ಥರು ತಮ್ಮ ಬೆಳೆಯ ಒಂದು ಪಾಲನ್ನು ಕಂದಾಯವಾಗಿ ಸಲ್ಲಿಸುವುದೂ, ಕುಶಲ ಕಾರ್ಮಿಕರು ಸುಗ್ಗಿಯ ಕಾಲದಲ್ಲಿ ಬೆಳೆಯ ಒಂದು ಪಾಲನ್ನು ತಮ್ಮ ಸೇವೆಯ ಪ್ರತಿಫಲವಾಗಿ ಪಡೆದುಕೊಳ್ಳುವುದೂ ಚಾಲ್ತಿಯಲ್ಲಿತ್ತು.
ಧರ್ಮ, ಅದರಲ್ಲೂ ಮುಖ್ಯವಾಗಿ ಹಿಂದೂ ಧರ್ಮ,ಜಾತಿ ಮತ್ತು ಅವಿಭಕ್ತ ಕುಟುಂಬ ಪಧ್ಧತಿಗಳು ಗ್ರಾಮಗಳ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತಿದ್ದವು. ಜಾತಿ ಪಧ್ಧತಿಯು ಸಾಮಾಜಿಕ ನ್ಯೂನತೆಗಳಿಗೆ ಎಡೆ ಮಾಡಿ ಕೊಟ್ಟಿದ್ದರೂ, ಶ್ರಮ ವಿಭಜನೆ, ಹೊಸ ಕಾರ್ಮಿಕರ ತರಬೇತಿ , ಹಾಗೂ ಕೆಲ ಉತ್ಪಾದಕರು ವಿಶೇಷ ಕಾರ್ಯಕಾರಿ ಪಧ್ಧತಿಯನ್ನು ಉಪಯೋಗಿಸುವುದೇ ಇತ್ಯಾದಿಗಳಿಗೆ ಅನುವು ಮಾಡಿಕೊಟ್ಟು, ಮಧ್ಯಕಾಲದ ಯೂರೋಪಿನ ಗಿಲ್ಡ್ ಗಳಂತೆ ಕಾರ್ಯ ನಿರ್ವಹಿಸುತ್ತಿತ್ತು.ಉದಾಹರಣೆಗೆ, ಕೆಲ ಪ್ರದೇಶಗಳಲ್ಲಿ, ಬಟ್ಟೆಯ ಪ್ರತಿಯೊಂದು ಪ್ರಬೇಧವೂ, ಒಂದೊಂದು ಉಪಜಾತಿಯ ವೈಶಿಷ್ಟ್ಯವಾಗಿತ್ತು.
ಬ್ರಿಟಿಷ್ ಆಡಳಿತ ಬರುವ ಕಾಲದಲ್ಲಿ, ಭಾರತ ಬಹುತೇಕ , ಹೊಟ್ಟೆಪಾಡಿಗಾಗಿ, ಸರಳ ತಂತ್ರಜ್ಙಾನ ಬಳಸುತ್ತಿದ್ದ, ಸಾಂಪ್ರದಾಯಿಕ ಕೃಷಿ ಪ್ರಧಾನ ದೇಶವಾಗಿತ್ತು. ಪೈಪೋಟಿಯಂದ ಬೆಳೆಯುತ್ತಿದ್ದ ವಾಣಿಜ್ಯ, ಉದ್ಯಮ ಹಾಗೂ ಋಣ ವ್ಯವಸ್ಥೆಗಳೊಂದಿಗೆ ಇದು ಸಹ ಬಾಳ್ವೆ ಮಾಡುತ್ತಿತ್ತು.
ಬ್ರಿಟಿಷ್ ಆಡಳಿತ ಆಸ್ತಿ ಹಕ್ಕು, ಅನಿರ್ಬಂಧಿತ ವ್ಯಾಪಾರ, ಸ್ಥಿರ ವಿನಿಮಯ ದರ, ಏಕ ರೀತಿಯ ನಾಣ್ಯ ಪಧ್ಧತಿ ಹಾಗೂ ತೂಕ ಮತ್ತು ಅಳತೆ ಪದ್ಧತಿ, ಮುಕ್ತ ಸಟ್ಟಾ ಮಾರುಕಟ್ಟೆ ಇವೆಲ್ಲವುಗಳನ್ನೂ ಒಳಗೊಂಡ ಸಾಂಸ್ಥಿಕ ವಾತಾವರಣವನ್ನು ಸೃಷ್ಟಿಸಿತು.ಅಷ್ಟೇ ಅಲ್ಲ, ಚೆನ್ನಾಗಿ ಅಭಿವೃಧ್ಧಿಯಾದ ರೈಲು ಹಾಗೂ ಅಂಚೆ ತಂತಿ ವ್ಯವಸ್ಥೆ, ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿದ್ದ ಆಡಳಿತ ವ್ಯವಸ್ಥೆ, ಆಧುನಿಕ ಕಾನೂನು ವ್ಯವಸ್ಥೆ ಇವುಗಳನ್ನೂ ಬ್ರಿಟಿಷ್ ಆಡಳಿತ ಜಾರಿಗೆ ತಂದಿತು.
ಕಾಕತಾಳೀಯವಾಗಿ, ಇದೇ ಸಮಯದಲ್ಲಿ ಜಗತ್ತಿನ ಅರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದವು -ಕೈಗಾರಿಕೀಕರಣ, ಉತ್ಪಾದನೆ ಹಾಗೂ ವಾಣಿಜ್ಯ ವಹಿವಾಟುಗಳಲ್ಲಿ ಹೆಚ್ಚಳ, ರಾಷ್ಟ್ರಗಳು ಅನುಸರಿಸುತ್ತಿದ್ದ ಅರ್ಥಿಕ ಧೋರಣೆಯಲ್ಲಿ ಹೊಸ ವಿಚಾರಗಳು ಇತ್ಯಾದಿ.ಅದರೂ ಬ್ರಿಟಿಷರು ಬಿಟ್ಟು ಹೋದಾಗ ಭಾರತ ಪ್ರಪಂಚದ ಅತಿ ಬಡ ರಾಷ್ಟ್ರಗಳಲ್ಲಿ ಒಂದಾಗಿತ್ತು. ಕೈಗಾರಿಕೆಗಳು ಇದ್ದಲ್ಲೇ ಇದ್ದು, ಅಭಿವೃಧ್ಧಿ ಸ್ಥಗಿತವಾಗಿತ್ತು. ಪದೇ ಪದೇ ಬಂದೆರಗುತ್ತಿದ್ದ ಕ್ಷಾಮದಿಂದ ಕಂಗಾಲಾಗಿದ್ದ ಭಾರತ ಹೆಚ್ಚುತ್ತಿದ್ದ ಜನಸಂಖ್ಯೆಯ ಹಸಿವನ್ನು ನೀಗಿಸಲು ಭಾರತೀಯ ಕೃಷಿ ಅಸಮರ್ಥವಾಗಿತ್ತು. ಈ ಕಾಲದಲ್ಲಿ ಭಾರತ ವಿಶ್ವದ ಅತಿ ಕಮ್ಮಿ ಆಯುಷ್ಯ ಪ್ರಮಾಣ ಹೊಂದಿರುವ ದೇಶವಾಗಿತ್ತು ಮತ್ತು ಅದರ ಜನಸಂಖ್ಯೆಯ ಬಹುಭಾಗ ಆಹಾರ ಪೋಷಣೆಯಿಂದ ವಂಚಿತ ಹಾಗು ಅನಕ್ಷರಸ್ಥವಾಗಿತ್ತು
ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಇತಿಹಾಸಕಾರ ಅಂಗಸ್ ಮ್ಯಾಡಿಸನ್ ರವರ ಅಂದಾಜಿನ ಪ್ರಕಾರ ಜಗತ್ತಿನ ಒಟ್ಟು ಉತ್ಪತ್ತಿಯಲ್ಲಿ ಭಾರತದ ಪಾಲು ೧೭೦೦ರಲ್ಲಿ ಶೇಕಡಾ ೨೨.೬(ಯುರೋಪ್ ಪಾಲು ೨೩.೩%) ಇದ್ದದ್ದು ೧೯೫೨ರಲ್ಲಿ ಕೇವಲ ಶೇಕಡಾ ೩.೮ಕ್ಕೆ ಇಳಿಯಿತು. ಈ ನಿರಾಶಾದಾಯಕ ಪರಿಸ್ಥಿತಿಗೆ, ಸ್ವಾತಂತ್ರ್ಯ ಹೋರಾಟ ಕಾಲದ ಭಾರತೀಯ ಮುಖಂಡರು ಹಾಗೂ "ಎಡ-ರಾಷ್ಟ್ರೀಯವಾದೀ" ಆರ್ಥಿಕ ಇತಿಹಾಸಕಾರರು ಬ್ರಿಟಿಷ್ ಆಳ್ವಿಕೆಯತ್ತ ಬೊಟ್ಟು ಮಾಡಿ ತೋರಿಸಿದರೂ,ವಸಾಹತುಶಾಹಿ ಆಳ್ವಿಕೆ ತಂದ ಬದಲಾವಣೆಗಳು ಹಾಗೂ ಕೈಗಾರಿಕೀಕರಣ ಮತ್ತು ಆರ್ಥಿಕ ಏಕೀಕರಣದತ್ತ ಸಾಗುತ್ತಿದ್ದ ಜಗತ್ತು , ಇವುಗಳ ಒಟ್ಟು ಪರಿಣಾಮದಿಂದ, ಭಾರತದ ಅರ್ಥ ವ್ಯವಸ್ಥೆಯ ಕೆಲವು ಅಂಗಗಳು ಬೆಳೆದಿರುವುದೂ, ಇನ್ನೂ ಕೆಲವು ಅಂಗಗಳು ಕುಂಠಿತವಾಗಿರುವುದೂ,ಆ ಕಾಲದ ಭಾರತೀಯ ಅರ್ಥ ವ್ಯವಸ್ಥೆಯ ಪಕ್ಷಿನೋಟದಲ್ಲಿ ಕಾಣಬರುತ್ತದೆ.
ಸ್ವಾತಂತ್ರ್ಯಾನಂತರ , ವಸಾಹತುಶಾಹಿ ಅನುಭವ ( ಭಾರತೀಯ ಮುಖಂಡರು ಇದನ್ನು ಶೋಷಣಾತ್ಮಕವಾಗಿ ಕಂಡಿದ್ದರು),ಫೇಬಿಯನ್ ಸಮಾಜವಾದದ ಪರಿಚಯ ಇವುಗಳ ಪ್ರಭಾವದಿಂದ ಭಾರತದ ಆರ್ಥಿಕ ಧೋರಣೆಯು (policy) ರಕ್ಷಣಾತ್ಮಕವಾಯಿತು (protectionist).ಆಮದು ವಸ್ತುಗಳ ಸ್ಡದೇಶೀಕರಣ,ಕೈಗಾರಿಕೀಕರಣ,ಶ್ರಮ (labour)ಹಾಗೂ ಹಣಕಾಸು ರಂಗಗಳಲ್ಲಿ ಸರಕಾರೀ ನಿಯಂತ್ರಣ , ಬೃಹತ್ ಸರಕಾರೀ ಉದ್ಯಮ ರಂಗ, ಖಾಸಗೀ ಉದ್ಯಮಕ್ಕೆ ಕಟ್ಟುಪಾಡುಗಳು , ಕೇಂದ್ರೀಕೃತ ಯೋಜನೆ ಇವೆಲ್ಲವೂ ಈ ಧೋರಣೆಯಲ್ಲಿ ಅಡಕವಾಗಿದ್ದವು.ಭಾರತದ ಮೊಟ್ಟಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ , ಅಂಕಿಅಂಶಜ್ಞ ಪ್ರಶಾಂತ ಚಂದ್ರ ಮಹಲನೋಬಿಸ್ರೊಂದಿಗೆ ಈ ಸ್ವತಂತ್ರ ಭಾರತದ ಆರ್ಥಿಕ ಧೋರಣೆಯನ್ನು ಹುಟ್ಟುಹಾಕಿ, ಅದನ್ನು ಜಾರಿಗೆ ತರುವಲ್ಲಿ ಮೇಲ್ವಿಚಾರಣೆ ಮಾಡಿದರು. ಇದರಲ್ಲಿ ಸೋವಿಯತ್ ರಶಿಯಾದ ಕೇಂದ್ರೀಕೃತ ಅಧಿಕಾರ ವ್ಯವಸ್ಥೆಯಂತಲ್ಲದೆ, ಸರಕಾರೀ ಹಾಗೂ ಖಾಸಗೀ ರಂಗಗಳೆರಡಕ್ಕೂ ಅವಕಾಶಗಳಿತ್ತು; ಪ್ರತ್ಯಕ್ಷ ಹಾಗೂ ಪರೋಕ್ಷ ಸರಕಾರೀ ನಿಯಂತ್ರಣಗಳಿದ್ದವು. ಈ ಕಾರಣಗಳಿಂದಾಗಿ, ತಮ್ಮ ಈ ಧೋರಣೆಗೆ ಅವರು ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಿದ್ದರು. ಬಂಡವಾಳ ಹಾಗೂ ತಾಂತ್ರಿಕತೆಯನ್ನು ಬೇಡುವ ಭಾರೀ ಕೈಗಾರಿಕೆಗಳೊಂದಿಗೆ , ಹೆಚ್ಚು ನಿಪುಣತೆಯ ಅಗತ್ಯವಿಲ್ಲದ , ಕೈಯಿಂದಲೇ ಮಾಡಬಹುದಾದ ಗುಡಿ ಕೈಗಾರಿಕೆಗಳ ಸರಕಾರೀ ಸಹಾಯಧನಕ್ಕೂ ಒತ್ತು ಕೊಟ್ಟ ಈ ಧೋರಣೆಯನ್ನು ಅರ್ಥ ಶಾಸ್ತ್ರಜ್ಞ ಮಿಲ್ಟನ್ ಫ್ರೀಡ್ಮನ್ನರು ಟೀಕಿಸಿ , ಈ ಧೊರಣೆಯಿಂದ ಬಂಡವಾಳ ಹಾಗೂ ಪರಿಶ್ರಮಗಳು ಪೋಲಾಗುವುದಷ್ಟೇ ಅಲ್ಲದೆ, ಸಣ್ಣ ಉದ್ಯಮಗಳ ಬೆಳವಣಿಗೆಯೂ ಕುಂಠಿತವಾಗಬಹುದೆಂದು ಅಭಿಪ್ರಾಯಪಟ್ಟರು.
ಎಂಬತ್ತರ ದಶಕದಲ್ಲಿ ಭಾರತದ ಆರ್ಥಿಕ ಅಭಿವೃಧ್ಧಿಯ ಸರಾಸರಿ ವೇಗವು, ಏಶಿಯಾದ ಕೆಲವು ಇತರ ದೇಶಗಳ( ಮುಖ್ಯವಾಗಿ ಪೂರ್ವ ಏಶಿಯಾದ ದೇಶಗಳ) ತೀವ್ರ ಗತಿಗೆ ವ್ಯತಿರಿಕ್ತವಾಗಿ, ಕಡಿಮೆಯಿದ್ದು,ಇದನ್ನು "ಹಿಂದೂ ಅಭಿವೃಧ್ಧಿಯ ವೇಗ" ಎಂದು ಕುಹಕವಾಡಲಾಗುತ್ತಿತ್ತು. ಎಂಭತ್ತರ ನಂತರ ದಾಪುಗಾಲು ಹಾಕತೊಡಗಿದ ಆರ್ಥಿಕ ಬೆಳವಣಿಗೆಗೆ ಎರಡು ಹಂತದ ಸುಧಾರಣೆಗಳು ಕಾರಣವಾದವು. ಒಂದು: ಇಂದಿರಾ ಗಾಂಧಿಯವರು ಶುರುಮಾಡಿ, ರಾಜೀವ ಗಾಂಧಿಯವರು ಮುಂದುವರಿಸಿದ ಖಾಸಗೀ ಉದ್ಯಮ ಪರವಾದ ಸುಧಾರಣೆಗಳು. ಈಗಾಗಲೇ ಕಾರ್ಯನಿರತವಾಗಿರುವ ಉದ್ಯಮಗಳ ಉತ್ಪತ್ತಿಯನ್ನು ವಿಸ್ತರಿಸಲು ವಿಧಿಸಲಾಗಿದ್ದ ಕಟ್ಟುಪಾಡುಗಳನ್ನು ಸಡಿಲಗೊಳಿಸಲಾಯಿತು. ಬೆಲೆ ನಿಯಂತ್ರಣಗಳನ್ನು ತೆಗೆದುಹಾಕಲಾಯಿತು ಹಾಗೂ ಉದ್ಯಮ ರಂಗದ ಮೇಲೆ ವಿಧಿಸಲಾಗಿದ್ದ ಕರವನ್ನು ಕಡಿಮೆ ಮಾಡಲಾಯಿತು. ಎರಡು: ೧೯೯೧ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಅವರ ಹಣಕಾಸು ಮಂತ್ರಿ ಮನಮೋಹನ ಸಿಂಗ್, ಭಾರತ ಎದುರಿಸುತ್ತಿದ್ದ ತೀವ್ರ ಆರ್ಥಿಕ ಸಂಕಟಕ್ಕೆ ಪ್ರತಿಕ್ರಿಯೆಯಾಗಿ, ಪ್ರಾರಂಭಿಸಿದ ಆರ್ಥಿಕ ಉದಾರೀಕರಣ(liberalisation). ಹಣ ಹೂಡಿಕೆ, ಕೈಗಾರಿಕಾ ಹಾಗೂ ಆಮದು ಕ್ಷೇತ್ರಗಳಲ್ಲಿ ಲೈಸೆನ್ಸ್ ರಾಜ್ಯವನ್ನು ತೆಗೆದುಹಾಕಲಾಯಿತು. ಅನೇಕ ರಂಗಳಲ್ಲಿದ್ದ ಸರಕಾರೀ ಏಕಸ್ವಾಮ್ಯವನ್ನು ನಿರ್ಮೂಲಿಸಿ, ಪರದೇಶೀ ಹಣ ಹೂಡಿಕೆಗೆ ಬಹಳಷ್ಟು ಕ್ಷೇತ್ರಗಳಲ್ಲಿ ಪರವಾನಗಿಯನ್ನು ಸ್ವಯಂಚಾಲಿತವಾಗಿಸಲಾಯಿತು (automatic approval ). ಅಂದಿನಿಂದ ಇಲ್ಲಿಯವರೆಗೆ, ಕಾರ್ಮಿಕ ಸಂಘಟನೆಗಳು,ರೈತರು ಇತ್ಯಾದಿ ಪಟ್ಟಭದ್ರ ಶಕ್ತಿಗಳನ್ನೇ ಆಗಲೀ, ಅಥವಾ ಕಾರ್ಮಿಕ ಕ್ಷೇತ್ರದಲ್ಲಿ ಸುಧಾರಣೆಗಳು, ಕೃಷಿಕರ ಸಹಾಯಧನದಲ್ಲಿ ಕಡಿತ ಇತ್ಯಾದಿ ಸಮಸ್ಯಾತ್ಮಕ ಪ್ರಶ್ನೆಗಳನ್ನೇ ಆಗಲೀ, ಎದುರಿಸುವ ಪ್ರಯತ್ನವನ್ನು ಯಾವ ಪಕ್ಷವೂ ಮಾಡಿಲ್ಲದಿದ್ದರೂ ಕೂಡಾ, ಅಧಿಕಾರದಲ್ಲಿದ್ದದ್ದು ಯಾವುದೇ ಪಕ್ಷವಾಗಿರಲಿ, ಉದಾರೀಕರಣ ಸರಿಸುಮಾರಾಗಿ ಅದೇ ದಿಕ್ಕಿನಲ್ಲಿ ಮುಂದೆ ಸಾಗಿದೆ.
ಹಿಂದಿನ ಬೆಳವಣಿಗೆ: |
ಕೆಳಗಿನ ಪಟ್ಟಿಯು 1980–2018 ಅವಧಿಯಲ್ಲಿನ ಮುಖ್ಯ ಆರ್ಥಿಕ ಸೂಚಕಗಳನ್ನು ತೋರಿಸುತ್ತದೆ. 5% ಗಿಂತ ಕೆಳಗಿರುವ ಹಣದುಬ್ಬರವು ಹಸಿರು ಬಣ್ಣದಲ್ಲಿದೆ.[೫೭][೫೮]
ವರ್ಷ | ಜಿಡಿಪಿ
(ಬಿಲಿ. ಪಿಪಿಪಿ ಡಾಲರ್ಗಳಲ್ಲಿ) |
ತಲಾವಾರು ಜಿಡಿಪಿ
(ಪಿಪಿಪಿ ಡಾಲರ್ಗಳಲ್ಲಿ) |
ಜಗತ್ತಿನ ಪಾಲು
(ಜಿಡಿಪಿ ಪಿಪಿಪಿ % ನಲ್ಲಿ) |
ಜಿಡಿಪಿ ಬೆಳವಣಿಗೆ
(ವಾಸ್ತವಿಕ) |
ಹಣದುಬ್ಬರದ ದರ
(ಪ್ರತಿಶತದಲ್ಲಿ) |
ಸರ್ಕಾರದ ಸಾಲ
(ಜಿಡಿಪಿಯ ಪ್ರತಿಶತವಾಗಿ) |
---|---|---|---|---|---|---|
1980 | 382.0 | 557 | 2.89 % | 5.3 % | 11.3 % | n/a |
1981 | 442.7 | 632 | 3.01 % | 6.0 % | 12.7 % | n/a |
1982 | 486.5 | 680 | 3.11 % | 3.5 % | 7.7 % | n/a |
1983 | 542.6 | 742 | 3.25 % | 7.3 % | 12.6 % | n/a |
1984 | 583.3 | 781 | 3.23 % | 3.8 % | 6.5 % | n/a |
1985 | 633.6 | 830 | 3.29 % | 5.3 % | 6.3 % | n/a |
1986 | 677.3 | 869 | 3.33 % | 4.8 % | 8.9 % | n/a |
1987 | 722.1 | 907 | 3.33 % | 4.0 % | 9.1 % | n/a |
1988 | 819.3 | 1,007 | 3.49 % | 9.6 % | 7.2 % | n/a |
1989 | 901.8 | 1,086 | 3.57 % | 5.9 % | 4.6 % | n/a |
1990 | 986.9 | 1,164 | 3.62 % | 5.5 % | 11.2 % | n/a |
1991 | 1,030.6 | 1,193 | 3.57 % | 1.1 % | 13.5 % | 75.3 % |
1992 | 1,111.8 | 1,261 | 3.38 % | 5.5 % | 9.9 % | 77.4 % |
1993 | 1,192.4 | 1,323 | 3.48 % | 4.8 % | 7.3 % | 77.0 % |
1994 | 1,298.8 | 1,413 | 3.60 % | 6.7 % | 10.3 % | 73.5 % |
1995 | 1,426.3 | 1,522 | 3.74 % | 7.6 % | 10.0 % | 69.7 % |
1996 | 1,562.1 | 1,636 | 3.87 % | 7.6 % | 9.4 % | 66.0 % |
1997 | 1,653.1 | 1,698 | 3.87 % | 4.1 % | 6.8 % | 67.8 % |
1998 | 1,774.4 | 1,789 | 4.00 % | 6.2 % | 13.1 % | 68.1 % |
1999 | 1,954.0 | 1,935 | 4.19 % | 8.5 % | 5.7 % | 70.0 % |
2000 | 2,077.9 | 2,018 | 4.16 % | 4.0 % | 5.6 % | 73.6 % |
2001 | 2,230.4 | 2,130 | 4.26 % | 4.9 % | 4.3 % | 78.7 % |
2002 | 2,353.1 | 2,210 | 4.30 % | 3.9 % | 4.0 % | 82.9 % |
2003 | 2,590.7 | 2,395 | 4.46 % | 7.9 % | 3.9 % | 84.2 % |
2004 | 2,870.8 | 2,612 | 4.58 % | 7.8 % | 3.8 % | 83.3 % |
2005 | 3,238.3 | 2,901 | 4.77 % | 9.3 % | 4.4 % | 80.9 % |
2006 | 3,647.0 | 3,218 | 4.95 % | 9.3 % | 6.7 % | 77.1 % |
2007 | 4,111.1 | 3,574 | 5.16 % | 9.8 % | 6.2 % | 74.0 % |
2008 | 4,354.8 | 3,731 | 5.21 % | 3.9 % | 9.1 % | 74.5 % |
2009 | 4,759.9 | 4,020 | 5.68 % | 8.5 % | 11.0 % | 72.5 % |
2010 | 5,312.4 | 4,425 | 5.95 % | 10.3 % | 9.5 % | 67.5 % |
2011 | 5,782.0 | 4,750 | 6.09 % | 6.6 % | 9.5 % | 69.6 % |
2012 | 6,214.5 | 5,037 | 6.23 % | 5.5 % | 10.0 % | 69.1 % |
2013 | 6,727.3 | 5,383 | 6.41 % | 6.4 % | 9.4 % | 68.5 % |
2014 | 7,362.5 | 5,814 | 6.65 % | 7.4 % | 5.8 % | 67.8 % |
2015 | 8,036.3 | 6,264 | 6.94 % | 8.0 % | 4.9 % | 69.9 % |
2016 | 8,787.9 | 6,761 | 7.27 % | 8.2 % | 4.5 % | 69.0 % |
2017 | 9,596.8 | 7,287 | 7.52 % | 7.2 % | 3.6 % | 69.8 % |
2018 | 10,505.2 | 7,874 | 7.77 % | 7.1 % | 3.5 % | 69.8 % |
ಐತಿಹಾಸಿಕವಾಗಿ, ಭಾರತವು ತನ್ನ ಅರ್ಥವ್ಯವಸ್ಥೆ ಮತ್ತು ಜಿಡಿಪಿಯನ್ನು ಮೂರು ವಲಯಗಳಲ್ಲಿ ವರ್ಗೀಕರಿಸಿ ಅನುಸರಿಸಿದೆ: ಕೃಷಿ, ಕೈಗಾರಿಕೆ, ಮತ್ತು ಸೇವೆಗಳು. ಕೃಷಿಯಲ್ಲಿ ಬೆಳೆಗಳು, ತೋಟಗಾರಿಕೆ, ಹಾಲು ಹಾಗೂ ಪಶು ಸಂಗೋಪನೆ, ಜಲಚರ ಸಾಕಣೆ, ಮೀನುಗಾರಿಕೆ, ರೇಷ್ಮೆಕೃಷಿ, ಹಕ್ಕಿ ಸಾಕಣೆ, ಅರಣ್ಯ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ಸೇರಿವೆ. ಕೈಗಾರಿಕೆಯಲ್ಲಿ ವಿವಿಧ ಉತ್ಪಾದನಾ ಉಪವಲಯಗಳು ಸೇರಿವೆ. ಸೇವಾ ವಲಯದ ಭಾರತೀಯ ವ್ಯಾಖ್ಯಾನದಲ್ಲಿ ನಿರ್ಮಾಣ, ಚಿಲ್ಲರೆ ವ್ಯಾಪಾರ, ಸಾಫ಼್ಟ್ವೇರ್, ಐಟಿ, ಸಂಪರ್ಕವ್ಯವಸ್ಥೆ, ಆತಿಥ್ಯ, ಮೂಲಸೌಕರ್ಯ ಕಾರ್ಯಗಳು, ಶಿಕ್ಷಣ, ಆರೋಗ್ಯ ಆರೈಕೆ, ಬ್ಯಾಂಕಿಂಗ್ ಹಾಗೂ ವಿಮೆ, ಮತ್ತು ಅನೇಕ ಇತರ ಆರ್ಥಿಕ ಚಟುವಟಿಕೆಗಳು ಸೇರಿವೆ.[೬೦][೬೧]
ಕೃಷಿ ಮತ್ತು ಅರಣ್ಯ ಕೃಷಿ, ಲಾಗಿಂಗ್ ಮತ್ತು ಮೀನುಗಾರಿಕೆಯಂತಹ ಸಂಬಂಧಿತ ವಲಯಗಳು ಜಿಡಿಪಿಯ 17% ರಷ್ಟನ್ನು ರೂಪಿಸುತ್ತವೆ. ಈ ವಲಯವು ೨೦೧೪ರಲ್ಲಿ ತನ್ನ ಒಟ್ಟು ಕಾರ್ಯಪಡೆಯ 49% ಜನರಿಗೆ ಉದ್ಯೋಗ ನೀಡಿತ್ತು.[೬೨] ೨೦೧೬ರಲ್ಲಿ ಕೃಷಿಯು ಜಿಡಿಪಿಯ 23% ರಷ್ಟನ್ನು ರೂಪಿಸಿತ್ತು, ಮತ್ತು ದೇಶದ ಒಟ್ಟು ಕಾರ್ಯಪಡೆಯ 59% ಜನರಿಗೆ ಉದ್ಯೋಗ ನೀಡಿತ್ತು.[೬೩] ಭಾರತದ ಅರ್ಥವ್ಯವಸ್ಥೆಯು ವೈವಿಧ್ಯಗೊಂಡು ಬೆಳೆದಂತೆ, ೧೯೫೧ರಿಂದ ೨೦೧೧ರ ವರೆಗೆ ಜಿಡಿಪಿಗೆ ಕೃಷಿಯ ಕೊಡುಗೆ ಸ್ಥಿರವಾಗಿ ಇಳಿದಿದೆ. ಆದರೆ ಇದು ಈಗಲೂ ದೇಶದ ಅತಿ ದೊಡ್ಡ ಉದ್ಯೋಗ ಮೂಲ ಮತ್ತು ದೇಶದ ಒಟ್ಟಾರೆ ಸಮಾಜಾರ್ಥಿಕ ಬೆಳವಣಿಗೆಯ ಗಣನೀಯ ಅಂಶವಾಗಿದೆ.[೬೪] ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿ ಮೇಲೆ ಇಡಲಾದ ವಿಶೇಷ ಒತ್ತು ಮತ್ತು ನೀರಾವರಿ, ತಂತ್ರಜ್ಞಾನದಲ್ಲಿ ಸ್ಥಿರವಾದ ಸುಧಾರಣೆಗಳು, ಆಧುನಿಕ ಕೃಷಿ ಅಭ್ಯಾಸಗಳ ಅನ್ವಯ ಮತ್ತು ಹಸಿರು ಕ್ರಾಂತಿಯ ಕಾಲದಿಂದ ಕೃಷಿ ಸಾಲ ಹಾಗೂ ಸಬ್ಸಿಡಿಗಳನ್ನು ಒದಗಿಸಿದ ಕಾರಣದಿಂದ, ಪ್ರತಿ ಘಟಕ ಪ್ರದೇಶದಲ್ಲಿ ಎಲ್ಲ ಬೆಳೆಗಳ ಇಳುವರಿಯು ೧೯೫೦ರಿಂದ ಹೆಚ್ಚಾಗಿದೆ. ಆದರೆ ಅಂತರರಾಷ್ಟ್ರೀಯ ಇಳುವರಿಗೆ ಹೋಲಿಸಿದರೆ ಭಾರತದಲ್ಲಿ ಸರಾಸರಿ ಇಳುವರಿಯು ಸಾಮಾನ್ಯವಾಗಿ ವಿಶ್ವದಲ್ಲಿನ ಅತಿ ಹೆಚ್ಚು ಸರಾಸರಿ ಇಳುವರಿಯ 30% ರಿಂದ 50% ನಷ್ಟಿದೆ ಎಂದು ಬಹಿರಂಗಗೊಳ್ಳುತ್ತದೆ.[೬೫] ಭಾರತೀಯ ಕೃಷಿಗೆ ಪ್ರಧಾನವಾಗಿ ಕೊಡುಗೆ ನೀಡುವ ರಾಜ್ಯಗಳೆಂದರೆ ಉತ್ತರ ಪ್ರದೇಶ, ಪಂಜಾಬ್, ಹರಿಯಾಣಾ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ಬಿಹಾರ್, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಹಾರಾಷ್ಟ್ರ.
ಭಾರತವು ವಾರ್ಷಿಕವಾಗಿ ಸರಾಸರಿ 1208 ಮಿ.ಮಿ ನಷ್ಟು ಮಳೆಯನ್ನು ಮತ್ತು ಒಟ್ಟು 4000 ಬಿಲಿಯನ್ ಘನ ಮೀಟರ್ನಷ್ಟು ಅವಕ್ಷೇಪನವನ್ನು ಪಡೆಯುತ್ತದೆ. ಮೇಲ್ಮೈ ಮತ್ತು ಅಂತರ್ಜಲ ಸೇರಿದಂತೆ ಒಟ್ಟು ಬಳಸಬಲ್ಲ ಜಲ ಸಂಪನ್ಮೂಲಗಳು 1123 ಬಿಲಿಯನ್ ಘನ ಮೀಟರ್ನಷ್ಟಿವೆ.[೬೭] ಭೂ ಪ್ರದೇಶದ 546,820 ಚದರ ಕಿ.ಮಿ ಅಥವಾ ಒಟ್ಟು ಕೃಷಿ ಪ್ರದೇಶದ ೩೯% ನಷ್ಟು ನೀರಾವರಿ ಪಡೆದಿದೆ.[೬೮] ಭಾರತದ ಒಳನಾಡು ಜಲ ಸಂಪನ್ಮೂಲಗಳು ಮತ್ತು ಕಡಲ ಸಂಪನ್ಮೂಲಗಳು ಮೀನುಗಾರಿಕಾ ವಲಯದಲ್ಲಿ ಸುಮಾರು ಆರು ಮಿಲಿಯನ್ ಜನರಿಗೆ ಉದ್ಯೋಗವನ್ನು ನೀಡುತ್ತವೆ. ೨೦೧೦ರಲ್ಲಿ, ಭಾರತವು ವಿಶ್ವದ ಆರನೇ ಅತಿ ದೊಡ್ಡ ಮೀನುಗಾರಿಕಾ ಉದ್ಯಮವನ್ನು ಹೊಂದಿತ್ತು.[೬೯]
ಭಾರತವು ಹಾಲು, ಸೆಣಬು ಮತ್ತು ದ್ವಿದಳಧಾನ್ಯಗಳ ಅತಿ ದೊಡ್ಡ ಉತ್ಪಾದಕವಾಗಿದೆ ಮತ್ತು ವಿಶ್ವದ ಎರಡನೇ ಅತಿ ದೊಡ್ಡ ಜಾನುವಾರು ಸಮೂಹವನ್ನು (೨೦೧೧ರಲ್ಲಿ ೧೭೦ ದಶಲಕ್ಷ ಪ್ರಾಣಿಗಳು) ಹೊಂದಿದೆ.[೭೦] ಭಾರತವು ಅಕ್ಕಿ, ಗೋಧಿ, ಕಬ್ಬು, ಹತ್ತಿ ಮತ್ತು ಕಡಲೇಕಾಯಿಯ ಎರಡನೇ ಅತಿ ದೊಡ್ಡ ಉತ್ಪಾದಕವಾಗಿದೆ, ಜೊತೆಗೆ ಹಣ್ಣು ಮತ್ತು ತರಕಾರಿಗಳ ಎರಡನೇ ಅತಿ ದೊಡ್ಡ ಉತ್ಪಾದಕವಾಗಿದೆ, ಮತ್ತು ವಿಶ್ವದ ಹಣ್ಣು ಹಾಗೂ ತರಕಾರಿ ಉತ್ಪಾದನೆಯ ೧೦.೯% ಹಾಗೂ ೮.೬% ನಷ್ಟನ್ನು ರೂಪಿಸುತ್ತದೆ. ಭಾರತವು ರೇಷ್ಮೆಯ ಎರಡನೇ ಅತಿ ದೊಡ್ಡ ಉತ್ಪಾದಕ (೨೦೦೫ರಲ್ಲಿ ೭೭,೦೦೦ ಟನ್ನುಗಳು) ಮತ್ತು ಅತಿ ದೊಡ್ಡ ಗ್ರಾಹಕವಾಗಿದೆ.[೭೧] ಭಾರತವು ಗೋಡಂಬಿ ಬೀಜಗಳು ಮತ್ತು ಗೋಡಂಬಿ ಕರಟ ದ್ರವದ ಅತಿ ದೊಡ್ಡ ರಫ್ತುದಾರವಾಗಿದೆ. ೨೦೧೧-೧೨ರಲ್ಲಿ ಗೋಡಂಬಿ ಬೀಜಗಳಿಂದ ₹4,390 ಕೊಟಿಯಷ್ಟು ವಿದೇಶಿ ಹಣವನ್ನು ಸಂಪಾದಿಸಲಾಯಿತು. ಕೇರಳದ ಕೊಲ್ಲಮ್ನಲ್ಲಿ ಸುಮಾರು ೬೦೦ ಗೋಡಂಬಿ ಸಂಸ್ಕರಣಾ ಘಟಕಗಳಿವೆ.[೭೨] ಭಾರತದ ಆಹಾರಧಾನ್ಯ ಉತ್ಪಾದನೆಯು ೨೦೧೫-೧೬ರಲ್ಲಿ ಸುಮಾರು ೨೫೨ ದಶಲಕ್ಷ ಟನ್ನುಗಳಷ್ಟಿತ್ತು.[೭೩] ಭಾರತವು ಬಾಸ್ಮತಿ ಅಕ್ಕಿ, ಗೋಧಿ, ಧಾನ್ಯಗಳು, ಸಂಬಾರ ಪದಾರ್ಥಗಳು, ತಾಜಾ ಹಣ್ಣುಗಳು, ಒಣಫಲಗಳು, ಎಮ್ಮೆ ಮಾಂಸ, ಹತ್ತಿ, ಚಹಾ, ಕಾಫಿ ಮತ್ತು ಇತರ ವಾಣಿಜ್ಯ ಬೆಳೆಗಳಂತಹ ಹಲವಾರು ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ, ವಿಶೇಷವಾಗಿ ಮಧ್ಯಪ್ರಾಚ್ಯ, ಆಗ್ನೇಯ ಹಾಗೂ ಪೂರ್ವ ಏಷ್ಯಾದ ದೇಶಗಳಿಗೆ. ಭಾರತದ ವಿದೇಶಿ ಗಳಿಕೆಯ ಸುಮಾರು ೧೦ ಪ್ರತಿಶತ ಈ ವ್ಯಾಪಾರದಿಂದ ಬರುತ್ತದೆ.[೭೪]
ಸುಮಾರು 1530000 ಚದರ ಕಿ.ಮಿ. ನೊಂದಿಗೆ, ಅಮೇರಿಕದ ನಂತರ ಭಾರತವು ಕೃಷಿಯೋಗ್ಯ ಭೂಮಿಯ ಎರಡನೇ ಅತಿ ದೊಡ್ಡ ಪ್ರಮಾಣವನ್ನು ಹೊಂದಿದೆ ಮತ್ತು ಒಟ್ಟು ಭೂಮಿಯ 52% ನಷ್ಟು ಕೃಷಿ ಮಾಡಲ್ಪಟ್ಟಿದೆ. ದೇಶದ ಒಟ್ಟು ಭೂಪ್ರದೇಶವು ಚೈನಾ ಅಥವಾ ಅಮೇರಿಕದ ಮೂರನೇ ಒಂದು ಭಾಗಕ್ಕಿಂತ ಕೇವಲ ಸ್ವಲ್ಪ ಹೆಚ್ಚಿದೆಯಾದರೂ, ಭಾರತದ ಕೃಷಿಯೋಗ್ಯ ಭೂಮಿಯು ಅಮೇರಿಕಕ್ಕಿಂತ ಸ್ವಲ್ಪಮಟ್ಟಿಗೆ ಕಡಿಮೆಯಿದೆ, ಮತ್ತು ಚೈನಾದಕ್ಕಿಂತ ಸ್ವಲ್ಪಮಟ್ಟಿಗೆ ಹೆಚ್ಚಿದೆ. ಆದರೆ, ಕೃಷಿ ಹುಟ್ಟುವಳಿಯು ಅದರ ಸಾಮಾರ್ಥ್ಯದ ಬಹಳ ಹಿಂದೆ ಬಿದ್ದಿದೆ.[೭೫] ಭಾರತದ ಅಲ್ಪ ಉತ್ಪನ್ನತೆಯು ಹಲವಾರು ಅಂಶಗಳ ಪರಿಣಾಮವಾಗಿದೆ. ವಿಶ್ವ ಬ್ಯಾಂಕ್ ಪ್ರಕಾರ, ಭಾರತದ ಹೆಚ್ಚಿನ ಕೃಷಿ ಸಹಾಯಧನಗಳು ರೈತರು ಬೆಳೆಯುತ್ತಿರುವುದನ್ನು ವಿರೂಪಗೊಳಿಸುತ್ತಿವೆ ಮತ್ತು ಉತ್ಪಾದಕತಾ ವರ್ಧಕ ಹೂಡಿಕೆಯನ್ನು ಅಡ್ಡಿಪಡಿಸುತ್ತಿವೆ. ಕೃಷಿಯ ಅತಿಯಾದ ನಿಯಂತ್ರಣವು ವೆಚ್ಚಗಳು, ಬೆಲೆಯ ಅಪಾಯಗಳು ಮತ್ತು ಅನಿಶ್ಚಿತತೆಯನ್ನು ಹೆಚ್ಚಿಸಿದೆ, ಮತ್ತು ಕಾರ್ಮಿಕರು, ಕೃಷಿಕ್ಷೇತ್ರ ಹಾಗೂ ಸಾಲದ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪವು ಮಾರುಕಟ್ಟೆಗೆ ಹಾನಿಮಾಡುತ್ತಿದೆ. ಗ್ರಾಮೀಣ ರಸ್ತೆಗಳು, ವಿದ್ಯುಚ್ಛಕ್ತಿ, ಬಂದರುಗಳು, ಆಹಾರ ಸಂಗ್ರಹ, ಚಿಲ್ಲರೆ ಮಾರುಕಟ್ಟೆಗಳು ಮತ್ತು ಸೇವೆಗಳಂತಹ ಮೂಲಸೌಕರ್ಯಗಳು ಸಾಕಾಗದಷ್ಟು ಪ್ರಮಾಣದಲ್ಲಿವೆ.[೭೬] ಭೂ ಹಿಡುವಳಿಗಳ ಸರಾಸರಿ ಗಾತ್ರವು ಬಹಳ ಚಿಕ್ಕದಾಗಿದ್ದು, 70% ಹಿಡುವಳಿಗಳು ಗಾತ್ರದಲ್ಲಿ ಒಂದು ಹೆಕ್ಟೇರ್ಗಿಂತ (2.5 ಎಕ್ರೆ) ಕಡಿಮೆಯಿವೆ.[೭೭] ೨೦೧೬ರ ವೇಳೆಗೆ ಒಟ್ಟು ಬೇಸಾಯಯೋಗ್ಯ ಭೂಮಿಯ ಕೇವಲ 46% ನೀರಿನಿಂದ ಒದಗಿಸಲ್ಪಟ್ಟಿತ್ತು ಎಂಬ ವಾಸ್ತವಾಂಶದಿಂದ ಬಹಿರಂಗವಾದಂತೆ, ನೀರಾವರಿ ಸೌಕರ್ಯಗಳು ಅಪರ್ಯಾಪ್ತವಾಗಿವೆ.[೭೮] ಪರಿಣಾಮವಾಗಿ ರೈತರು ಈಗಲೂ ಮಳೆಯನ್ನು ಅವಲಂಬಿಸಿದ್ದಾರೆ, ನಿರ್ದಿಷ್ಟವಾಗಿ ಮಾನ್ಸೂನ್ ಋತುವನ್ನು. ಇದು ಹಲವುವೇಳೆ ಸಮತೆ ಇಲ್ಲದ್ದಾಗಿದ್ದು ದೇಶದಾದ್ಯಂತ ಅಸಮಾನವಾಗಿ ಹಂಚಿಕೆಯಾಗುತ್ತದೆ.[೭೯] ಹೆಚ್ಚುವರಿ ಎರಡು ಕೋಟಿ ಹೆಕ್ಟೇರು ಭೂಮಿಯನ್ನು (೫ ಕೋಟಿ ಎಕ್ರೆ) ನೀರಾವರಿಯಡಿ ತರುವ ಪ್ರಯತ್ನವಾಗಿ, ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (ಎಐಬಿಪಿ) (ಇದಕ್ಕೆ ಕೇಂದ್ರ ಬಜೆಟ್ನಲ್ಲಿ ₹80,000 ಕೋಟಿ ಒದಗಿಸಲಾಗಿತ್ತು) ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಯತ್ನಿಸಲಾಗಿದೆ.[೮೦] ಆಹಾರ ಸಂಗ್ರಹ ಮತ್ತು ವಿತರಣಾ ಮೂಲಸೌಕರ್ಯದ ಅಭಾವದ ಕಾರಣದಿಂದಲೂ ಕೃಷಿ ಆದಾಯಗಳಿಗೆ ಅಡ್ಡಿಯಾಗಿದೆ; ಭಾರತದ ಕೃಷಿ ಉತ್ಪಾದನೆಯ ಮೂರನೇ ಒಂದು ಭಾಗವು ಹಾಳಾಗುವುದರಿಂದ ನಷ್ಟವಾಗಿ ಹೋಗುತ್ತಿದೆ.[೮೧]
ಕೈಗಾರಿಕೆಯು ಜಿಡಿಪಿಯ 26% ನಷ್ಟು ರೂಪಿಸುತ್ತದೆ ಮತ್ತು ಒಟ್ಟು ಕಾರ್ಯಪಡೆಯ 22% ಗೆ ಉದ್ಯೋಗ ನೀಡುತ್ತದೆ.[೮೨] ವಿಶ್ವ ಬ್ಯಾಂಕ್ ಪ್ರಕಾರ, ೨೦೧೫ರಲ್ಲಿ ಭಾರತದ ಕೈಗಾರಿಕಾ ಉತ್ಪಾದನಾ ಜಿಡಿಪಿ ಹುಟ್ಟುವಳಿಯು ಪ್ರಸ್ತುತ ಅಮೇರಿಕನ್ ಡಾಲರ್ ಆಧಾರದಲ್ಲಿ ವಿಶ್ವದಲ್ಲಿ ಆರನೇ ಅತಿ ದೊಡ್ಡದಾಗಿತ್ತು ($559 ಬಿಲಿಯನ್),[೮೩] ಮತ್ತು ಹಣದುಬ್ಬರಕ್ಕೆ ಹೊಂದಿಸಿದ ಸ್ಥಿರ ೨೦೦೫ರ ಅಮೇರಿಕನ್ ಡಾಲರ್ ಆಧಾರದಲ್ಲಿ ೯ನೇ ಅತಿ ದೊಡ್ಡದಾಗಿತ್ತು ($197.1 ಬಿಲಿಯನ್).[೮೪] ೧೯೯೧ರ ಆರ್ಥಿಕ ಸುಧಾರಣೆಗಳ ಕಾರಣದಿಂದ ಕೈಗಾರಿಕೆ ವಲಯವು ಗಣನೀಯ ಬದಲಾವಣೆಗಳಿಗೆ ಒಳಗಾಯಿತು. ಇದು ಆಮದು ನಿರ್ಬಂಧಗಳನ್ನು ತೆಗೆದುಹಾಕಿತು, ವಿದೇಶೀ ಪೈಪೋಟಿಯನ್ನು ತಂದಿತು, ಕೆಲವು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಕೈಗಾರಿಕೆಗಳ ಖಾಸಗೀಕರಣಕ್ಕೆ ಕಾರಣವಾಯಿತು, ವಿದೇಶೀ ನೇರ ಬಂಡವಾಳ (ಎಫ಼್ಡಿಐ) ವ್ಯವಸ್ಥೆಯನ್ನು ಉದಾರೀಕರಿಸಿತು,[೮೫] ಮೂಲಸೌಕರ್ಯವನ್ನು ಸುಧಾರಿಸಿತು ಮತ್ತು ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ ಉತ್ಪಾದನೆಯಲ್ಲಿ ವಿಸ್ತರಣೆಗೆ ಕಾರಣವಾಯಿತು.[೮೬] ಉದಾರೀಕರಣದ ನಂತರ, ಭಾರತದ ಖಾಸಗಿ ವಲಯವು ಹೆಚ್ಚು ಅಗ್ಗದ ಚೈನಾದ ಆಮದುಗಳ ಬೆದರಿಕೆ ಸೇರಿದಂತೆ, ಹೆಚ್ಚಿನ ದೇಶೀಯ ಮತ್ತು ವಿದೇಶೀ ಪೈಪೋಟಿಯನ್ನು ಎದುರಿಸಿತು. ಆಗಿನಿಂದ ಭಾರತವು ವೆಚ್ಚಗಳನ್ನು ಕುಗ್ಗಿಸಿ, ನಿರ್ವಹಣೆಯನ್ನು ಉತ್ತಮಗೊಳಿಸಿ, ಮತ್ತು ಅಗ್ಗದ ಕಾರ್ಮಿಕರು ಮತ್ತು ಹೊಸ ತಂತ್ರಜ್ಞಾನದ ಮೇಲೆ ಅವಲಂಬಿಸುವ ಮೂಲಕ ಬದಲಾವಣೆಯನ್ನು ನಿಭಾಯಿಸಿದೆ. ಆದರೆ, ಇದು ಉದ್ಯೋಗ ಸೃಷ್ಟಿಯನ್ನೂ ಕುಗ್ಗಿಸಿದೆ, ಹಿಂದೆ ಶ್ರಮಿಕ ಪ್ರಧಾನ ಪ್ರಕ್ರಿಯೆಗಳ ಮೇಲೆ ಅವಲಂಬಿಸಿದ್ದ ಸಣ್ಣ ಉತ್ಪಾದಕರಲ್ಲೂ.[೮೭]
೧.೩ ದಶಲಕ್ಷಕ್ಕಿಂತ ಹೆಚ್ಚು ಸಕ್ರಿಯ ಸಿಬ್ಬಂದಿಯ ಬಲದೊಂದಿಗೆ, ಭಾರತವು ಮೂರನೇ ಅತಿ ದೊಡ್ಡ ಸೇನಾ ಪಡೆ ಮತ್ತು ಅತಿ ದೊಡ್ಡ ಸ್ವಯಂಸೇವಕ ಸೇನೆಯನ್ನು ಹೊಂದಿದೆ. ಭಾರತೀಯ ಸೇನೆಗೆ ಹಣಕಾಸು ವರ್ಷ 2019-20ರಲ್ಲಿ ಮಂಜೂರು ಮಾಡಲಾದ ಒಟ್ಟು ಬಂಡವಾಳವು ₹3.01 ಲಕ್ಷ ಕೋಟಿಯಾಗಿತ್ತು.[೮೮] ೨೦೨೨ರ ವೇಳೆಗೆ ರಕ್ಷಣಾ ವೆಚ್ಚವು ಅಮೇರಿಕನ್ $62 ಬಿಲಿಯನ್ಗೆ ಏರುವುದು ಎಂದು ನಿರೀಕ್ಷಿಸಲಾಗಿದೆ.[೮೯]
ಚೀನಾ ಮತ್ತು ಅಮೇರಿಕದ ನಂತರ ಭಾರತದ ಪ್ರಾಥಮಿಕ ಶಕ್ತಿಯ ಬಳಕೆಯು ೨೦೧೫ ನೇ ವರ್ಷದಲ್ಲಿ 5.3% ಜಾಗತಿಕ ಪಾಲಿನೊಂದಿಗೆ ಮೂರನೇ ಅತಿ ದೊಡ್ಡದಾಗಿತ್ತು.[೯೦] ಕಲ್ಲಿದ್ದಲು ಮತ್ತು ಕಚ್ಚಾತೈಲ ಎರಡೂ ಸೇರಿ ಭಾರತದ ಪ್ರಾಥಮಿಕ ಶಕ್ತಿ ಬಳಕೆಯ 85% ರಷ್ಟನ್ನು ರೂಪಿಸುತ್ತವೆ. ಭಾರತದ ತೈಲ ಸಂಪನ್ಮೂಲಗಳು ದೇಶದ ತೈಲ ಬೇಡಿಕೆಯ 25% ರಷ್ಟನ್ನು ಪೂರೈಸುತ್ತವೆ.[೯೧][೯೨] ಎಪ್ರಿಲ್ ೨೦೧೫ರ ವೇಳೆಗೆ ಭಾರತದ ಒಟ್ಟು ಸಾಬೀತಾದ ಕಚ್ಚಾತೈಲ ಸಂಪನ್ಮೂಲಗಳು 763.476 ದಶಲಕ್ಷ ಮೆಟ್ರಿಕ್ ಟನ್ನಷ್ಟಿದ್ದವು, ಮತ್ತು ಅನಿಲ ಸಂಪನ್ಮೂಲಗಳು ೧,೪೯೦ ಬಿಲಿಯನ್ ಘನ ಮೀಟರ್ನಷ್ಟು ಮುಟ್ಟಿದವು.[೯೩] ತೈಲ ಮತ್ತು ನೈಸರ್ಗಿಕ ಅನಿಲ ಪ್ರದೇಶಗಳು ಕಡಲಕರೆಯಾಚೆಗೆ ಬಾಂಬೆ ಹೈನಲ್ಲಿ, ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ಹಾಗೂ ಕಾವೇರಿ ನದಿಮುಖಜ ಭೂಮಿಯಲ್ಲಿ ಸ್ಥಿತವಾಗಿವೆ ಮತ್ತು ಕಡಲಕರೆಯಲ್ಲಿ ಮುಖ್ಯವಾಗಿ ಅಸ್ಸಾಂ, ಗುಜರಾತ್ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಸ್ಥಿತವಾಗಿವೆ. ಭಾರತವು ತೈಲದ ನಾಲ್ಕನೇ ಅತಿ ದೊಡ್ಡ ಬಳಕೆದಾರವಾಗಿದೆ ಮತ್ತು ನಿವ್ವಳ ತೈಲ ಆಮದುಗಳು ೨೦೧೪-೧೫ರಲ್ಲಿ ಸರಿಸುಮಾರು ಅಮೇರಿಕನ್ ೧೮೨.೦೪ ಬಿಲಿಯನ್ನಷ್ಟಿದ್ದವು.[೯೩] ಇದು ದೇಶದ ಚಾಲ್ತಿ ಖಾತೆಯ ಕೊರತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಹೊಂದಿತ್ತು. ಭಾರತದಲ್ಲಿ ಪೆಟ್ರೋಲಿಯಂ ಕೈಗಾರಿಕೆಯು ಬಹುತೇಕವಾಗಿ ಸಾರ್ವಜನಿಕ ವಲಯದ ಕಂಪನಿಗಳನ್ನು ಹೊಂದಿದೆ, ಉದಾ. ಒಎನ್ಜಿಸಿ, ಎಚ್ಪಿಸಿಎಲ್, ಬಿಪಿಸಿಎಲ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್. ತೈಲ ವಲಯದಲ್ಲಿ ವಿಶ್ವದ ಅತಿ ದೊಡ್ಡ ತೈಲ ಸಂಸ್ಕರಣಾಗಾರ ಸಂಕೀರ್ಣವನ್ನು ನಿರ್ವಹಿಸುವ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನಂತಹ ಕೆಲವು ಪ್ರಮುಖ ಖಾಸಗಿ ಭಾರತೀಯ ಕಂಪನಿಗಳಿವೆ.[೯೪]
೨೦೧೩ರಲ್ಲಿ ಭಾರತವು ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ 4.8% ಜಾಗತಿಕ ಪಾಲಿನೊಂದಿಗೆ ಜಪಾನ್ ಮತ್ತು ರಷ್ಯಾಗಳನ್ನು ಮೀರಿಸಿ ವಿಶ್ವದ ಮೂರನೇ ಅತಿ ದೊಡ್ಡ ಉತ್ಪಾದಕವಾಯಿತು.[೯೫] ಕ್ಯಾಲೆಂಡರ್ ವರ್ಷ ೨೦೧೫ರ ಅಂತ್ಯದ ವೇಳೆ, ಭಾರತವು ವಿದ್ಯುಚ್ಛಕ್ತಿ ಹೆಚ್ಚುವರಿಯನ್ನು ಹೊಂದಿತ್ತು ಮತ್ತು ಅನೇಕ ವಿದ್ಯುತ್ ಸ್ಥಾವರಗಳು ಬೇಡಿಕೆಯ ಅಭಾವದ ಕಾರಣ ನಿಷ್ಕ್ರಿಯವಾಗಿದ್ದವು.[೯೬] ಮೇ ೨೦೧೬ರ ವೇಳೆಗೆ, ಸೌಲಭ್ಯ ವಿದ್ಯುಚ್ಛಕ್ತಿ ವಲಯವು ೩೦೩ ಗೀಗಾವಾಟ್ಗಳ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿತ್ತು. ಇದರಲ್ಲಿ ಉಷ್ಣ ವಿದ್ಯುತ್ 69.8% ರಷ್ಟು, ಜಲವಿದ್ಯುತ್ 15.2% ನಷ್ಟು, ನವೀಕರಿಸಬಹುದಾದ ಶಕ್ತಿ 13.0% ನಷ್ಟು, ಮತ್ತು ಬೈಜಿಕ ವಿದ್ಯುತ್ 2.1% ನಷ್ಟು ಕೊಡುಗೆ ನೀಡಿತ್ತು.[೯೭] ಭಾರತವು ತನ್ನ ಬಹುತೇಕ ದೇಶೀಯ ವಿದ್ಯುಚ್ಛಕ್ತಿ ಬೇಡಿಕೆಯನ್ನು ತನ್ನ ೧೦೬ ಶತಕೋಟಿ ಟನ್ಗಳಷ್ಟಿರುವ ಸಾಬೀತಾದ ಕಲ್ಲಿದ್ದಲು ಸಂಪನ್ಮೂಲಗಳ ಮೂಲಕ ಪೂರೈಸಿಕೊಳ್ಳುತ್ತದೆ.[೯೮] ಭಾರತವು ಸೌರ, ಗಾಳಿ ಮತ್ತು ಜೈವಿಕ ಇಂಧನಗಳಂತಹ (ಜಟ್ರೋಫ಼ಾ, ಕಬ್ಬು) ಗಣನೀಯವಾದ ಭವಿಷ್ಯದ ಸಾಮರ್ಥ್ಯವಿರುವ ಕೆಲವು ಪರ್ಯಾಯ ಶಕ್ತಿಮೂಲಗಳಲ್ಲೂ ಸಂಪದ್ಭರಿತವಾಗಿದೆ. ಭಾರತದ ಕ್ಷೀಣಿಸುತ್ತಿರುವ ಯುರೇನಿಯಮ್ ಸಂಪನ್ಮೂಲಗಳು ಅನೇಕ ವರ್ಷಗಳವರೆಗೆ ದೇಶದಲ್ಲಿ ಬೈಜಿಕ ಶಕ್ತಿಯ ಬೆಳವಣಿಗೆಯನ್ನು ಮಂದವಾಗಿಸಿದವು.[೯೯] ತುಮ್ಮಲಪಲ್ಲೆ ಭೂಪ್ರದೇಶದಲ್ಲಿನ ಇತ್ತೀಚಿನ ಶೋಧನೆಗಳು ವಿಶ್ವಾದ್ಯಂತದ ಅಗ್ರ ೨೦ ನೈಸರ್ಗಿಕ ಯುರೇನಿಯಮ್ ನಿಕ್ಷೇಪಗಳ ಪೈಕಿ ಇರಬಹುದು.[೧೦೦][೧೦೧][೧೦೨] ಇದು ಮತ್ತು ಅಂದಾಜು ೮೪೬,೪೭೭ ಮೆಟ್ರಿಕ್ ಟನ್ಗಳ ಥೋರಿಯಮ್ ನಿಕ್ಷೇಪವು (ವಿಶ್ವದ ನಿಕ್ಷೇಪದ ಸುಮಾರು 25%) ದೀರ್ಘಕಾಲದಲ್ಲಿ ದೇಶದ ಮಹತ್ವಾಕಾಂಕ್ಷಿ ಬೈಜಿಕ ಶಕ್ತಿ ಕಾರ್ಯಕ್ರಮವನ್ನು ಚಾಲನೆ ಮಾಡುವುದು ಎಂದು ನಿರೀಕ್ಷಿಸಲಾಗಿದೆ. ಭಾರತ ಅಮೇರಿಕ ಬೈಜಿಕ ಒಪ್ಪಂದ ಕೂಡ ಭಾರತವು ಇತರ ದೇಶಗಳಿಂದ ಯುರೇನಿಯಮ್ನ್ನು ಆಮದು ಮಾಡಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿದೆ.[೧೦೩]
ಶಿಲ್ಪಶಾಸ್ತ್ರವು (ಎಂಜಿನಿಯರಿಂಗ್) ಜಿಡಿಪಿ ಪ್ರಕಾರ ಭಾರತದ ಕೈಗಾರಿಕಾ ವಲಯದ ಅತಿ ದೊಡ್ಡ ಉಪವಲಯವಾಗಿದೆ ಮತ್ತು ರಫ್ತುಗಳ ಪ್ರಕಾರ ಮೂರನೇ ಅತಿ ದೊಡ್ಡದಾಗಿದೆ.[೧೦೪] ಇದರಲ್ಲಿ ಸಾರಿಗೆ ಉಪಕರಣಗಳು, ಯಂತ್ರೋಪಕರಣಗಳು, ಬಂಡವಾಳ ಸಾಮಗ್ರಿಗಳು, ಪರಿವರ್ತಕಗಳು, ಸ್ವಿಚ್ಗೇರ್, ಕುಲುಮೆಗಳು, ಮತ್ತು ತಿರುಗಾಲಿಗಳ ಎರಕಹೊಯ್ದು ಆಕಾರ ಕೊಡಲ್ಪಟ್ಟ ಭಾಗಗಳು, ಮೋಟಾರು ವಾಹನಗಳು ಮತ್ತು ರೇಲ್ವೆ ಸೇರಿವೆ. ಈ ಉದ್ಯಮವು ಸುಮಾರು ನಾಲ್ಕು ದಶಲಕ್ಷ ಕಾರ್ಮಿಕರಿಗೆ ಉದ್ಯೋಗ ನೀಡುತ್ತದೆ. ಮೌಲವರ್ಧಿತ ಆಧಾರದಲ್ಲಿ, ಭಾರತದ ಶಿಲ್ಪಶಾಸ್ತ್ರ ಉಪವಲಯವು ೨೦೧೩-೧೪ರ ವಿತ್ತೀಯ ವರ್ಷದಲ್ಲಿ $67 ಬಿಲಿಯನ್ ಮೌಲ್ಯದ ಶಿಲ್ಪಶಾಸ್ತ್ರ ಸರಕುಗಳನ್ನು ರಫ್ತುಮಾಡಿತು, ಮತ್ತು ಶಿಲ್ಪಶಾಸ್ತ್ರ ಸರಕುಗಳಿಗೆ ದೇಶೀಯ ಬೇಡಿಕೆಯನ್ನು ಭಾಗಶಃ ಪೂರೈಸಿತು.[೧೦೫]
ಭಾರತದ ಶಿಲ್ಪಶಾಸ್ತ್ರ ಉದ್ಯಮವು ಅದರ ಬೆಳೆಯುತ್ತಿರುವ ಕಾರು, ಮೋಟರ್ಸೈಕಲ್ ಹಾಗೂ ಸ್ಕೂಟರ್ ಉದ್ಯಮ, ಮತ್ತು ಟ್ರ್ಯಾಕ್ಟರ್ನಂತಹ ಉತ್ಪಾದಕತೆ ಯಂತ್ರಸಾಧನಗಳನ್ನು ಒಳಗೊಳ್ಳುತ್ತದೆ. ೨೦೧೧ರಲ್ಲಿ ಭಾರತವು ಸುಮಾರು ೧೮ ದಶಲಕ್ಷ ಪ್ರಯಾಣಿಕ ಹಾಗೂ ಸೌಕರ್ಯ ವಾಹನಗಳನ್ನು ಉತ್ಪಾದಿಸಿ ಜೋಡಿಸಿತು, ಮತ್ತು ಇವುಗಳಲ್ಲಿ ೨.೩ ದಶಲಕ್ಷ ವಾಹನಗಳನ್ನು ರಫ್ತುಮಾಡಿತು.[೧೦೬] ಭಾರತವು ಟ್ರ್ಯಾಕ್ಟರ್ಗಳ ಅತಿ ದೊಡ್ಡ ಉತ್ಪಾದಕ ಮತ್ತು ಅತಿ ದೊಡ್ಡ ಮಾರುಕಟ್ಟೆಯಾಗಿದೆ, ಮತ್ತು ೨೦೧೩ರಲ್ಲಿ ಜಾಗತಿಕ ಟ್ರ್ಯಾಕ್ಟರ್ ಉತ್ಪಾದನೆಯ 29% ನಷ್ಟನ್ನು ರೂಪಿಸಿತ್ತು.[೧೦೬][೧೦೭] ಭಾರತವು ಯಂತ್ರಸಾಧನಗಳ ೧೨ನೇ ಅತಿ ದೊಡ್ಡ ಉತ್ಪಾದಕ ಮತ್ತು ೭ನೇ ಅತಿ ದೊಡ್ಡ ಗ್ರಾಹಕವಾಗಿದೆ.[೧೦೬]
೨೦೧೬ರಲ್ಲಿ ಮೋಟಾರು ವಾಹನ ಉತ್ಪಾದನಾ ಉದ್ಯಮವು $79 ಶತಕೋಟಿಯಷ್ಟು (ಜಿಡಿಪಿಯ 4%) ಕೊಡುಗೆ ನೀಡಿತು ಮತ್ತು ೬.೭೬ ದಶಲಕ್ಷ ಜನರಿಗೆ (ಕಾರ್ಯಪಡೆಯ 2%) ಉದ್ಯೋಗ ನೀಡಿತು.[೧೦೮]
ಭಾರತವು ವಜ್ರಗಳು ಮತ್ತು ರತ್ನಗಳನ್ನು ನಯಗೊಳಿಸುವುದಕ್ಕೆ ಮತ್ತು ಆಭರಣಗಳ ಉತ್ಪಾದನೆಗೆ ಅತಿ ದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ; ಭಾರತವು ಚಿನ್ನದ ಎರಡು ಅತಿ ದೊಡ್ಡ ಬಳಕೆದಾರರಲ್ಲಿಯೂ ಒಂದಾಗಿದೆ.[೧೧೧][೧೧೨] ಕಚ್ಚಾತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ನಂತರ, ಚಿನ್ನ, ಅಮೂಲ್ಯ ಕಲ್ಲುಗಳು, ರತ್ನಗಳು ಹಾಗೂ ಆಭರಣಗಳ ರಫ್ತು ಮತ್ತು ಆಮದು ಭಾರತದ ಜಾಗತಿಕ ವ್ಯಾಪಾರದ ಅತಿ ದೊಡ್ಡ ಭಾಗವನ್ನು ರೂಪಿಸುತ್ತದೆ. ಈ ಉದ್ಯಮವು ಭಾರತದ ಜಿಡಿಪಿಗೆ ಸುಮಾರು 7% ರಷ್ಟು ಕೊಡುಗೆ ನೀಡುತ್ತದೆ, ಮತ್ತು ಭಾರತದ ವಿದೇಶಿ ಹಣ ಗಳಿಕೆಯ ಒಂದು ಪ್ರಮುಖ ಮೂಲವಾಗಿದೆ.[೧೧೩] ರತ್ನಗಳು ಮತ್ತು ಆಭರಣಗಳ ಉದ್ಯಮವು ೨೦೧೭ರಲ್ಲಿ ಮೌಲ್ಯವರ್ಧಿತ ಆಧಾರದ ಮೇಲೆ ಆರ್ಥಿಕ ಹುಟ್ಟುವಳಿಯಲ್ಲಿ $60 ಬಿಲಿಯನ್ನಷ್ಟು ಸೃಷ್ಟಿಸಿತು, ಮತ್ತು ೨೦೨೨ರ ವೇಳೆಗೆ $110 ಬಿಲಿಯನ್ನಷ್ಟಕ್ಕೆ ಬೆಳೆಯುವುದೆಂದು ಅಂದಾಜಿಸಲಾಗಿದೆ.[೧೧೪]
ಭಾರತದಲ್ಲಿ ರತ್ನಗಳ ಮತ್ತು ಆಭರಣಗಳ ಉದ್ಯಮವು ಹಲವು ಸಾವಿರ ವರ್ಷಗಳಿಂದ ಆರ್ಥಿಕವಾಗಿ ಸಕ್ರಿಯವಾಗಿದೆ.[೧೧೫] ೧೮ನೇ ಶತಮಾನದವರೆಗೆ, ಭಾರತವು ವಜ್ರಗಳ ಏಕೈಕ ಪ್ರಮುಖ ವಿಶ್ವಾಸಾರ್ಹ ಮೂಲವಾಗಿತ್ತು.[೧೧೬] ಈಗ ದಕ್ಷಿನ ಆಫ಼್ರಿಕಾ ಮತ್ತು ಆಸ್ಟ್ರೇಲಿಯಾ ವಜ್ರಗಳು ಮತ್ತು ಅಮೂಲ್ಯ ಲೋಹಗಳ ಪ್ರಮುಖ ಮೂಲಗಳಾಗಿವೆ, ಆದರೆ ಎಂಟ್ವರ್ಪ್, ನ್ಯೂ ಯಾರ್ಕ್ ಮತ್ತು ರಾಮಾತ್ ಗಾನ್ ಜೊತೆಗೆ, ಸೂರತ್ ಮತ್ತು ಮುಂಬಯಿಯಂತಹ ಭಾರತದ ನಗರಗಳು ವಿಶ್ವದ ಆಭರಣಗಳ ನಯಗೊಳಿಸುವಿಕೆ, ಕತ್ತರಿಸುವಿಕೆ, ನಿಖರ ನಯಗೆಲಸ, ಪೂರೈಕೆ ಮತ್ತು ವ್ಯಾಪಾರದ ಮುಖ್ಯ ಸ್ಥಳಗಳಾಗಿವೆ. ಇತರ ಕೇಂದ್ರಗಳಂತಿರದೆ, ಭಾರತದಲ್ಲಿನ ರತ್ನಗಳು ಮತ್ತು ಆಭರಣಗಳ ಉದ್ಯಮವು ಮುಖ್ಯವಾಗಿ ಕುಶಲಕರ್ಮಿ ಚಾಲಿತವಾಗಿದೆ; ಈ ವಲಯವು ಕೈ ಚಾಲಿತ, ಬಹಳವಾಗಿ ಹೊಂದಾಣಿಕೆಯಿಲ್ಲದದ್ದಾಗಿದೆ, ಮತ್ತು ಬಹುತೇಕ ಸಂಪೂರ್ಣವಾಗಿ ಕುಟುಂಬ ಸ್ವಾಮ್ಯದ ಕಾರ್ಯಗಳಿಂದ ನಡೆಸಲ್ಪಡುತ್ತದೆ.
ಈ ಉಪವಲಯದ ವಿಶಿಷ್ಟ ಸಾಮರ್ಥ್ಯ ಸಣ್ಣ ವಜ್ರಗಳ (ಒಂದು ಕ್ಯಾರಟ್ಗಿಂತ ಕಡಿಮೆ) ನಿಖರ ಕತ್ತರಿಸುವಿಕೆ, ನಯಗೊಳಿಸುವಿಕೆ ಮತ್ತು ಸಂಸ್ಕರಣದಲ್ಲಿದೆ.[೧೧೬] ಭಾರತವು ಹೆಚ್ಚು ದೊಡ್ಡ ವಜ್ರಗಳು, ಮುತ್ತುಗಳು ಮತ್ತು ಇತರ ಅಮೂಲ್ಯ ಕಲ್ಲುಗಳ ಸಂಸ್ಕರಣಕ್ಕೂ ಮುಖ್ಯ ಸ್ಥಾನವಾಗಿದೆ. ಅಂಕಿಅಂಶಗಳ ಪ್ರಕಾರ, ವಿಶ್ವದಲ್ಲಿನ ಯಾವುದೇ ಆಭರಣದಲ್ಲಿ ಕೂಡಿಸಲಾದ ೧೨ ವಜ್ರಗಳಲ್ಲಿ ೧೧ ನ್ನು ಭಾರತದಲ್ಲಿ ಕತ್ತರಿಸಿ ನಯಗೊಳಿಸಲಾಗಿರುತ್ತದೆ.[೧೧೭] ಭಾರತವು ಚಿನ್ನ ಮತ್ತು ಇತರ ಅಮೂಲ್ಯ ಲೋಹ ಆಧಾರಿತ ಆಭರಣಗಳ ಪ್ರಮುಖ ಸ್ಥಳವೂ ಆಗಿದೆ. ಚಿನ್ನ ಮತ್ತು ಆಭರಣ ಉತ್ಪನ್ನಗಳಿಗೆ ದೇಶೀಯ ಬೇಡಿಕೆಯು ಭಾರತದ ಜಿಡಿಪಿಗೆ ಮತ್ತೊಂದು ಚಾಲಕವಾಗಿದೆ.[೧೧೮]
ಭಾರತದ ಮೂಲಸೌಕರ್ಯ ಮತ್ತು ಸಾರಿಗೆ ವಲಯವು ಅದರ ಜಿಡಿಪಿಗೆ ಸುಮಾರು 5% ನಷ್ಟನ್ನು ಕೊಡುಗೆ ನೀಡುತ್ತದೆ. ೩೧ ಮಾರ್ಚ್ ೨೦೧೫ರ ವೇಳೆಗೆ ಭಾರತವು ೫,೪೭೨,೧೪೪ ಕಿ.ಮಿ. ಗಳಷ್ಟರ ರಸ್ತೆ ಜಾಲವನ್ನು ಹೊಂದಿತ್ತು, ಮತ್ತು ಅಮೇರಿಕದ ನಂತರ ವಿಶ್ವದ ಎರಡನೇ ಅತಿ ದೊಡ್ಡ ರಸ್ತೆ ಜಾಲವಾಗಿದೆ. ಪ್ರತಿ ಚದರ ಕಿ.ಮಿ.ಗೆ ೧.೬೬ ಕಿ.ಮಿ. ನಷ್ಟು ರಸ್ತೆಗಳೊಂದಿಗೆ ಭಾರತದ ರಸ್ತೆ ಜಾಲದ ಪರಿಮಾಣಾತ್ಮಕ ಸಾಂದ್ರತೆಯು ಜಪಾನ್ (೦.೯೧), ಅಮೇರಿಕ (೦.೬೭), ಚೈನಾ (೦.೪೬), ಬ್ರಜ಼ಿಲ್ (೦.೧೮) ಅಥವಾ ರಷ್ಯಾಗಿಂತ (೦.೦೮) ಹೆಚ್ಚಿದೆ.[೧೧೯] ಗುಣಾತ್ಮಕವಾಗಿ, ಭಾರತದ ರಸ್ತೆಗಳು ಆಧುನಿಕ ಹೆದ್ದಾರಿಗಳು ಮತ್ತು ಕಿರಿದಾದ, ನೆಲಗಟ್ಟು ಮಾಡದ ರಸ್ತೆಗಳ ಮಿಶ್ರಣವಾಗಿವೆ, ಮತ್ತು ಇವನ್ನು ಸುಧಾರಿಸಲಾಗುತ್ತಿದೆ.[೧೨೦] ೩೧ ಮಾರ್ಚ್ ೨೦೧೫ರ ವೇಳೆಗೆ, ಭಾರತದ 87.05% ರಷ್ಟು ರಸ್ತೆಗಳನ್ನು ನೆಲಗಟ್ಟು ಮಾಡಲಾಗಿತ್ತು.[೧೧೯] ಜಿ-೨೭ ರಾಷ್ಟ್ರಗಳ ಸಮೂಹದ ಪೈಕಿ, ಪ್ರತಿ ೧೦೦,೦೦೦ ಜನರಿಗೆ ಭಾರತವು ಅತಿ ಕಡಿಮೆ ಕಿಲೊಮೀಟರ್-ದಾರಿ ರಸ್ತೆ ಸಾಂದ್ರತೆಯನ್ನು ಹೊಂದಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಭಾರತವು ತನ್ನ ಮೂಲಸೌಕರ್ಯವನ್ನು ಸುಧಾರಿಸುತ್ತದೆ. ಮೇ ೨೦೧೪ರ ವೇಳೆಗೆ, ಭಾರತವು ೨೨,೬೦೦ ಕಿ.ಮಿ ಗಿಂತ ಹೆಚ್ಚಿನ ೪ ಅಥವಾ ೬ ಪಥಗಳ ಹೆದ್ದಾರಿಗಳನ್ನು ಮುಗಿಸಿತ್ತು, ಮತ್ತು ಅದರ ಬಹುತೇಕ ಪ್ರಮುಖ ಉತ್ಪಾದನಾ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಿತ್ತು.[೧೨೧] ಭಾರತದ ರಸ್ತೆ ಮೂಲಸೌಕರ್ಯವು 60% ಸಾಗಣೆ ಸರಕುಗಳು ಮತ್ತು 87% ಪ್ರಯಾಣಿಕರನ್ನು ಸಾಗಿಸುತ್ತದೆ.[೧೨೨]
ಭಾರತೀಯ ರೈಲ್ವೆ ವಿಶ್ವದಲ್ಲಿನ ನಾಲ್ಕನೇ ಅತಿ ದೊಡ್ಡ ರೈಲು ಜಾಲವಾಗಿದೆ, ಮತ್ತು 114,500 ಕಿಲೋಮೀಟರ್ಗಳಷ್ಟು ಉದ್ದದ ರೈಲು ಕಂಬಿಗಳನ್ನು ಹಾಗೂ ೭,೧೭೨ ರೈಲು ನಿಲ್ದಾಣಗಳನ್ನು ಹೊಂದಿದೆ. ೨೦೧೩ರಲ್ಲಿ ಈ ಸರ್ಕಾರಿ ಸ್ವಾಮ್ಯದ ಮತ್ತು ಸರ್ಕಾರದಿಂದ ನಿಭಾಯಿತ ರೈಲು ಜಾಲವು ದಿನಕ್ಕೆ ಸರಾಸರಿ ೨೩ ದಶಲಕ್ಷ ಪ್ರಯಾಣಿಕರನ್ನು, ಮತ್ತು ಬಿಲಿಯನ್ ಟನ್ಗಿಂತ ಹೆಚ್ಚು ಭಾರದ ಸರಕುಗಳನ್ನು ಸಾಗಿಸಿತು.[೧೨೩] ಭಾರತವು 7,500 ಕಿಲೊಮೀಟರ್ಗಳ ಕರಾವಳಿಯನ್ನು ಹೊಂದಿದ್ದು ೧೩ ಪ್ರಮುಖ ಬಂದರುಗಳು ಮತ್ತು ೬೦ ಕಾರ್ಯಕಾರಿ ಅಪ್ರಧಾನ ಬಂದರುಗಳನ್ನು ಹೊಂದಿದೆ. ಇವು ಪರಿಮಾಣದ ಪ್ರಕಾರ ಒಟ್ಟಾಗಿ ದೇಶದ ಬಾಹ್ಯ ವ್ಯಾಪಾರದ 95% ನಷ್ಟು ಮತ್ತು ಮೌಲ್ಯದ ಪ್ರಕಾರ 70% ನಷ್ಟನ್ನು ನಿಭಾಯಿಸುತ್ತವೆ (ಉಳಿದಿರುವುದರ ಬಹುತೇಕ ಭಾಗವನ್ನು ವಾಯುಸಂಚಾರವು ನಿಭಾಯಿಸುತ್ತದೆ).[೧೨೪] ಮುಂಬಯಿಯ ನವ ಶೇವಾ ಅತಿ ದೊಡ್ಡ ಸಾರ್ವಜನಿಕ ಬಂದರಾಗಿದೆ. ಮುಂದ್ರಾ ಅತಿ ದೊಡ್ಡ ಖಾಸಗಿ ಬಂದರಾಗಿದೆ.[೧೨೫] ಭಾರತದ ವಿಮಾನ ನಿಲ್ದಾಣ ಸೌಕರ್ಯವು ೧೨೫ ವಿಮಾನ ನಿಲ್ದಾಣಗಳನ್ನು ಒಳಗೊಂಡಿದೆ.[೧೨೬] ಇವುಗಳಲ್ಲಿ ೬೬ ವಿಮಾನ ನಿಲ್ದಾಣಗಳು ಪ್ರಯಾಣಿಕರು ಮತ್ತು ಸರಕುಗಳು ಎರಡನ್ನೂ ನಿಭಾಯಿಸಲು ಪರವಾನಗಿ ಪಡೆದಿವೆ.[೧೨೭]
ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಾಸಾಯನಿಕಗಳು ಭಾರತದ ಕೈಗಾರಿಕಾ ಜಿಡಿಪಿಗೆ ಪ್ರಮುಖ ಕೊಡುಗೆ ನೀಡುತ್ತವೆ, ಮತ್ತು ಒಟ್ಟಾಗಿ ಇವುಗಳು ಭಾರತದ ರಫ್ತು ಆದಾಯಗಳ ೩೪% ಗಿಂತ ಹೆಚ್ಚು ಕೊಡುಗೆ ನೀಡುತ್ತವೆ. ಭಾರತವು ದಿನಕ್ಕೆ ೧.೨೪ ದಶಲಕ್ಷ ಬ್ಯಾರಲ್ ಕಚ್ಚಾತೈಲವನ್ನು ಸಂಸ್ಕರಿಸುವ ಜಾಮ್ನಗರ್ನಲ್ಲಿರುವ ವಿಶ್ವದ ಅತಿ ದೊಡ್ಡ ಸಂಸ್ಕರಣಾ ಸಂಕೀರ್ಣ ಸೇರಿದಂತೆ, ಅನೇಕ ತೈಲ ಸಂಸ್ಕರಣಾಗಾರಗಳು ಮತ್ತು ಪೆಟ್ರೊಕೆಮಿಕಲ್ ಉದ್ಯಮಗಳನ್ನು ಹೊಂದಿದೆ.[೧೨೮] ಪರಿಮಾಣದ ಪ್ರಕಾರ, ಭಾರತದ ರಾಸಾಯನಿಕ ಉದ್ಯಮವು ಏಷ್ಯಾದ ಮೂರನೇ ಅತಿ ದೊಡ್ಡ ಉತ್ಪಾದಕವಾಗಿದೆ, ಮತ್ತು ದೇಶದ ಜಿಡಿಪಿಗೆ ೫% ನಷ್ಟು ಕೊಡುಗೆ ನೀಡುತ್ತದೆ. ಭಾರತವು ಕೃಷಿ ರಾಸಾಯನಿಕಗಳು, ಪಾಲಿಮರ್ಗಳು ಹಾಗೂ ಪ್ಲಾಸ್ಟಿಕ್ಗಳು, ಬಣ್ಣಗಳು ಮತ್ತು ವಿವಿಧ ಕಾರ್ಬನಿಕ ಹಾಗೂ ಅಕಾರ್ಬನಿಕ ರಾಸಾಯನಿಕಗಳ ಐದು ಅತಿ ದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ.[೧೨೯] ದೊಡ್ಡ ಉತ್ಪಾದಕ ಮತ್ತು ರಫ್ತುದಾರವಾಗಿರುವ ಹೊರತಾಗಿಯೂ, ದೇಶೀಯ ಬೇಡಿಕೆಗಳ ಕಾರಣ ಭಾರತವು ರಾಸಾಯನಿಕಗಳ ನಿವ್ವಳ ಆಮದುದಾರವಾಗಿದೆ.[೧೩೦]
ರಾಸಾಯನಿಕ ಉದ್ಯಮವು ಹಣಕಾಸು ವರ್ಷ ೨೦೧೮ರಲ್ಲಿ ಅರ್ಥವ್ಯವಸ್ಥೆಗೆ $163 ಶತಕೋಟಿಯಷ್ಟು ಕೊಡುಗೆ ನೀಡಿತು ಮತ್ತು ೨೦೨೫ರ ವೇಳೆಗೆ $300–400 ಶತಕೋಟಿಯಷ್ಟು ಮುಟ್ಟುವುದು ಎಂದು ನಿರೀಕ್ಷಿಸಲಾಗಿದೆ.[೧೩೧][೧೩೨] ೨೦೧೬ರಲ್ಲಿ ಈ ಉದ್ಯಮವು 17.33 ದಶಲಕ್ಷ ಜನರಿಗೆ (ಕಾರ್ಯಪಡೆಯ 4%) ಉದ್ಯೋಗ ನೀಡಿತು.[೧೩೩]
ಭಾರತದ ಔಷಧವಸ್ತುಗಳ ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ವಿಶ್ವದ ಆರೋಗ್ಯ ಆರೈಕೆ ಉತ್ಪನ್ನಗಳ ಪ್ರಮುಖ ಉತ್ಪಾದಕವಾಗುವಷ್ಟು ಬೆಳೆದಿದೆ. ಭಾರತವು ೬೦,೦೦೦ ಕ್ಕಿಂತ ಹೆಚ್ಚು ಸಾಮಾನ್ಯ ಮುದ್ರೆಯ ಔಷಧಿಗಳು ಸೇರಿದಂತೆ, ಮೌಲ್ಯದ ಪ್ರಕಾರ ೨೦೧೧ರಲ್ಲಿ ಜಾಗತಿಕ ಔಷಧಿ ಪೂರೈಕೆಯ ಸುಮಾರು 8% ನಷ್ಟನ್ನು ಉತ್ಪಾದಿಸಿತು.[೧೩೪] ಈ ಉದ್ಯಮವು ೨೦೦೫ರಲ್ಲಿ $6 ಬಿಲಿಯನ್ನಿಂದ ೨೦೧೬ರಲ್ಲಿ $36.7 ಬಿಲಿಯನ್ಗೆ ಬೆಳೆಯಿತು, ಅಂದರೆ 17.46% ನಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಎಜಿಆರ್). ಇದು 15.92% ಸಿಎಜಿಆರ್ ದರದಲ್ಲಿ ಬೆಳೆದು ೨೦೨೦ರಲ್ಲಿ $55 ಬಿಲಿಯನ್ಗೆ ಮುಟ್ಟುವದೆಂದು ನಿರೀಕ್ಷಿಸಲಾಗಿದೆ. ೨೦೨೦ರ ವೇಳೆಗೆ ಭಾರತವು ವಿಶ್ವದ ಆರನೇ ಅತಿ ದೊಡ್ಡ ಔಷಧವಸ್ತುಗಳ ಮಾರುಕಟ್ಟೆ ಆಗುವುದೆಂದು ನಿರೀಕ್ಷಿಸಲಾಗಿದೆ.[೧೩೫] ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಉಪವಲಯಗಳಲ್ಲಿ ಒಂದಾಗಿದೆ ಮತ್ತು ಭಾರತದ ರಫ್ತು ಸಂಪಾದನೆಯಲ್ಲಿ ಪ್ರಮುಖ ಕೊಡುಗೆದಾರವಾಗಿದೆ. ಗುಜರಾತ್ ರಾಜ್ಯವು ಔಷಧವಸ್ತುಗಳು ಮತ್ತು ಸಕ್ರಿಯ ಔಷಧಿ ಘಟಕಾಂಶಗಳ (ಎಪಿಐ) ಉತ್ಪಾದನೆ ಮತ್ತು ರಫ್ತಿಗೆ ಕೇಂದ್ರವಾಗಿದೆ.[೧೩೬]
೨೦೧೫ರಲ್ಲಿ ಭಾರತದಲ್ಲಿನ ಜವಳಿ ಮತ್ತು ಉಡುಪು ಮಾರುಕಟ್ಟೆಯು $108.5 ಬಿಲಿಯನ್ನಷ್ಟಾಗಿತ್ತು ಎಂದು ಅಂದಾಜಿಸಲಾಗಿತ್ತು. ೨೦೨೩ರ ವೇಳೆಗೆ ಇದು $226 ಬಿಲಿಯನ್ ಗಾತ್ರವನ್ನು ಮುಟ್ಟುವದೆಂದು ನಿರೀಕ್ಷಿಸಲಾಗಿದೆ. ಈ ಉದ್ಯಮವು ೩೫ ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಮೌಲ್ಯದ ಪ್ರಕಾರ, ಜವಳಿ ಉದ್ಯಮವು ಭಾರತದ ಕೈಗಾರಿಕಾ ಜಿಡಿಪಿಯ 7%, ಜಿಡಿಪಿಯ 2%, ಮತ್ತು ದೇಶದ ರಫ್ತು ಸಂಪಾದನೆಯ 15% ನಷ್ಟನ್ನು ರೂಪಿಸುತ್ತದೆ. 2017-18 ನೇ ವಿತ್ತೀಯ ವರ್ಷದಲ್ಲಿ ಭಾರತವು $39.2 ಬಿಲಿಯನ್ ಮೌಲ್ಯದ ಜವಳಿಯನ್ನು ರಫ್ತುಮಾಡಿತು.[೧೩೭]
ಇತ್ತೀಚಿನ ವರ್ಷಗಳಲ್ಲಿ ಭಾರತದ ಜವಳಿ ಉದ್ಯಮವು ಇಳಿತವಾಗುತ್ತಿದ್ದ ವಲಯದಿಂದ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ವಲಯವಾಗಿ ಪರಿವರ್ತನೆಗೊಂಡಿದೆ. 2004–2005 ರಲ್ಲಿ ಈ ಉದ್ಯಮವನ್ನು ಅನೇಕ ಪ್ರತಿಬಂಧಗಳಿಂದ, ಮುಖ್ಯವಾಗಿ ಹಣಕಾಸು ಪ್ರತಿಬಂಧಗಳಿಂದ ಮುಕ್ತಗೊಳಿಸಿದ ನಂತರ, ಸರ್ಕಾರವು ದೇಶೀಯ ಹಾಗೂ ವಿದೇಶೀ ಎರಡೂ ಬಗೆಯ ಭಾರಿ ಹೂಡಿಕೆ ಒಳಹರಿವುಗಳಿಗೆ ಅನುಮತಿ ನೀಡಿತು. ೨೦೦೪ ರಿಂದ ೨೦೦೮ರ ವರೆಗೆ, ಜವಳಿ ಉದ್ಯಮದೊಳಗೆ ಒಟ್ಟು ಹಣಹೂಡಿಕೆಯು 27 ಬಿಲಿಯನ್ ಡಾಲರ್ನಷ್ಟು ಬೆಳೆಯಿತು. ಲುಧಿಯಾನ ಭಾರತದಲ್ಲಿನ 90% ಉಣ್ಣೆ ಬಟ್ಟೆಗಳನ್ನು ಉತ್ಪಾದಿಸುತ್ತದೆ ಮತ್ತು ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುತ್ತದೆ. ತಿರುಪ್ಪೂರು ಹೊಸೈರಿ, ಹೆಣೆದ ಉಡುಪುಗಳು, ಸಾಂದರ್ಭಿಕ ಉಡುಪುಗಳು ಮತ್ತು ಕ್ರೀಡಾ ಉಡುಪುಗಳ ಮುಂಚೂಣಿಯ ಮೂಲವೆಂದು ಸಾರ್ವತ್ರಿಕ ಮನ್ನಣೆಯನ್ನು ಪಡೆದಿದೆ. ಇಚಲ್ಕರಂಜಿಯಂತಹ ವಿಸ್ತರಿಸುತ್ತಿರುವ ಜವಳಿ ಕೇಂದ್ರಗಳು ದೇಶದಲ್ಲಿ ಬಹಳ ಹೆಚ್ಚಿನ ತಲಾವಾರು ಆದಾಯಗಳ ಪ್ರಯೋಜನವನ್ನು ಪಡೆಯುತ್ತಿವೆ.[೧೩೮] ಭಾರತದ ಹತ್ತಿ ಹೊಲಗಳು, ನೂಲು ಮತ್ತು ಜವಳಿ ಉದ್ಯಮವು ಸ್ವಲ್ಪ ಬಾಲಕಾರ್ಮಿಕರು (1%) ಸೇರಿದಂತೆ, ಭಾರತದಲ್ಲಿ ೪೫ ದಶಲಕ್ಷ ಜನರಿಗೆ ಉದ್ಯೋಗ ನೀಡುತ್ತದೆ.[೧೩೯] ಈ ವಲಯವು ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 400,000 ಮಕ್ಕಳಿಗೆ ಉದ್ಯೋಗ ನೀಡಿದೆ ಎಂದು ಅಂದಾಜಿಸಲಾಗಿದೆ.[೧೪೦]
ಭಾರತದಲ್ಲಿನ ತಿಳ್ಳು ಮತ್ತು ಕಾಗದದ ಉದ್ಯಮವು ವಿಶ್ವದಲ್ಲಿ ಕಾಗದದ ಒಂದು ಪ್ರಮುಖ ಉತ್ಪಾದಕರಲ್ಲಿ ಒಂದಾಗಿದೆ ಮತ್ತು ಹೊಸ ಉತ್ಪಾದನಾ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.[೧೪೧] ಭಾರತದಲ್ಲಿನ ಕಾಗದ ಮಾರುಕಟ್ಟೆಯು 2017-18ರಲ್ಲಿ ರೂ. ೬೦,೦೦೦ ಕೋಟಿ ಮೌಲ್ಯದ್ದಾಗಿತ್ತೆಂದು ಅಂದಾಜಿಸಲಾಗಿತ್ತು ಮತ್ತು 6-7% ನಷ್ಟು ಸಿಎಜಿಆರ್ ದರವನ್ನು ದಾಖಲಿಸಿತ್ತು. ಕಾಗದಕ್ಕಾಗಿ ದೇಶೀಯ ಬೇಡಿಕೆಯು 2007-08ರ ವಿತ್ತವರ್ಷದಲ್ಲಿ ಸುಮಾರು ೯ ದಶಲಕ್ಷ ಟನ್ಗಳಿಂದ 2017-18ರಲ್ಲಿ ೧೭ ದಶಲಕ್ಷ ಟನ್ಗಿಂತ ಹೆಚ್ಚಾಗಿ ಬಹುತೇಕ ದ್ವಿಗುಣವಾಯಿತು. ಭಾರತದಲ್ಲಿ ಕಾಗದದ ವಾರ್ಷಿಕ ತಲಾವಾರು ಬಳಕೆಯು ಸುಮಾರು 13–14 ಕೆ.ಜಿ.ಯಾಗಿದ್ದು ಜಾಗತಿಕ ಸರಾಸರಿಯಾದ 57 ಕೆ.ಜಿ. ಗಿಂತ ಕಡಿಮೆಯಿದೆ.[೧೪೨]
ಸೇವಾ ವಲಯವು ಭಾರತದ ಜಿಡಿಪಿಯಲ್ಲಿ ಅತಿ ದೊಡ್ಡ ಪಾಲು ಹೊಂದಿದೆ, ೧೯೫೦ರಲ್ಲಿ 15% ನಷ್ಟಿದ್ದ ಇದು ೨೦೧೨ರಲ್ಲಿ 57% ಗೆ ಏರಿತು.[೧೪೩] ನಾಮಮಾತ್ರದ ಜಿಡಿಪಿ ಪ್ರಕಾರ ಇದು ಏಳನೇ ಅತಿ ದೊಡ್ಡ ಸೇವ ವಲಯವಾಗಿದೆ, ಮತ್ತು ಕೊಳ್ಳುವ ಶಕ್ತಿಯನ್ನು ಪರಿಗಣಿಸಿದಾಗ ಮೂರನೇ ಅತಿ ದೊಡ್ಡದ್ದಾಗಿದೆ. ಸೇವ ವಲಯವು 27% ಕಾರ್ಯಪಡೆಗೆ ಉದ್ಯೋಗ ನೀಡುತ್ತದೆ. ಮಾಹಿತಿ ತಂತ್ರಜ್ಞಾನ ಮತ್ತು ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆಗಳು ಅತಿ ವೇಗವಾಗಿ ಬೆಳೆಯುತ್ತಿರುವ ವಲಯಗಳ ಪೈಕಿ ಒಂದಾಗಿವೆ, ಮತ್ತು 1997–98 ಹಾಗೂ 2002–03 ವಿತ್ತೀಯ ವರ್ಷಗಳ ನಡುವೆ 33.6% ಸಂಚಿತ ಆದಾಯ ಬೆಳವಣಿಗೆ ದರವನ್ನು ಹೊಂದಿದ್ದವು, ಮತ್ತು 2007–08 ರಲ್ಲಿ ದೇಶದ ಒಟ್ಟು ರಫ್ತುಗಳಿಗೆ 25% ನಷ್ಟು ಕೊಡುಗೆ ನೀಡಿದ್ದವು.[೧೪೪]
2017ರಲ್ಲಿ 158 ದಶಲಕ್ಷ ಪ್ರಯಾಣಿಕರ ವಾಯು ಸಂಚಾರವನ್ನು ದಾಖಲಿಸಿ ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ವಿಮಾನಯಾನ ಮಾರುಕಟ್ಟೆಯಾಗಿದೆ.[೧೪೫][೧೪೬] ೨೦೨೦ರ ವೇಳೆಗೆ ಈ ಮಾರುಕಟ್ಟೆಯು ೮೦೦ ವಿಮಾನಗಳನ್ನು ಹೊಂದಿರುವುದು ಎಂದು ಅಂದಾಜಿಸಲಾಗಿದೆ. ಇದು ಜಾಗತಿಕ ಪರಿಮಾಣಗಳ 4.3% ನಷ್ಟನ್ನು ರೂಪಿಸುತ್ತದೆ.[೧೪೭] ಈ ಮಾರುಕಟ್ಟೆಯು 2037ರ ವೇಳೆಗೆ ವಾರ್ಷಿಕವಾಗಿ 520 ದಶಲಕ್ಷದಷ್ಟು ಪ್ರಯಾಣಿಕ ಸಂಚಾರವನ್ನು ದಾಖಲಿಸುವುದು ಎಂದು ನಿರೀಕ್ಷಿಸಲಾಗಿದೆ.[೧೪೬] ವಿಮಾನಯಾನವು ೨೦೧೭ರಲ್ಲಿ ಭಾರತದ ಜಿಡಿಪಿಗೆ $30 ಬಿಲಿಯನ್ನಷ್ಟು ಕೊಡುಗೆ ನೀಡಿತು, ಮತ್ತು 7.5 ದಶಲಕ್ಷ ಉದ್ಯೋಗಗಳಿಗೆ ಆಧಾರವಾಯಿತು - 390,000 ನೇರವಾಗಿ, ಮೌಲ್ಯ ಸರಪಳಿಯಲ್ಲಿ 570,000 ಮತ್ತು ಪ್ರವಾಸೋದ್ಯಮದ ಮೂಲಕ 6.2 ದಶಲಕ್ಷ ಎಂದು ಐಎಟಿಎ ಅಂದಾಜಿಸಿತು.[೧೪೬]
ಭಾರತದಲ್ಲಿನ ನಾಗರಿಕ ವಿಮಾನಯಾನವು ತನ್ನ ಆರಂಭಗಳನ್ನು ೧೮ ಫ಼ೆಬ್ರುವರಿ ೧೯೧೧ ಗೆ ಗುರುತಿಸುತ್ತದೆ. ಅಂದು ಒಬ್ಬ ಫ಼್ರೆಂಚ್ ವಿಮಾನ ಚಾಲಕನಾಗಿದ್ದ ಆನ್ರಿ ಪೆಕೆಟ್ ಹಂಬರ್ ಬೈಪ್ಲೇನ್ನಲ್ಲಿ ೬,೫೦೦ ಪತ್ರಗಳನ್ನು ಅಲಾಹಾಬಾದ್ನಿಂದ ನೈನಿಗೆ ಸಾಗಿಸಿದನು.[೧೪೮] ನಂತರ ೧೫ ಅಕ್ಟೋಬರ್ ೧೯೩೨ರಂದು, ಜೆ.ಆರ್.ಡಿ. ಟಾಟ ಪತ್ರಗಳ ಸರಕನ್ನು ವಿಮಾನದಲ್ಲಿ ಕರಾಚಿಯಿಂದ ಜೂಹು ವಿಮಾನ ನಿಲ್ದಾಣಕ್ಕೆ ಸಾಗಿಸಿದರು. ಮುಂದೆ ಅವರ ವಿಮಾನ ಸಂಸ್ಥೆಯು ಏರ್ ಇಂಡಿಯಾ ಆಯಿತು ಮತ್ತು ಇದು ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿದ ಏಷ್ಯಾದ ಮೊದಲ ವಿಮಾನ ಸಂಸ್ಥೆಯಾಗಿತ್ತು, ಜೊತೆಗೆ ಜೆಟ್ಗಳನ್ನು ಹಾರಾಟ ಮಾಡಿದ ಏಷ್ಯಾದ ಮೊದಲ ವಿಮಾನ ಸಂಸ್ಥೆಯಾಗಿತ್ತು.[೧೪೯]
ಮಾರ್ಚ್ ೧೯೫೩ರಲ್ಲಿ, ಆಗ ಅಸ್ತಿತ್ವದಲ್ಲಿದ್ದ ಖಾಸಗಿ ಒಡೆತನದ ಎಂಟು ದೇಶೀಯ ವಿಮಾನಯಾನ ಸಂಸ್ಥೆಗಳನ್ನು ಇಂಡಿಯನ್ ಏರ್ಲೈನ್ಸ್ ಆಗಿ ಮತ್ತು ಟಾಟಾ ಗುಂಪಿನ ಒಡೆತನದ ಏರ್ ಇಂಡಿಯಾವನ್ನು ಅಂತರರಾಷ್ಟ್ರೀಯ ಸೇವೆಗಳಿಗಾಗಿ ಸರಳಗೊಳಿಸಿ ರಾಷ್ಟ್ರೀಕರಿಸಲು ಭಾರತದ ಸಂಸತ್ತು ವಾಯು ನಿಗಮಗಳ ಕಾಯಿದೆಯನ್ನು ಅಂಗೀಕರಿಸಿತು.[೧೫೦] ೧೯೭೨ರಲ್ಲಿ ಅಂತರರಾಷ್ಟ್ರೀಯ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವನ್ನು ರಚಿಸಲಾಯಿತು ಮತ್ತು ೧೯೮೬ರಲ್ಲಿ ರಾಷ್ಟ್ರೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವನ್ನು ರಚಿಸಲಾಯಿತು. ಏರ್ ಇಂಡಿಯಾ ಫ಼್ಲೈಟ್ ೧೮೨ ದ ಅಪಘಾತದ ನಂತರ ನಾಗರಿಕ ವಿಮಾನಯಾನ ಭದ್ರತೆ ವಿಭಾಗವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತು.
ಸರ್ಕಾರವು ೧೯೯೧ ರಲ್ಲಿ ನಾಗರಿಕ ವಿಮಾನಯಾನ ವಲಯವನ್ನು ಅವಿನಿಮಯನಗೊಳಿಸಿ ೧೯೯೪ರ ವರೆಗೆ 'ಏರ್ ಟ್ಯಾಕ್ಸಿ' ಯೋಜನೆಯಡಿ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಬಾಡಿಗೆ ಮತ್ತು ನಿಗದಿತವಲ್ಲದ ಸೇವೆಗಳನ್ನು ನಡೆಸಲು ಬಿಟ್ಟಿತು. ೧೯೯೪ರಲ್ಲಿ ವಾಯು ನಿಗಮಗಳ ಕಾಯಿದೆಯನ್ನು ರದ್ದುಮಾಡಿದ ನಂತರ ಖಾಸಗಿ ವಿಮಾನಯಾನ ಸಂಸ್ಥೆಗಳು ಆಗಿನಿಂದ ನಿಗದಿತ ಸೇವೆಗಳನ್ನು ನಡೆಸಲು ಅನುಮತಿ ಪಡೆದವು. ಜೆಟ್ ಏರ್ವೇಸ್, ಏರ್ ಸಹಾರಾ, ಮೋದಿಲುಫ಼್ಟ್, ದಮಾನಿಯಾ ಏರ್ವೇಸ್ ಹಾಗೂ ಎನ್ಇಪಿಸಿ ಏರ್ಲೈನ್ಸ್ ನಂತಹ ಖಾಸಗಿ ವಿಮಾನಯಾನ ಸಂಸ್ಥೆಗಳು ಈ ಅವಧಿಯಲ್ಲಿ ದೇಶೀಯ ಕಾರ್ಯಾಚರಣೆಗಳನ್ನು ಆರಂಭಿಸಿದವು.[೧೫೧]
ಅವಿನಿಯಮನದ ನಂತರ ವಿಮಾನಯಾನ ಉದ್ಯಮವು ಕ್ಷಿಪ್ರ ಪರಿವರ್ತನೆಯನ್ನು ಅನುಭವಿಸಿತು. ಹಲವಾರು ಕಡಿಮೆ ವೆಚ್ಚದ ವಿಮಾನ ಸಂಸ್ಥೆಗಳು 2004–05ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದವು. ಪ್ರಮುಖವಾದ ಹೊಸ ಪ್ರವೇಶಕರಲ್ಲಿ ಏರ್ ಡೆಕ್ಕನ್, ಏರ್ ಸಹಾರಾ, ಕಿಂಗ್ಫಿಷರ್ ಏರ್ಲೈನ್ಸ್, ಸ್ಪೈಸ್ ಜೆಟ್, ಗೋಏರ್, ಪ್ಯಾರಮೌಂಟ್ ಏರ್ವೇಸ್ ಮತ್ತು ಇಂಡಿಗೋ ಸೇರಿದ್ದವು. ಕಿಂಗ್ಫ಼ಿಷರ್ ಏರ್ಲೈನ್ಸ್ ೧೫ ಜೂನ್ ೨೦೦೫ರಂದು 3 ಬಿಲಿಯನ್ ಡಾಲರ್ ಮೌಲ್ಯದ ಏರ್ಬಸ್ ಎ೩೮೦ ವಿಮಾನಕ್ಕೆ ಕೋರಿಕೆ ಸಲ್ಲಿಸಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆಯಾಯಿತು.[೧೫೨][೧೫೩] ಆದರೆ, ಆರ್ಥಿಕ ನಿಧಾನೀಕರಣ ಮತ್ತು ಏರುತ್ತಿರುವ ಇಂಧನ ಹಾಗೂ ಕಾರ್ಯಾಚರಣಾ ವೆಚ್ಚಗಳ ಕಾರಣ ಭಾರತದ ವಿಮಾನಯಾನವು ಹೆಣಗಾಡಿತು. ಇದು ಏಕೀಕರಣ, ಸ್ವಾಮ್ಯಸ್ವಾಧೀನಗಳು ಮತ್ತು ಸ್ಥಗಿತಗೊಳಿಸುವಿಕೆಗಳಿಗೆ ಕಾರಣವಾಯಿತು. ೨೦೦೭ರಲ್ಲಿ, ಏರ್ ಸಹಾರಾವನ್ನು ಜೆಟ್ ಏರ್ವೇಸ್ ಮತ್ತು ಏರ್ ಡೆಕ್ಕನ್ನ್ನು ಕಿಂಗ್ಫ಼ಿಷರ್ ಏರ್ಲೈನ್ಸ್ ಖರೀದಿಸಿದವು. ಪ್ಯಾರಮೌಂಟ್ ಏರ್ವೇಸ್ ೨೦೧೦ ರಲ್ಲಿ ತನ್ನ ಕಾರ್ಯಾಚರಣೆಗಳನ್ನು ನಿಲ್ಲಿಸಿತು ಮತ್ತು ಕಿಂಗ್ಫ಼ಿಷರ್ ೨೦೧೨ ರಲ್ಲಿ ಮುಚ್ಚಿತು. ೨೦೧೩ರಲ್ಲಿ ಎಟಿಹಾಡ್ ಏರ್ವೇಸ್ ಜೆಟ್ ಏರ್ವೇಸ್ನಲ್ಲಿ ೨೪% ಪಾಲನ್ನು ಖರೀದಿಸಲು ಒಪ್ಪಿಕೊಂಡಿತು. ಏರ್ ಏಷ್ಯಾ ಮತ್ತು ಟಾಟಾ ಸನ್ಸ್ ನಡುವೆ ಸಂಯುಕ್ತ ಉದ್ಯಮವಾಗಿ ಕಾರ್ಯನಿರ್ವಹಿಸಲು ಆರಂಭಿಸಿದ, ಕಡಿಮೆ ವೆಚ್ಚದ ವಿಮಾನ ಸಂಸ್ಥೆಯಾದ ಏರ್ ಏಷ್ಯಾ ಇಂಡಿಯಾ ೨೦೧೪ ರಲ್ಲಿ ಆರಂಭವಾಯಿತು. 2013-14 ರ ವೇಳೆಗೆ, ಇಂಡಿಗೊ ಮತ್ತು ಗೋಏರ್ ಮಾತ್ರ ಲಾಭಗಳನ್ನು ಹುಟ್ಟಿಸುತ್ತಿದ್ದವು.[೧೫೪] ೨೦೦೫ ಮತ್ತು ೨೦೧೭ ರ ನಡುವೆ ಸರಾಸರಿ ದೇಶೀಯ ಪ್ರಯಾಣಿಕ ವಿಮಾನ ಶುಲ್ಕವು ಹಣದುಬ್ಬರಕ್ಕೆ ಸರಿಹೊಂದಿಸಿದ ಮೇಲೆ ೭೦% ನಷ್ಟು ತಗ್ಗಿತು.[೧೫೫]
೨೦೧೬ರಲ್ಲಿ ಹಣಕಾಸು ಸೇವೆಗಳ ಉದ್ಯಮವು $809 ಶತಕೋಟಿಯಷ್ಟು ಕೊಡುಗೆ ನೀಡಿತು (ಜಿಡಿಪಿಯ 37%) ಮತ್ತು ೧೪.೧೭ ದಶಲಕ್ಷ ಜನರಿಗೆ (ಕಾರ್ಯಪಡೆಯ 3%) ಉದ್ಯೋಗ ನೀಡಿತು. ಬ್ಯಾಂಕಿಂಗ್ ವಲಯವು $407 ಶತಕೋಟಿಯಷ್ಟು ಕೊಡುಗೆ ನೀಡಿತು (ಜಿಡಿಪಿಯ 19%) ಮತ್ತು ೫.೫ ದಶಲಕ್ಷ ಜನರಿಗೆ (ಕಾರ್ಯಪಡೆಯ 1%) ಉದ್ಯೋಗ ನೀಡಿತು.[೧೫೬] ಭಾರತದ ಹಣದ ಮಾರುಕಟ್ಟೆಯನ್ನು ಖಾಸಗಿ, ಸಾರ್ವಜನಿಕ ಮತ್ತು ವಿದೇಶೀ ಒಡೆತನದ ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು (ಒಟ್ಟಾಗಿ ಇವನ್ನು 'ವರ್ಗೀಕೃತ ಬ್ಯಾಂಕುಗಳು' ಎಂದು ಕರೆಯಲಾಗುತ್ತದೆ) ಇರುವ ಸಂಘಟಿತ ವಲಯ; ಮತ್ತು ಪ್ರತ್ಯೇಕ ಅಥವಾ ಕುಟುಂಬ ಒಡೆತನದ ಸ್ಥಳೀಯ ಬ್ಯಾಂಕರುಗಳು ಅಥವಾ ಸಾಲ ನೀಡುವವರು ಮತ್ತು ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು ಸೇರಿರುವ ಅಸಂಘಟಿತ ವಲಯವಾಗಿ ವರ್ಗೀಕರಿಸಲಾಗುತ್ತದೆ.[೧೫೭] ಗ್ರಾಮೀಣ ಮತ್ತು ಉಪನಗರ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಬ್ಯಾಂಕುಗಳ ಬದಲಾಗಿ ಅಸಂಘಟಿತ ವಲಯ ಮತ್ತು ಕಿರುಸಾಲಕ್ಕೆ ಆದ್ಯತೆ ನೀಡಲಾಗುತ್ತದೆ, ವಿಶೇಷವಾಗಿ ಅನುತ್ಪಾದಕ ಉದ್ದೇಶಗಳಿಗಾಗಿ, ಉದಾ. ಸಮಾರಂಭಗಳಿಗೆ ಅಲ್ಪಾವಧಿಯ ಸಾಲಗಳು.[೧೫೮]
ಪ್ರಧಾನ ಮಂತ್ರಿ ಇಂದಿರಾ ಗಾಂಧಿ ೧೯೬೯ರಲ್ಲಿ ೧೪ ಬ್ಯಾಂಕ್ಗಳನ್ನು ರಾಷ್ಟ್ರೀಕರಿಸಿದರು. ೧೯೮೦ರಲ್ಲಿ ಮತ್ತೆ ಇತರ ಆರು ಬ್ಯಾಂಕ್ಗಳನ್ನು ರಾಷ್ಟ್ರೀಕರಿಸಿ ಬ್ಯಾಂಕ್ಗಳು ತಮ್ಮ ಸಾಮಾಜಿಕ ಮತ್ತು ಅಭಿವೃದ್ಧಿ ಸಂಬಂಧಿ ಗುರಿಗಳನ್ನು ಪೂರೈಸುವುದನ್ನು ಖಚಿತಪಡಿಸಲು ತಮ್ಮ ಒಟ್ಟು ಸಾಲದ 40% ನಷ್ಟನ್ನು ಕೃಷಿ, ಲಘು ಕೈಗಾರಿಕೆ, ಚಿಲ್ಲರೆ ವ್ಯಾಪಾರ ಮತ್ತು ಸಣ್ಣ ವ್ಯಾಪಾರ ಸೇರಿದಂತೆ ಆದ್ಯತೆಯ ವಲಯಗಳಿಗೆ ನೀಡಬೇಕು ಎಂದು ಕಡ್ಡಾಯ ಮಾಡಿದರು. ಅಂದಿನಿಂದ, ಬ್ಯಾಂಕ್ ಶಾಖೆಗಳ ಸಂಖ್ಯೆಯು ೧೯೬೯ ರಲ್ಲಿ ೮,೨೬೦ ರಿಂದ ೨೦೦೭ರಲ್ಲಿ ೭೨,೧೭೦ಕ್ಕೆ ಏರಿತು ಮತ್ತು ಒಂದು ಶಾಖೆಯು ಒಳಗೊಳ್ಳುವ ಜನರ ಸಂಖ್ಯೆಯು ಇದೇ ಅವಧಿಯಲ್ಲಿ ೬೩,೮೦೦ರಿಂದ ೧೫,೦೦೦ ಕ್ಕೆ ಇಳಿಯಿತು. ಒಟ್ಟು ಬ್ಯಾಂಕ್ ಜಮಾಗಳು 1970–71 ರಲ್ಲಿ ₹ ೫೯.೧ ಶತಕೋಟಿ (ಯುಎಸ್$೧.೩೧ ಶತಕೋಟಿ) ಇದ್ದದ್ದು 2008–09 ರಲ್ಲಿ ₹ ೩೮,೩೦೯.೨೨ ಶತಕೋಟಿ (ಯುಎಸ್$೮೫೦.೪೬ ಶತಕೋಟಿ) ರಷ್ಟಕ್ಕೆ ಹೆಚ್ಚಿತು. ಗ್ರಾಮೀಣ ಶಾಖೆಗಳ ಸಂಖ್ಯೆಯು ೧೯೬೯ರಲ್ಲಿ ೧,೮೬೦ ಅಥವಾ ಒಟ್ಟು ಸಂಖ್ಯೆಯ ೨೨% ನಷ್ಟಿದ್ದದ್ದು ೨೦೦೭ರಲ್ಲಿ ೩೦,೫೯೦ ಅಥವಾ ೪೨% ನಷ್ಟಕ್ಕೆ ಏರಿತು. ಈ ಏರಿಕೆಯ ಹೊರತಾಗಿಯೂ 500,000 ಹಳ್ಳಿಗಳ ಪೈಕಿ 32,270 ಹಳ್ಳಿಗಳು ಮಾತ್ರ ಒಂದು ಅನುಸೂಚಿತ ಬ್ಯಾಂಕ್ನಿಂದ ಸೇವೆ ಪಡೆಯುತ್ತಿವೆ.[೧೫೯][೧೬೦]
2006–07 ರಲ್ಲಿ ಭಾರತದ ನಿವ್ವಳ ದೇಶೀಯ ಉಳಿತಾಯಗಳು ಜಿಡಿಪಿಯ 32.8% ನಷ್ಟಿದ್ದವು ಮತ್ತು ಇದು ಹೆಚ್ಚಿನ ಪ್ರಮಾಣದಲ್ಲಿದೆ.[೧೬೧] ವೈಯಕ್ತಿಕ ಉಳಿತಾಯಗಳ ಅರ್ಧಕ್ಕಿಂತ ಹೆಚ್ಚು ಭಾಗವು ಜಮೀನು, ಮನೆಗಳು, ದನಗಳು ಮತ್ತು ಚಿನ್ನದಂತಹ ಭೌತಿಕ ಆಸ್ತಿಗಳಲ್ಲಿ ಹೂಡಿಕೆಯಾಗಿದೆ.[೧೬೨] ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಬ್ಯಾಂಕ್ಗಳು ಬ್ಯಾಂಕಿಂಗ್ ಉದ್ಯಮದ ಒಟ್ಟು ಸ್ವತ್ತುಗಳ 75% ಕ್ಕಿಂತ ಹೆಚ್ಚನ್ನು ಹೊಂದಿವೆ. ಖಾಸಗಿ ಮತ್ತು ವಿದೇಶಿ ಬ್ಯಾಂಕ್ಗಳು ಅನುಕ್ರಮವಾಗಿ 18.2% ಮತ್ತು 6.5% ರಷ್ಟನ್ನು ಹೊಂದಿವೆ.[೧೬೩] ಉದಾರೀಕರಣವಾದಾಗಿನಿಂದ, ಸರ್ಕಾರವು ಗಮನಾರ್ಹ ಬ್ಯಾಂಕಿಂಗ್ ಸುಧಾರಣೆಗಳನ್ನು ಅನುಮೋದಿಸಿದೆ. ಒಟ್ಟುಗೂಡಿಸುವಿಕೆಯನ್ನು ಪ್ರೋತ್ಸಾಹಿಸುವ ಸುಧಾರಣೆಗಳು, ಸರ್ಕಾರಿ ಹಸ್ತಕ್ಷೇಪವನ್ನು ಕಡಿಮೆಮಾಡುವುದು ಮತ್ತು ಲಾಭದಾಯಕತೆ ಹಾಗೂ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಂತಹ ಕೆಲವು ಸುಧಾರಣೆಗಳು ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸಂಬಂಧಿಸಿವೆ. ಇತರ ಸುಧಾರಣೆಗಳು ಬ್ಯಾಂಕಿಂಗ್ ಮತ್ತು ವಿಮಾ ವಲಯಗಳನ್ನು ಖಾಸಗಿ ಮತ್ತು ವಿದೇಶಿ ಕಂಪನಿಗಳಿಗೆ ತೆರೆದಿವೆ.[೧೬೪][೧೬೫]
ರಾಷ್ಟ್ರೀಯ ತಂತ್ರಾಂಶ ಮತ್ತು ಸೇವಾ ಕಂಪನಿಗಳ ಸಂಘದ (ನ್ಯಾಸ್ಕೊಮ್) ವರದಿಯ ಪ್ರಕಾರ, ಭಾರತವು ಫ಼ಿನ್ಟೆಕ್ ಕ್ಷೇತ್ರದಲ್ಲಿ ೨೦೧೫ರಲ್ಲಿ ಸುಮಾರು $420 ದಶಲಕ್ಷದಷ್ಟು ಹೂಡಿಕೆಯೊಂದಿಗೆ ಸುಮಾರು ೪೦೦ ಕಂಪನಿಗಳನ್ನು ಹೊಂದಿದೆ. ಫ಼ಿನ್ಟೆಕ್ ತಂತ್ರಾಂಶ ಮತ್ತು ಸೇವೆಗಳ ಮಾರುಕಟ್ಟೆಯು ೨೦೨೦ರ ವೇಳೆಗೆ ೧.೭ ಪಟ್ಟು ಬೆಳೆದು $8 ಶತಕೋಟಿಯಷ್ಟು ಮೌಲ್ಯದ್ದಾಗುವುದು ಎಂದೂ ನ್ಯಾಸ್ಕೊಮ್ನ ವರದಿ ಅಂದಾಜಿಸಿತು.[೧೬೬] ಭಾರತದ ಫ಼ಿನ್ಟೆಕ್ ಕ್ಷೇತ್ರವನ್ನು ಮುಂದೆ ಹೇಳಲಾದ ರೀತಿಯಲ್ಲಿ ವಿಭಾಗಿಸಲಾಗಿದೆ – 34% ಸಂದಾಯ ಸಂಸ್ಕರಣೆಯಲ್ಲಿ, ಇದನ್ನು ಅನುಸರಿಸಿ 32% ಬ್ಯಾಂಕಿಂಗ್ನಲ್ಲಿ ಮತ್ತು ವ್ಯಾಪಾರ, ಸಾರ್ವಜನಿಕ ಹಾಗೂ ಖಾಸಗಿ ಮಾರುಕಟ್ಟೆಗಳಲ್ಲಿ 12%.[೧೬೭]
ಭಾರತದಲ್ಲಿನ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮವು ಎರಡು ಮುಖ್ಯ ಘಟಕಗಳನ್ನು ಹೊಂದಿದೆ: ಐಟಿ ಸೇವೆಗಳು ಮತ್ತು ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆ (ಬಿಪಿಒ). ಈ ವಲಯವು ಭಾರತದ ಜಿಡಿಪಿಗೆ ತನ್ನ ಕೊಡುಗೆಯನ್ನು ೧೯೯೮ರಲ್ಲಿ 1.2% ನಿಂದ 2012 ರಲ್ಲಿ 7.5% ಗೆ ಹೆಚ್ಚಿಸಿದೆ.[೧೬೮] ನ್ಯಾಸ್ಕೊಮ್ ಪ್ರಕಾರ, ಈ ವಲಯವು ೨೦೧೫ರಲ್ಲಿ 147 ಶತಕೋಟಿ ಅಮೇರಿಕನ್ ಡಾಲರ್ಗಳಷ್ಟು ಆದಾಯವನ್ನು ಒಟ್ಟುಗೂಡಿಸಿತು. ಇದರಲ್ಲಿ ರಫ್ತು ಆದಾಯವು 99 ಶತಕೋಟಿ ಅಮೇರಿಕನ್ ಡಾಲರ್ಗಳಷ್ಟಿತ್ತು ಮತ್ತು ದೇಶೀಯ ಆದಾಯವು 48 ಶತಕೋಟಿ ಅಮೇರಿಕನ್ ಡಾಲರ್ಗಳಷ್ಟಿತ್ತು ಮತ್ತು 13% ಕಿಂತ ಹೆಚ್ಚು ಬೆಳೆಯಿತು.[೧೬೮]
ಹೆಚ್ಚಿನ ವಿಶೇಷೀಕರಣ, ಕಡಿಮೆ ವೆಚ್ಚದ, ಬಹಳ ಕೌಶಲಯುತ, ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲ ಕಾರ್ಮಿಕರ ದೊಡ್ಡ ಪೂರೈಕೆಯ ಲಭ್ಯತೆ - ಜೊತೆಗೆ ಭಾರತದ ಸೇವಾ ರಫ್ತುಗಳಲ್ಲಿ ಆಸಕ್ತಿ ಹೊಂದಿದ, ಅಥವಾ ತಮ್ಮ ಕಾರ್ಯಗಳನ್ನು ಹೊರಗುತ್ತಿಗೆ ಕೊಡಲು ನೋಡುತ್ತಿದ್ದ ವಿದೇಶೀ ಗ್ರಾಹಕರಿಂದ ಹೆಚ್ಚಿದ ಬೇಡಿಕೆಯು ಹೊಂದಾಣಿಕೆಯಾಗಿದ್ದು ಐಟಿ ವಲಯದಲ್ಲಿನ ಬೆಳವಣಿಗೆಗೆ ಕಾರಣವೆಂದು ಹೇಳಲಾಗಿದೆ. ದೇಶದ ಜಿಡಿಪಿಯಲ್ಲಿ ಭಾರತದ ಐಟಿ ಉದ್ಯಮದ ಪಾಲು 2005–06 ರಲ್ಲಿ 4.8% ನಷ್ಟಿದ್ದದ್ದು 2008 ರಲ್ಲಿ 7% ಕ್ಕೆ ಹೆಚ್ಚಿತು.[೧೬೯] ೨೦೦೯ರಲ್ಲಿ, ಏಳು ಭಾರತೀಯ ವ್ಯಾಪಾರ ಸಂಸ್ಥೆಗಳು ವಿಶ್ವದಲ್ಲಿನ ೧೫ ಅಗ್ರ ತಂತ್ರಜ್ಞಾನ ಹೊರಗುತ್ತಿಗೆ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು.[೧೭೦]
ಭಾರತದಲ್ಲಿನ ಹೊರಗುತ್ತಿಗೆ ಉದ್ಯಮದಲ್ಲಿರುವ ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆ ಸೇವೆಗಳು ಮುಖ್ಯವಾಗಿ ಬಹುರಾಷ್ಟ್ರೀಯ ಸಂಸ್ಥೆಗಳ ಪಾಶ್ಚಾತ್ಯ ಕಾರ್ಯಾಚರಣೆಗಳಿಗೆ ನೆರವಾಗುತ್ತವೆ. ೨೦೧೨ರ ವೇಳೆಗೆ, ಹೊರಗುತ್ತಿಗೆ ವಲಯದಲ್ಲಿ ಸುಮಾರು 2.8 ದಶಲಕ್ಷ ಜನರು ಕೆಲಸ ಮಾಡುತ್ತಿದ್ದರು.[೧೭೧] ವಾರ್ಷಿಕ ಆದಾಯಗಳು ಸುಮಾರು $11 ಶತಕೋಟಿಯಷ್ಟಿದ್ದು,[೧೭೧] ಜಿಡಿಪಿಯ ಸುಮಾರು 1% ನಷ್ಟಿವೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 2.5 ದಶಲಕ್ಷ ಜನರು ಪದವೀಧರರಾಗುತ್ತಾರೆ. ಕೌಶಲದ ಅಭಾವಗಳ ಕಾರಣ ವೇತನಗಳು ಶೇಕಡ 10–15 ರಷ್ಟು ಹೆಚ್ಚಾಗುತ್ತಿವೆ.[೧೭೧]
ಭಾರತವು ೨೦೧೩ರಲ್ಲಿ ವಿಶ್ವದಲ್ಲಿನ ಹತ್ತನೇ ಅತಿ ದೊಡ್ಡ ವಿಮಾ ಮಾರುಕಟ್ಟೆಯಾಯಿತು, ೨೦೧೧ರಲ್ಲಿ ೧೫ನೇ ಸ್ಥಾನದಲ್ಲಿತ್ತು.[೧೭೨][೧೭೩] ೨೦೧೩ರಲ್ಲಿ $66.4 ಶತಕೋಟಿಯಷ್ಟು ಒಟ್ಟು ಮಾರುಕಟ್ಟೆಯ ಗಾತ್ರದಷ್ಟಿದ್ದ ಇದು ವಿಶ್ವದ ಪ್ರಮುಖ ಅರ್ಥವ್ಯವಸ್ಥೆಗಳಿಗೆ ಹೋಲಿಸಿದರೆ ಸಣ್ಣದಾಗಿದೆ,[೧೭೪] ಮತ್ತು ೨೦೧೭ರಲ್ಲಿ ಭಾರತದ ವಿಮಾ ಮಾರುಕಟ್ಟೆಯು ವಿಶ್ವದ ವಿಮಾ ವ್ಯಾಪಾರದ ಕೇವಲ 2% ನಷ್ಟನ್ನು ರೂಪಿಸಿತ್ತು. ೨೦೧೮ರಲ್ಲಿ ಭಾರತದ ಜೀವ ಮತ್ತು ಅಜೀವ ವಿಮಾ ಉದ್ಯಮವು ಒಟ್ಟು ನಿವ್ವಳ ವಿಮಾ ಕಂತುಗಳಲ್ಲಿ $86 ಶತಕೋಟಿಯಷ್ಟು ಸಂಗ್ರಹಿಸಿತು. ಜೀವವಿಮೆಯು ವಿಮಾ ಮಾರುಕಟ್ಟೆಯ 75.41% ನಷ್ಟನ್ನು ರೂಪಿಸುತ್ತದೆ ಮತ್ತು ಉಳಿದದ್ದು ಸಾಮಾನ್ಯ ವಿಮೆಯಾಗಿದೆ.[೧೭೫] ಭಾರತದಲ್ಲಿರುವ 52 ವಿಮಾ ಕಂಪನಿಗಳಲ್ಲಿ, 24 ಜೀವವಿಮಾ ವ್ಯವಹಾರದಲ್ಲಿ ಸಕ್ರಿಯವಾಗಿವೆ.[೧೭೪]
ವಿಶೇಷೀಕೃತ ವಿಮಾಗಾರರಾದ ರಫ್ತು ಸಾಲ ಖಾತರಿ ನಿಗಮ ಮತ್ತು ಕೃಷಿ ವಿಮಾ ಕಂಪನಿ (ಎಐಸಿ) ಸಾಲ ಖಾತರಿ ಮತ್ತು ಬೆಳೆ ವಿಮೆಯನ್ನು ನೀಡುತ್ತವೆ. ಇದು ಹವಾಮಾನ ವಿಮೆ ಮತ್ತು ನಿರ್ದಿಷ್ಟ ಬೆಳೆಗಳಿಗೆ ಸಂಬಂಧಿಸಿದ ವಿಮೆಯಂತಗ ಹಲವಾರು ಹೊಸದಾದ ಉತ್ಪನ್ನಗಳನ್ನು ಪರಿಚಯಿಸಿದೆ. ಜೀವ ವಿಮಾದಾರರಲ್ಲದ ವಿಮಾದಾರರು ಒಪ್ಪಿಕೊಂಡ ವಿಮಾಕಂತುಗಳು 2010–11 ನೇ ವರ್ಷದಲ್ಲಿ ₹42,576 ಕೋಟಿಯಷ್ಟಿತ್ತು (₹425 ಶತಕೋಟಿ). 2009–10 ವರ್ಷದಲ್ಲಿ ಇದು ₹34,620 ಕೋಟಿಯಷ್ಟಿತ್ತು (₹346 ಶತಕೋಟಿ). ಎಲ್ಲದ್ದಕ್ಕೂ ಸಮಾನವಾಗಿ ಮಾಡಿದ ಸುಂಕ ದರಗಳಲ್ಲಿನ ಕಡಿತಗಳನ್ನು ಪರಿಗಣಿಸಿದರೆ, ಈ ಬೆಳವಣಿಗೆಯು ತೃಪ್ತಿಕರವಾಗಿದೆ. ಖಾಸಗಿ ವಿಮಾದಾರರು ಒಪ್ಪಿಕೊಂಡ ವಿಮಾಕಂತುಗಳು ₹17,424 ಕೋಟಿಯಷ್ಟಿದ್ದವು (₹174 ಶತಕೋಟಿ). 2009–10 ರಲ್ಲಿ ಇದು ₹13,977 ಕೋಟಿಯಷ್ಟಿತ್ತು (₹140 ಶತಕೋಟಿ).
ಭಾರತದಲ್ಲಿನ ವಿಮಾ ವ್ಯವಹಾರವು ವಿಮಾ ಪ್ರವೇಶದ ತಗ್ಗಿದ ಮಟ್ಟಗಳನ್ನು ಹೊಂದಿ ಚೆನ್ನಾಗಿ ವಿಕಾಸಗೊಂಡಿರಲಿಲ್ಲ.
೨೦೧೬ರಲ್ಲಿ, ಸಗಟು ವ್ಯಾಪಾರವನ್ನು ಹೊರತುಪಡಿಸಿ, ಚಿಲ್ಲರೆ ಉದ್ಯಮವು $482 ಶತಕೋಟಿಯಷ್ಟು ಕೊಡುಗೆ ನೀಡಿತು (ಜಿಡಿಪಿಯ 22%) ಮತ್ತು 249.94 ದಶಲಕ್ಷ ಜನರಿಗೆ (ಕಾರ್ಯಪಡೆಯ 57%) ಉದ್ಯೋಗ ನೀಡಿತ್ತು. ಈ ಉದ್ಯಮವು ಕೃಷಿಯ ನಂತರ ಭಾರತದಲ್ಲಿನ ಎರಡನೇ ಅತಿ ದೊಡ್ಡ ಉದ್ಯೋಗದಾತವಾಗಿದೆ.[೧೭೬] ಭಾರತದ ಚಿಲ್ಲರೆ ಮಾರುಕಟ್ಟೆಯು $600 ಶತಕೋಟಿಯಷ್ಟಿದೆ ಎಂದು ಅಂದಾಜಿಸಲಾಗಿದೆ ಮತ್ತು ಆರ್ಥಿಕ ಮೌಲ್ಯದ ಪ್ರಕಾರ ವಿಶ್ವದಲ್ಲಿನ ಐದು ಅಗ್ರ ಚಿಲ್ಲರೆ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಭಾರತವು ವಿಶ್ವದಲ್ಲಿನ ಅತಿ ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಮಾರುಕಟ್ಟೆಗಳಲ್ಲಿ ಒಂದನ್ನು ಹೊಂದಿದೆ,[೧೭೭][೧೭೮] ಮತ್ತು ೨೦೨೦ರ ವೇಳೆಗೆ $1.3 ಟ್ರಿಲಿಯನ್ ಮುಟ್ಟುವುದು ಎಂದು ಅಂದಾಜಿಸಲಾಗಿದೆ.[೧೭೯][೧೮೦] ೨೦೧೮ರಲ್ಲಿ ಭಾರತದಲ್ಲಿನ ಇ-ಕಾಮರ್ಸ್ ಚಿಲ್ಲರೆ ಮಾರುಕಟ್ಟೆಯ ಮೌಲ್ಯ $32.7 ಶತಕೋಟಿಯಷ್ಟಾಗಿತ್ತು, ಮತ್ತು ೨೦೨೨ರ ವೇಳೆಗೆ $71.9 ಶತಕೋಟಿ ಮುಟ್ಟುವುದೆಂದು ನಿರೀಕ್ಷಿಸಲಾಗಿದೆ.[೧೮೧]
ಭಾರತದ ಚಿಲ್ಲರೆ ಉದ್ಯಮವು ಮುಖ್ಯವಾಗಿ ಸ್ಥಳೀಯ ಸಣ್ಣ ಅಂಗಡಿಗಳು, ಮಾಲೀಕ ನೇಮಿತ ಅಂಗಡಿಗಳು ಮತ್ತು ಬೀದಿ ವ್ಯಾಪಾರಿಗಳನ್ನು ಒಳಗೊಂಡಿದೆ. ಚಿಲ್ಲರೆ ಸೂಪರ್ಮಾರ್ಕೆಟ್ಗಳು ವಿಸ್ತರಿಸುತ್ತಿದ್ದು, ೨೦೦೮ರಲ್ಲಿ ಇವುಗಳ ಮಾರುಕಟ್ಟೆ ಪಾಲು 4% ನಷ್ಟಿತ್ತು.[೧೮೨] ೨೦೧೨ರಲ್ಲಿ, ಸರ್ಕಾರವು ಮಲ್ಟಿಬ್ರ್ಯಾಂಡ್ ಚಿಲ್ಲರೆ ವ್ಯಾಪಾರದಲ್ಲಿ 51% ಎಫ಼್ಫ಼ಿಐ ಮತ್ತು ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರದಲ್ಲಿ 100% ಎಫ಼್ಡಿಐಗೆ ಅನುಮತಿ ನೀಡಿತು. ಆದರೆ ಹಿಂತುದಿಯ ಮಳಿಗೆ ಮೂಲಸೌಕರ್ಯ ಹಾಗೂ ರಾಜ್ಯಮಟ್ಟದ ಪರವಾನಗಿಗಳ ಕೊರತೆ ಮತ್ತು ಕೆಂಪುಪಟ್ಟಿಯು ಸಂಘಟಿತ ಚಿಲ್ಲರೆ ವ್ಯಾಪಾರದ ಬೆಳವಣಿಗೆಯನ್ನು ಸೀಮಿತಗೊಳಿಸುವುದು ಮುಂದುವರಿಸಿವೆ.[೧೮೩] ಒಂದು ಅಂಗಡಿಯು ವ್ಯಾಪಾರಕ್ಕಾಗಿ ತೆರೆಯುವ ಮುನ್ನ "ನಾಮಫಲಕ ಪರವಾನಗಿಗಳು" ಮತ್ತು "ಶೇಖರಣಾ ವಿರೋಧಿ ಕ್ರಮಗಳಂತಹ" ಮೂವತ್ತಕ್ಕಿಂತ ಹೆಚ್ಚು ನಿಯಂತ್ರಣಗಳಿರುವ ಅನುಸರಣೆಯನ್ನು ಮಾಡಬೇಕಾಗುತ್ತದೆ. ರಾಜ್ಯದಿಂದ ರಾಜ್ಯದಿಂದ ರಾಜ್ಯಕ್ಕೆ, ಮತ್ತು ರಾಜ್ಯಗಳ ಒಳಗೆ ಕೂಡ ಸರಕುಗಳನ್ನು ಚಲಿಸಲು ತೆರಿಗೆಗಳಿವೆ.[೧೮೨] ದ ವಾಲ್ ಸ್ಟ್ರೀಟ್ ಜರ್ನಲಿ ಪ್ರಕಾರ, ಮೂಲಸೌಕರ್ಯ ಮತ್ತು ಸಮರ್ಥ ಚಿಲ್ಲರೆ ಜಾಲಗಳ ಕೊರತೆಯಿಂದ ಭಾರತದ ಕೃಷಿ ಉತ್ಪನ್ನದ ಮೂರನೇ ಒಂದು ಭಾಗ ಹಾಳಾಗುವ ಮೂಲಕ ನಷ್ಟವಾಗುತ್ತದೆ.[೧೮೪]
೨೦೧೭ರಲ್ಲಿ ಪ್ರವಾಸೋದ್ಯಮವು ₹15.24 ಲಕ್ಷ ಕೋಟಿಯಷ್ಟನ್ನು ಅಥವಾ ದೇಶದ ಜಿಡಿಪಿಯ 9.4% ನಷ್ಟು ಸೃಷ್ಟಿಸಿತು ಮತ್ತು 41.622 ದಶಲಕ್ಷ ಉದ್ಯೋಗಗಳಿಗೆ ಆಧಾರವಾಯಿತು (ದೇಶದ ಒಟ್ಟು ಉದ್ಯೋಗದ 8%) ಎಂದು ವಿಶ್ವ ಪ್ರಯಾಣ ಮತ್ತು ಪ್ರವಾಸ ಮಂಡಳಿಯು ಲೆಕ್ಕಹಾಕಿತು. 2028ರ ವೇಳೆಗೆ ಈ ವಲಯವು 6.9% ವಾರ್ಷಿಕ ದರದೊಂದಿಗೆ ಬೆಳೆದು ₹32.05 ಲಕ್ಷ ಕೋಟಿಯಷ್ಟು (ಜಿಡಿಪಿಯ 9.9%) ಮುಟ್ಟುವುದು ಎಂದು ಮುನ್ನುಡಿಯಲಾಗಿದೆ.[೧೮೫] ೨೦೧೬ ರಲ್ಲಿ 8.89 ಪ್ರವಾಸಿಗಳಿಗೆ ಹೋಲಿಸಿದರೆ ೨೦೧೭ರಲ್ಲಿ ೧೦ ದಶಲಕ್ಷಕ್ಕಿಂತ ಹೆಚ್ಚು ವಿದೇಶೀ ಪ್ರವಾಸಿಗರು ಭಾರತದಲ್ಲಿ ಆಗಮಿಸಿ, 15.6% ನಷ್ಟು ಬೆಳವಣಿಗೆಯನ್ನು ದಾಖಲಿಸಿತು.[೧೮೬] ೨೦೧೫ರಲ್ಲಿ ಭಾರತವು ಪ್ರವಾಸೋದ್ಯಮ ಸಂದಾಯಗಳಿಂದ ವಿದೇಶಿ ವಿನಿಮಯದಲ್ಲಿ $21.07 ಶತಕೋಟಿಯಷ್ಟು ಸಂಪಾದಿಸಿತು.[೧೮೭] ಭಾರತಕ್ಕೆ ಅಂತರರಾಷ್ಟ್ರೀಯ ಪ್ರವಾಸೋದ್ಯಮವು ೧೯೯೭ರಲ್ಲಿ 2.37 ದಶಲಕ್ಷ ಆಗಮನಗಳಿಂದ ೨೦೧೫ರಲ್ಲಿ 8.03 ದಶಲಕ್ಷ ಆಗಮನಗಳಿಗೆ ಬೆಳೆದು ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. ಅಮೇರಿಕವು ಭಾರತಕ್ಕೆ ಅಂತರರಾಷ್ಟ್ರೀಯ ಪ್ರವಾಸಿಗಳ ಅತಿ ದೊಡ್ಡ ಮೂಲವಾಗಿದೆ. ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಮತ್ತು ಜಪಾನ್ ಅಂತರರಾಷ್ಟ್ರೀಯ ಪ್ರವಾಸಿಗಳ ಇತರ ಪ್ರಮುಖ ಮೂಲಗಳಾಗಿವೆ.[೧೮೮][೧೮೯] 10% ಗಿಂತ ಕಡಿಮೆ ಅಂತರರಾಷ್ಟ್ರೀಯ ಪ್ರವಾಸಿಗಳು ತಾಜ್ ಮಹಲ್ಗೆ ಭೇಟಿ ನೀಡುತ್ತಾರೆ. ಬಹುಪಾಲು ಪ್ರವಾಸಿಗಳು ಇತರ ಸಾಂಸ್ಕೃತಿಕ, ವಿಷಯಾಧಾರಿತ ಮತ್ತು ರಜಾದಿನಗಳ ಪ್ರಯಾಣವನ್ನು ಮಾಡುತ್ತಾರೆ.[೧೯೦] 12 ದಶಲಕ್ಷಕ್ಕಿಂತ ಹೆಚ್ಚು ಭಾರತೀಯ ನಾಗರಿಕರು ಪ್ರತಿ ವರ್ಷ ಪ್ರವಾಸೋದ್ಯಮಕ್ಕಾಗಿ ಅಂತರರಾಷ್ಟ್ರೀಯ ಪ್ರಯಾಣ ಮಾಡುತ್ತಾರೆ. ಭಾರತದೊಳಗಿನ ದೇಶೀಯ ಪ್ರವಾಸೋದ್ಯಮವು ಸುಮಾರು 740 ದಶಲಕ್ಷ ಭಾರತೀಯ ಪ್ರಯಾಣಿಕರನ್ನು ಸೇರಿಸುತ್ತದೆ.[೧೮೮]
ಭಾರತವು ತನ್ನ ಆರೋಗ್ಯ ಆರೈಕೆ ಅರ್ಥವ್ಯವಸ್ಥೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ವೈದ್ಯಕೀಯ ಪ್ರವಾಸೋದ್ಯಮ ವಲಯವನ್ನು ಹೊಂದಿದೆ. ಇದು ಕಡಿಮೆ ವೆಚ್ಚದ ಆರೋಗ್ಯ ಸೇವೆಗಳು ಮತ್ತು ದೀರ್ಘಕಾಲಿಕ ಆರೈಕೆಯನ್ನು ನೀಡುತ್ತದೆ.[೧೯೧][೧೯೨] ಅಕ್ಟೋಬರ್ ೨೦೧೫ರಲ್ಲಿ, ವೈದ್ಯಕೀಯ ಪ್ರವಾಸೋದ್ಯಮ ವಲಯವು $3 ಶತಕೋಟಿ ಮೌಲ್ಯದ್ದಾಗಿತ್ತು ಎಂದು ಅಂದಾಜಿಸಲಾಗಿದೆ. ೨೦೨೦ರ ವೇಳೆಗೆ ಇದು $7–8 ಶತಕೋಟಿಗೆ ಬೆಳೆಯುವುದು ಎಂದು ಅಂದಾಜಿಸಲಾಗಿದೆ.[೧೯೩] 2014ರಲ್ಲಿ, 184,298 ವಿದೇಶಿ ರೋಗಿಗಳು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಭಾರತಕ್ಕೆ ಪ್ರಯಾಣ ಮಾಡಿದರು.[೧೯೪]
ಭಾರತದ ಮಾಧ್ಯಮ ಮತ್ತು ಮನೋರಂಜನಾ ಉದ್ಯಮವು ೧೧.೭% ನಷ್ಟು ಸಿಎಜಿಆರ್ನ್ನು ದಾಖಲಿಸಿ ೨೦೧೭ ರಲ್ಲಿ $30.364 ಶತಕೋಟಿ ಗಾತ್ರದಿಂದ ೨೦೨೨ರ ವೇಳೆಗೆ $52.683 ಶತಕೋಟಿ ಗಾತ್ರಕ್ಕೆ ಬೆಳೆಯುವುದು ಎಂದು ಆಸೋಚಾಮ್-ಪಿಡ್ಬ್ಯುಸಿಯ ಒಂದು ಜಂಟಿ ಅಧ್ಯಯನವು ಅಂದಾಜಿಸಿತು. ಈ ಅವಧಿಯಲ್ಲಿ ದೂರದರ್ಶನ, ಚಲನಚಿತ್ರ ಮತ್ತು ಓವರ್ ದ ಟಾಪ್ ಸೇವೆಗಳು ಉದ್ಯಮದ ಒಟ್ಟಾರೆ ಬೆಳವಣಿಗೆಯ ಹೆಚ್ಚುಕಡಿಮೆ ಅರ್ಧದಷ್ಟನ್ನು ರೂಪಿಸುವವು ಎಂದೂ ಈ ಅಧ್ಯಯನವು ಮುನ್ನುಡಿಯಿತು.[೧೯೫]
ಏರುತ್ತಿರುವ ಆದಾಯಗಳು, ಹೆಚ್ಚಿನ ಆರೋಗ್ಯ ಅರಿವು, ಜೀವನಶೈಲಿ ರೋಗಗಳ ಹೆಚ್ಚಿದ ಆದ್ಯತೆ, ಮತ್ತು ಆರೋಗ್ಯ ವಿಮೆಯ ಸುಧಾರಿತ ಬಳಕೆಯಿಂದ ಉತ್ತೇಜಿತವಾಗಿ ಭಾರತದ ಆರೋಗ್ಯ ರಕ್ಷಣಾ ವಲಯವು ೨೦೧೫ ರಿಂದ ೨೦೨೦ರ ನಡುವೆ 29% ಸಿಎಜಿಆರ್ನೊಂದಿಗೆ ಬೆಳೆದು $280 ಶತಕೋಟಿ ಮುಟ್ಟುವುದು ಎಂದು ನಿರೀಕ್ಷಿಸಲಾಗಿದೆ.[೧೯೬]
ಭಾರತದಲ್ಲಿನ ಆಯುರ್ವೇದ ಉದ್ಯಮವು ೨೦೧೮ರಲ್ಲಿ $4.4 ಶತಕೋಟಿಯಷ್ಟು ಮಾರುಕಟ್ಟೆ ಗಾತ್ರವನ್ನು ದಾಖಲಿಸಿತು. ೨೦೨೫ರ ವರೆಗೆ ಈ ಉದ್ಯಮವು 16% ಸಿಎಜಿಆರ್ನೊಂದಿಗೆ ಬೆಳೆಯುವುದು ಎಂದು ಭಾರತೀಯ ಉದ್ಯಮ ಒಕ್ಕೂಟವು ಅಂದಾಜಿಸುತ್ತದೆ. ಹೆಚ್ಚುಕಡಿಮೆ 75% ಮಾರುಕಟ್ಟೆಯು ಲಿಖಿತ ಸೂಚಿಯಿಲ್ಲದ ವೈಯಕ್ತಿಕ ಆರೈಕೆ ಮತ್ತು ಸೌಂದರ್ಯೋತ್ಪನ್ನಗಳನ್ನು ಒಳಗೊಂಡಿದೆ. ಆಯುರ್ವೇದಿಕ ಯೋಗಕ್ಷೇಮ ಅಥವಾ ಆಯುರ್ವೇದಿಕ ಪ್ರವಾಸೋದ್ಯಮ ಸೇವೆಗಳು ಮಾರುಕಟ್ಟೆಯ 15% ನಷ್ಟನ್ನು ರೂಪಿಸಿದ್ದವು.[೧೯೭]
೨೦೧೬ರಲ್ಲಿ ಭಾರತದಲ್ಲಿನ ಜಾರಿವ್ಯವಸ್ಥೆ ಉದ್ಯಮವು $160 ಶತಕೋಟಿಗಿಂತ ಹೆಚ್ಚು ಮೌಲ್ಯವುಳ್ಳದ್ದಾಗಿತ್ತು, ಮತ್ತು ಹಿಂದಿನ ಐದು ವರ್ಷಗಳ ಅವಧಿಯಲ್ಲಿ 7.8% ಸಿಎಜಿಆರ್ನೊಂದಿಗೆ ಬೆಳೆಯಿತು. ಈ ಉದ್ಯಮವು ಸುಮಾರು ೨೨ ದಶಲಕ್ಷ ಜನರಿಗೆ ಉದ್ಯೋಗ ನೀಡುತ್ತದೆ.[೧೯೮][೧೯೯] ೨೦೨೦ರ ವೇಳೆಗೆ ಇದು $215 ಶತಕೋಟಿಯಷ್ಟು ಗಾತ್ರವನ್ನು ತಲುಪುವುದು ಎಂದು ನಿರೀಕ್ಷಿಸಲಾಗಿದೆ.[೨೦೦] ವಿಶ್ವ ಬ್ಯಾಂಕ್ನ ೨೦೧೬ರ ಜಾರಿವ್ಯವಸ್ಥೆಯ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ೧೬೦ ದೇಶಗಳ ಪೈಕಿ ಭಾರತವು ೩೫ನೇ ಸ್ಥಾನ ಪಡೆಯಿತು.[೨೦೧]
ಭಾರತದಲ್ಲಿನ ಮುದ್ರಣ ಮತ್ತು ಮುದ್ರಣ ಪ್ಯಾಕೇಜಿಂಗ್ ಉದ್ಯಮವು ಬೆಳೆಯುತ್ತಿದೆ; ಜನರು ಈ ಪ್ರಮುಖ ಉದ್ಯಮದಲ್ಲಿ ಈಗ ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ. ಭಾರತದಲ್ಲಿ ೩೬ಕ್ಕಿಂತ ಹೆಚ್ಚು ಮುದ್ರಣ ಸಂಸ್ಥೆಗಳಿವೆ ಮತ್ತು ಇವುಗಳಲ್ಲಿ ಕೆಲವು ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತಿವೆ. ಪ್ರತಿ ವರ್ಷ ೩೫೦೦ ಕ್ಕಿಂತ ಹೆಚ್ಚು ಹೊಸ ಮುದ್ರಣ ಇಂಜಿನಿಯರಿಂಗ್ ಪದವೀಧರರು ಉದ್ಯಮಕ್ಕೆ ಸೇರಿಕೊಳ್ಳುತ್ತಾರೆ. ಇನ್ನೂ ಹಲವರು ಮುದ್ರಣ ಅಂಗಡಿಗಳಲ್ಲಿ ಕೆಲಸದ ಅವಧಿಯಲ್ಲಿ ತರಬೇತಿ ಪಡೆಯುತ್ತಾರೆ. ಮುದ್ರಣ ವಿಶೇಷವಾಗಿ ಪ್ಯಾಕೇಜಿಂಗ್ ಉದ್ಯಮವು ಈಗ ಒಂದು ಪ್ರಮುಖ ಉದ್ಯಮವಾಗಿದೆ. ೧೯೮೯ರಿಂದ ಮುದ್ರಣ ಜೊತೆಗೆ ಪ್ಯಾಕೇಜಿಂಗ್ ಉದ್ಯಮದ ಬೆಳವಣಿಗೆ ದರವು ೧೪% ಗಿಂತ ಹೆಚ್ಚಿದೆ ಎಂದು ಹೇಳಲಾಗಿದೆ.
2014–15 ರಲ್ಲಿ ದೂರಸಂಪರ್ಕ ವಲಯವು ₹2.20 ಲಕ್ಷ ಕೋಟಿಯಷ್ಟು ಆದಾಯವನ್ನು ಸೃಷ್ಟಿಸಿತು (ಒಟ್ಟು ಜಿಡಿಪಿಯ 1.94%).[೨೦೨] ೩೧ ಆಗಸ್ಟ್ ೨೦೧೬ರ ವೇಳೆಗೆ 1.053 ಶತಕೋಟಿ ಚಂದಾದಾರರೊಂದಿಗೆ ದೂರವಾಣಿ ಬಳಕೆದಾರರ (ಸ್ಥಿರ ಮತ್ತು ಚರ ಫೋನು ಎರಡೂ) ಸಂಖ್ಯೆಯ ಪ್ರಕಾರ ಭಾರತವು ವಿಶ್ವದಲ್ಲಿನ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ದೂರಸಂಪರ್ಕ ನಿರ್ವಾಹಕರಲ್ಲಿ ತೀವ್ರ ಪೈಪೋಟಿಯ ಕಾರಣ, ಭಾರತವು ವಿಶ್ವದಲ್ಲಿನ ಅತಿ ಕಡಿಮೆ ಕರೆ ಶುಲ್ಕಗಳಲ್ಲಿ ಒಂದನ್ನು ಹೊಂದಿದೆ. ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಅಂತರಜಾಲ ಬಳಕೆದಾರ ಮೂಲವನ್ನು ಹೊಂದಿದೆ. ೩೧ ಮಾರ್ಚ್ ೨೦೧೬ರ ವೇಳೆಗೆ, ದೇಶದಲ್ಲಿ 342.65 ದಶಲಕ್ಷ ಅಂತರಜಾಲ ಚಂದಾದಾರರಿದ್ದರು.[೨೦೩]
೨೦೧೨ರ ವೇಳೆ ಭಾರತದಲ್ಲಿ 554 ದಶಲಕ್ಷಕ್ಕಿಂತ ಹೆಚ್ಚು ಟಿವಿ ಗ್ರಾಹಕರಿದ್ದಾರೆ ಎಂದು ಉದ್ಯಮದ ಅಂದಾಜುಗಳು ಸೂಚಿಸುತ್ತವೆ.[೨೦೪] ಚಂದಾದಾರರ ಸಂಖ್ಯೆಯ ಪ್ರಕಾರ ಭಾರತವು ವಿಶ್ವದಲ್ಲಿನ ಅತಿ ದೊಡ್ಡ ನೇರವಾಗಿ ಮನೆಗಿನ (ಡಿಟಿಎಚ್) ದೂರದರ್ಶನ ಮಾರುಕಟ್ಟೆಯಾಗಿದೆ. ೨೦೧೬ರ ವೇಳೆ, ದೇಶದಲ್ಲಿ 84.80 ದಶಲಕ್ಷ ಡಿಟಿಎಚ್ ಚಂದಾದಾರರಿದ್ದರು.[೨೦೫]
೨೦೧೬ರಲ್ಲಿ ಗಣಿಗಾರಿಕೆಯು $63 ಬಿಲಿಯನ್ನಷ್ಟು ಕೊಡುಗೆ ನೀಡಿತು (ಜಿಡಿಪಿಯ 3%) ಮತ್ತು 20.14 ದಶಲಕ್ಷ ಜನರಿಗೆ ಉದ್ಯೋಗ ನೀಡಿತು (ಕಾರ್ಯಪಡೆಯ 5%).[೨೦೬] ೨೦೦೯ರಲ್ಲಿ ಭಾರತದ ಗಣಿಗಾರಿಕೆ ಉದ್ಯಮವು ಪರಿಮಾಣದ ಪ್ರಕಾರ ವಿಶ್ವದಲ್ಲಿ ಖನಿಜಗಳ ನಾಲ್ಕನೇ ಅತಿ ದೊಡ್ಡ ಉತ್ಪಾದಕವಾಗಿತ್ತು ಮತ್ತು ಮೌಲ್ಯದ ಪ್ರಕಾರ ಎಂಟನೇ ಅತಿ ದೊಡ್ಡ ಉತ್ಪಾದಕವಾಗಿತ್ತು.[೨೦೭] 2013ರಲ್ಲಿ, ಭಾರತವು ೮೯ ಖನಿಜಗಳನ್ನು ಗಣಿಗಾರಿಕೆ ಮಾಡಿ ಸಂಸ್ಕರಿಸಿತು. ಇವುಗಳಲ್ಲಿ ನಾಲ್ಕು ಇಂಧನ ಖನಿಜಗಳು, ಮೂರು ಪರಮಾಣು ಶಕ್ತಿ ಖನಿಜಗಳಾಗಿದ್ದವು ಮತ್ತು ೮೦ ಇಂಧನೇತರ ಖನಿಜಗಳಾಗಿದ್ದವು.[೨೦೮] 2011–12ರಲ್ಲಿ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯವು ಪರಿಮಾಣದ ಪ್ರಕಾರ ಖನಿಜ ಉತ್ಪಾದನೆಯ 68% ನಷ್ಟನ್ನು ರೂಪಿಸಿತ್ತು.[೨೦೯]
ಹುಟ್ಟುವಳಿ ಮೌಲ್ಯದ ಪ್ರಕಾರ ಭಾರತದ ಗಣಿಗಾರಿಕೆ ಉದ್ಯಮದ ಸುಮಾರು 50% ನಷ್ಟು ಎಂಟು ರಾಜ್ಯಗಳಲ್ಲಿ ಒಟ್ಟುಗೂಡಿದೆ: ಒಡಿಶಾ, ರಾಜಸ್ಥಾನ, ಛತ್ತಿಸ್ಗಢ್, ಆಂಧ್ರ ಪ್ರದೇಶ, ತೆಲಂಗಾಣ, ಝಾರ್ಖಂಡ್, ಮಧ್ಯಪ್ರದೇಶ ಮತ್ತು ಕರ್ನಾಟಕ. ಮೌಲದ್ಯ ಪ್ರಕಾರ ಹುಟ್ಟುವಳಿಯ ಹೆಚ್ಚಿನ 25% ಕಡಲಕರೆಯಾಚೆಯ ತೈಲ ಮತ್ತು ಅನಿಲ ಸಂಪನ್ಮೂಲಗಳಿಂದ ಬರುತ್ತದೆ.[೨೧೦] ೨೦೧೦ರಲ್ಲಿ ಭಾರತವು ಸುಮಾರು ೩,೦೦೦ ಗಣಿಗಳನ್ನು ನಿರ್ವಹಿಸಿತು. ಇವುಗಳಲ್ಲಿ ಅರ್ಧದಷ್ಟು ಕಲ್ಲಿದ್ದಲು, ಸುಣ್ಣ ಕಲ್ಲು ಮತ್ತು ಕಬ್ಬಿಣದ ಅದಿರುಗಳಾಗಿದ್ದವು.[೨೧೧] ಹುಟ್ಟುವಳಿ ಮೌಲ್ಯದ ಆಧಾರದಲ್ಲಿ, ಭಾರತವು ಅಭ್ರಕ, ಕ್ರೋಮೈಟ್, ಕಲ್ಲಿದ್ದಲು, ಕಂದು ಕಲ್ಲಿದ್ದಲು, ಕಬ್ಬಿಣದ ಅದಿರು, ಬಾಕ್ಸೈಟ್, ಬೆರೈಟ್, ಸತುವು ಮತ್ತು ಮ್ಯಾಂಗನೀಸ್ನ ಐದು ಅತಿ ದೊಡ್ಡ ಉತ್ಪಾದಕರ ಪೈಕಿ ಒಂದಾಗಿತ್ತು; ಅನೇಕ ಇತರ ಖನಿಜಗಳ ಹತ್ತು ಅತಿ ದೊಡ್ಡ ಜಾಗತಿಕ ಉತ್ಪಾದಕರಲ್ಲಿ ಒಂದಾಗಿತ್ತು.[೨೧೨][೨೧೦] ೨೦೧೩ ರಲ್ಲಿ ಭಾರತವು ಉಕ್ಕಿನ ನಾಲ್ಕನೇ ಅತಿ ದೊಡ್ಡ ಉತ್ಪಾದಕವಾಗಿತ್ತು,[೨೧೩] ಮತ್ತು ಅಲ್ಯುಮಿನಿಯಂನ ಏಳನೇ ಅತಿ ದೊಡ್ಡ ಉತ್ಪಾದಕವಾಗಿತ್ತು.[೨೧೪]
ಭಾರತದ ಖನಿಜ ಸಂಪನ್ಮೂಲಗಳು ಅಗಾಧವಾಗಿವೆ.[೨೧೫] ಆದರೆ, ಇದರ ಗಣಿಗಾರಿಕಾ ಉದ್ಯಮವು ಇಳಿತವಾಗಿದೆ – ೨೦೦೦ರಲ್ಲಿ ಜಿಡಿಪಿಗೆ 3% ಕೊಡುಗೆ ನೀಡುತ್ತಿದ್ದ ಈ ಉದ್ಯಮದ ಕೊಡುಗೆ ೨೦೧೦ ರಲ್ಲಿ 2.3% ಗೆ ಇಳಿಯಿತು. ಈ ಉದ್ಯಮವು ೨.೯ ದಶಲಕ್ಷ ಜನರಿಗೆ ಉದ್ಯೋಗ ನೀಡಿತ್ತು ಮತ್ತು ಒಟ್ಟು ಕಾರ್ಮಿಕರಲ್ಲಿ ಇದರ ಪ್ರತಿಶತ ಕಡಿಮೆಯಾಗುತ್ತಿದೆ. ಭಾರತವು ಕಲ್ಲಿದ್ದಲು ಸೇರಿದಂತೆ ಅನೇಕ ಖನಿಜಗಳ ನಿವ್ವಳ ಆಮದುದಾರವಾಗಿದೆ. ಸಂಕೀರ್ಣ ಪರವಾನಗಿ, ನಿಯಂತ್ರಕ ಹಾಗೂ ಆಡಳಿತ ಪ್ರಕ್ರಿಯೆಗಳು, ಸಾಲದಿರುವ ಮೂಲಸೌಕರ್ಯ, ಬಂಡವಾಳ ಸಂಪನ್ಮೂಲಗಳ ಕೊರತೆ, ಮತ್ತು ಪಾರಿಸರಿಕವಾಗಿ ಸಮರ್ಥನೀಯ ತಂತ್ರಜ್ಞಾನಗಳ ನಿಧಾನ ಅಳವಡಿಕೆಯ ಕಾರಣ ಭಾರತದ ಗಣಿಕಾರಿಕಾ ವಲಯವು ಇಳಿತವಾಗುತ್ತಿದೆ.[೨೧೦][೨೧೬]
ವಿತ್ತೀಯ ವರ್ಷ 2014–15ರಲ್ಲಿ, ಭಾರತವು ಕಚ್ಚಾ ಉಕ್ಕಿನ ಮೂರನೇ ಅತಿ ದೊಡ್ಡ ಉತ್ಪಾದಕವಾಗಿತ್ತು[೨೧೭] ಮತ್ತು ಸರಂಧ್ರ ಕಬ್ಬಿಣದ ಅತಿ ದೊಡ್ಡ ಉತ್ಪಾದಕವಾಗಿತ್ತು. ಈ ಕೈಗಾರಿಕೆಯು ೯೧.೪೬ ದಶಲಕ್ಷ ಟನ್ನು ಸಿದ್ಧ ಉಕ್ಕನ್ನು ಮತ್ತು ೯.೭ ದಶಲಕ್ಷ ಟನ್ ಬೀಡುಕಬ್ಬಿಣವನ್ನು ಉತ್ಪಾದಿಸಿತು. ಭಾರತದಲ್ಲಿ ಬಹುತೇಕ ಕಬ್ಬಿಣ ಮತ್ತು ಉಕ್ಕನ್ನು ಕಬ್ಬಿಣದ ಅದಿರಿನಿಂದ ಉತ್ಪಾದಿಸಲಾಗುತ್ತದೆ.[೨೧೮]
೨೦೧೬ರಲ್ಲಿ ನಿರ್ಮಾಣ ಉದ್ಯಮವು $288 ಶತಕೋಟಿಯಷ್ಟು ಕೊಡುಗೆ ನೀಡಿತು (ಜಿಡಿಪಿಯ 13%) ಮತ್ತು 60.42 ದಶಲಕ್ಷ ಜನರಿಗೆ ಉದ್ಯೋಗ ನೀಡಿತು (ಕಾರ್ಯಪಡೆಯ 14%).[೨೧೯]
೧೯೯೧ರ ಉದಾರೀಕರಣದವರೆಗೆ, ತನ್ನ ಅರ್ಥವ್ಯವಸ್ಥೆಯನ್ನು ರಕ್ಷಿಸಲು ಮತ್ತು ಸ್ವಾವಲಂಬನೆಯನ್ನು ಸಾಧಿಸಲು ಭಾರತವು ಬಹಳ ಮಟ್ಟಿಗೆ ಉದ್ದೇಶಪೂರ್ವಕವಾಗಿ ವಿಶ್ವ ಮಾರುಕಟ್ಟೆಗಳಿಂದ ವಿವಿಕ್ತಗೊಂಡಿತ್ತು. ವಿದೇಶಿ ವ್ಯಾಪಾರವು ಆಮದು ಸುಂಕಗಳು, ರಫ್ತು ತೆರಿಗೆಗಳು ಮತ್ತು ಪರಿಮಾಣಾತ್ಮಕ ನಿರ್ಬಂಧಗಳಿಗೆ ಒಳಪಟ್ಟಿತ್ತು. ವಿದೇಶಿ ನೇರ ಬಂಡವಾಳವು ಮೇಲಿನ ಮಿತಿಯ ಷೇರು ಒಡೆತನ, ತಂತ್ರಜ್ಞಾನ ವರ್ಗಾವಣೆ, ರಫ್ತು ಬಾಧ್ಯತೆಗಳು ಮತ್ತು ಸರ್ಕಾರಿ ಅನುಮೋದನೆಗಳಿಂದ ನಿರ್ಬಂಧಿತವಾಗಿತ್ತು; ಕೈಗಾರಿಕಾ ವಲಯದಲ್ಲಿನ ಬಹುತೇಕ 60% ಹೊಸ ಎಫ಼್ಡಿಐಗೆ ಈ ಅನುಮೋದನೆಗಳು ಅಗತ್ಯವಿದ್ದವು. ಈ ನಿರ್ಬಂಧಗಳ ಕಾರಣ ೧೯೮೫ ಮತ್ತು ೧೯೯೧ರ ನಡುವೆ ಭಾರತದಲ್ಲಿನ ಎಫ಼್ಡಿಐ ಸರಾಸರಿ ಕೇವಲ ಸುಮಾರು $200 ದಶಲಕ್ಷದಷ್ಟಿತ್ತು; ಬಂಡವಾಳ ಹರಿವುಗಳ ದೊಡ್ಡ ಪ್ರತಿಶತ ವಿದೇಶಿ ನೆರವು, ವಾಣಿಜ್ಯ ಸಾಲ ಮತ್ತು ಅನಿವಾಸಿ ಭಾರತೀಯರ ಇಡುಗಂಟುಗಳಾಗಿದ್ದವು.[೨೨೦] ಸ್ವಾತಂತ್ರದ ನಂತರದ ಮೊದಲ ೧೫ ವರ್ಷಗಳಲ್ಲಿ ಆ ಅವಧಿಯ ಸರ್ಕಾರದಿಂದ ವ್ಯಾಪಾರ ನೀತಿಯ ಸಾಮಾನ್ಯ ಉಪೇಕ್ಷೆಯ ಕಾರಣ ಭಾರತದ ರಫ್ತುಗಳು ಜಡವಾಗಿದ್ದವು; ಅದೇ ಅವಧಿಯಲ್ಲಿ ಮುಂಚಿನ ಕೈಗಾರಿಕೀಕರಣದೊಂದಿಗೆ, ಆಮದುಗಳಲ್ಲಿ ಮುಖ್ಯವಾಗಿ ಯಂತ್ರೋಪಕರಣಗಳು, ಕಚ್ಚಾ ವಸ್ತುಗಳು ಮತ್ತು ಗ್ರಾಹಕ ಸರಕುಗಳು ಸೇರಿದ್ದವು.[೨೨೧]
ಉದಾರೀಕರಣವಾದಾಗಿನಿಂದ, ಭಾರತದ ಅಂತರರಾಷ್ಟ್ರೀಯ ವ್ಯಾಪಾರದ ಮೌಲ್ಯವು ವೇಗವಾಗಿ ಏರಿಕೆಯಾಗಿದೆ.[೨೨೨] ಜಿಡಿಪಿಗೆ ಸರಕುಗಳು ಮತ್ತು ಸೇವೆಗಳಲ್ಲಿನ ಒಟ್ಟು ವ್ಯಾಪಾರದ ಕೊಡುಗೆಯು 1990–91 ರಲ್ಲಿ 16% ಇದ್ದದ್ದು 2009–10 ರಲ್ಲಿ 47% ಗೆ ಏರಿತು.[೨೨೩][೨೨೪] ೨೦೧೫ರಲ್ಲಿ ವಿದೇಶಿ ವ್ಯಾಪಾರವು ಭಾರತದ ಜಿಡಿಪಿಯ 48.8% ರಷ್ಟನ್ನು ರೂಪಿಸಿತು.[೨೨೫] ಜಾಗತಿಕವಾಗಿ, ಭಾರತವು ಬಿಕರಿ ಮಾಲಿನ ವ್ಯಾಪಾರದಲ್ಲಿನ ರಫ್ತುಗಳ 1.44% ನಷ್ಟು ಹಾಗೂ ಆಮದುಗಳ 2.12% ನಷ್ಟನ್ನು ರೂಪಿಸುತ್ತದೆ, ಮತ್ತು ವಾಣಿಜ್ಯಿಕ ಸೇವೆಗಳ ವ್ಯಾಪಾರದಲ್ಲಿನ ರಫ್ತುಗಳ 3.34% ನಷ್ಟು ಹಾಗೂ ಆಮದುಗಳ 3.31% ನಷ್ಟನ್ನು ರೂಪಿಸುತ್ತವೆ.[೨೨೪] ಐರೋಪ್ಯ ಒಕ್ಕೂಟ, ಚೈನಾ, ಅಮೇರಿಕ ಮತ್ತು ಸಂಯುಕ್ತ ಅರಬ್ ಸಂಸ್ಥಾನ ಭಾರತದ ಪ್ರಮುಖ ವ್ಯಾಪಾರ ಪಾಲುದಾರರಾಗಿವೆ.[೨೨೬] 2006–07 ರಲ್ಲಿ, ಪ್ರಮುಖ ರಫ್ತು ಸರಕುಗಳಲ್ಲಿ ಇಂಜಿನಿಯರಿಂಗ್ ಸರಕುಗಳು, ಪೆಟ್ರೋಲಿಯಂ ಉತ್ಪನ್ನಗಳು, ರಾಸಾಯನಿಕಗಳು ಹಾಗೂ ಔಷಧ ವಸ್ತುಗಳು, ರತ್ನಗಳು ಹಾಗೂ ಆಭರಣಗಳು, ಬಟ್ಟೆ ಹಾಗೂ ಉಡುಪುಗಳು, ಕೃಷಿ ಉತ್ಪನ್ನಗಳು, ಕಬ್ಬಿಣದ ಅದಿರು ಮತ್ತು ಇತರ ಖನಿಜಗಳು ಸೇರಿದ್ದವು. ಪ್ರಮುಖ ಆಮದು ಸರಕುಗಳಲ್ಲಿ ಕಚ್ಚಾತೈಲ ಹಾಗೂ ಸಂಬಂಧಿತ ಉತ್ಪನ್ನಗಳು, ಯಂತ್ರೋಪಕರಣಗಳು, ವಿದ್ಯುನ್ಮಾನ ಸರಕುಗಳು, ಚಿನ್ನ ಮತ್ತು ಬೆಳ್ಳಿ ಸೇರಿದ್ದವು.[೨೨೭] ನವೆಂಬರ್ ೨೦೧೦ರಲ್ಲಿ, ರಫ್ತುಗಳು ವರ್ಷದಿಂದ ವರ್ಷಕ್ಕೆ 22.3% ರಷ್ಟು ಏರಿ ೧೮.೮೮ ಶತಕೋಟಿ ಡಾಲರ್ನಷ್ಟಾದವು, ಮತ್ತು ಆಮದುಗಳು 7.5% ನಷ್ಟು ಏರಿ ೨೭.೭೮ ಶತಕೋಟಿ ಡಾಲರ್ನಷ್ಟಾದವು. ಅದೇ ತಿಂಗಳಿಗೆ ವ್ಯಾಪಾರ ಖೋತಾ 2009 ರಲ್ಲಿ ೧೦.೪ ಶತಕೋಟಿ ಡಾಲರ್ನಷ್ಟಿದ್ದದ್ದು 2010ರಲ್ಲಿ ೮.೯ ಶತಕೋಟಿ ಡಾಲರ್ಗಳಿಗೆ ಇಳಿಯಿತು.[೨೨೮]
ಸ್ವಾತಂತ್ರ್ಯದ ಕಾಲದಿಂದ, ಚಾಲ್ತಿ ಲೆಕ್ಕದಲ್ಲಿನ ಭಾರತದ ಪಾವತಿ ಬಾಕಿಯು ಅಭಾವಾತ್ಮಕವಾಗಿದೆ. ಪಾವತಿ ಬಾಕಿ ಬಿಕ್ಕಟ್ಟಿನ ಕಾರಣ ಕೈಗೊಳ್ಳಲಾದ ೧೯೯೦ರ ದಶಕದ ಆರ್ಥಿಕ ಉದಾರೀಕರಣವಾದಾಗಿನಿಂದ ಭಾರತದ ರಫ್ತುಗಳು ಸ್ಥಿರವಾಗಿ ಏರಿ 1990–91ರಲ್ಲಿ 66.2% ನಿಂದ ಹೆಚ್ಚಾಗಿ 2002–03ರಲ್ಲಿ ತನ್ನ ಆಮದುಗಳ 80.3% ನಷ್ಟನ್ನು ಒಳಗೊಂಡಿತು.[೨೨೯] ಆದರೆ, ಜಾಗತಿಕ ಆರ್ಥಿಕ ಕುಸಿತ, ನಂತರ ವಿಶ್ವ ವ್ಯಾಪಾರದಲ್ಲಿನ ಸಾಮಾನ್ಯ ನಿಧಾನಗೊಳ್ಳುವಿಕೆಯ ಕಾರಣ 2008–09ರಲ್ಲಿ ಆಮದುಗಳ ಪ್ರತಿಶತವಾಗಿ ರಫ್ತುಗಳು 61.4% ಗೆ ಇಳಿದವು.[೨೩೦] ಬೆಳೆಯುತ್ತಿರುವ ಭಾರತದ ತೈಲ ಆಮದಿನ ಬಿಲ್ಲು ಹೆಚ್ಚಿನ ಚಾಲ್ತಿ ಲೆಕ್ಕದ ಕೊರತೆಯ ಹಿಂದಿನ ಮುಖ್ಯ ಚಾಲಕವಾಗಿದೆ ಎಂದು ಗಮನಿಸಲಾಗಿದೆ.[೨೩೧] ಇದು 2008–09ರಲ್ಲಿ $118.7 ಶತಕೋಟಿಗೆ, ಅಥವಾ ಜಿಡಿಪಿಯ 11.11%ಗೆ ಏರಿತು.[೨೩೨] ೨೦೧೦ರ ಜನವರಿ ಮತ್ತು ಅಕ್ಟೋಬರ್ ನಡುವೆ ಭಾರತವು $82.1 ಶತಕೋಟಿ ಮೌಲ್ಯದ ಕಚ್ಚಾತೈಲವನ್ನು ಆಮದು ಮಾಡಿಕೊಂಡಿತು.[೨೩೧] ಭಾರತದ ಅರ್ಥವ್ಯವಸ್ಥೆಯು ೨೦೦೨ ರಿಂದ ೨೦೧೨ರ ವರೆಗೆ ಪ್ರತಿ ವರ್ಷ ವ್ಯಾಪಾರ ಕೊರತೆಯನ್ನು ಅನುಭವಿಸಿದೆ. 2011–12ರಲ್ಲಿ ಸರಕುಗಳ ವ್ಯಾಪಾರ ಕೊರತೆಯು $189 ಶತಕೋಟಿಯಷ್ಟಿತ್ತು.[೨೩೩] ಚೈನಾದೊಂದಿಗೆ ಭಾರತದ ವ್ಯಾಪಾರ ಕೊರತೆಯು ಅತಿ ಹೆಚ್ಚಾಗಿದೆ, ೨೦೧೩ರಲ್ಲಿ ಇದು ಸುಮಾರು $31 ಶತಕೋಟಿಯಷ್ಟಿತ್ತು.[೨೩೪]
ಅರ್ಥವ್ಯವಸ್ಥೆಯ ಉದಾರೀಕರಣವಾದಾಗಿನಿಂದ ಬಾಹ್ಯ ನೆರವು ಮತ್ತು ರಿಯಾಯಿತಿ ಋಣದ ಮೇಲಿನ ಭಾರತದ ಅವಲಂಬನೆಯು ಕಡಿಮೆಯಾಗಿದೆ. ಋಣದ ಅನುಪಾತವು 1990–91 ರಲ್ಲಿ 35.3% ಇದ್ದದ್ದು 2008–09 ರಲ್ಲಿ 4.4% ಗೆ ಇಳಿಯಿತು.[೨೩೫] ಭಾರತದಲ್ಲಿ, ಸಂಸ್ಥೆಗಳಿಗೆ ಹಣದ ಹೆಚ್ಚುವರಿ ಮೂಲವನ್ನು ಒದಗಿಸಲು ಸರ್ಕಾರವು ಬಾಹ್ಯ ವಾಣಿಜ್ಯಿಕ ಸಾಲಗಳು (ಇಸಿಬಿಗಳು), ಅಥವಾ ಅನಿವಾಸಿ ಸಾಲಗಾರರಿಂದ ವಾಣಿಜ್ಯಿಕ ಸಾಲಗಳಿಗೆ ಅನುಮತಿ ನೀಡಿದೆ. ೧೯೯೯ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಭಾರತೀಯ ರಿಜ಼ರ್ವ್ ಬ್ಯಾಂಕ್ (ಆರ್ಬಿಐ) ಹೊರಡಿಸಿದ ಇಸಿಬಿ ಕಾರ್ಯನೀತಿ ಮಾರ್ಗಸೂಚಿಗಳ ಮೂಲಕ ಹಣಕಾಸು ಸಚಿವಾಲಯವು ಇವುಗಳ ಮೇಲ್ವಿಚಾರಣೆ ಮಾಡಿ ಇವುಗಳನ್ನು ನಿಯಂತ್ರಿಸುತ್ತದೆ.[೨೩೬] ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು ಮಾರ್ಚ್ ೧೯೯೧ರಲ್ಲಿ $5.8 ಶತಕೋಟಿಯಿಂದ ಎಪ್ರಿಲ್ ೨೦೧೮ರಲ್ಲಿ $426 ಶತಕೋಟಿಗೆ ಸ್ಥಿರವಾಗಿ ಬೆಳೆದಿದೆ.[೨೩೭] ೨೦೧೨ರಲ್ಲಿ, ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆ ಮತ್ತು ಸಶಕ್ತತೆಯನ್ನು ಉಲ್ಲೇಖಿಸಿ ಯುನೈಟಡ್ ಕಿಂಗ್ಡಮ್ ಭಾರತಕ್ಕೆ ಎಲ್ಲ ಹಣಕಾಸು ನೆರವಿಗೆ ಅಂತ್ಯವನ್ನು ಘೋಷಿಸಿತು.[೨೩೮][೨೩೯]
೨೦೧೩ರಲ್ಲಿ ಭಾರತದ ಚಾಲ್ತಿ ಲೆಕ್ಕದ ಅಭಾವವು ಸಾರ್ವಕಾಲಿಕ ಎತ್ತರವನ್ನು ಮುಟ್ಟಿತು.[೨೪೦] ಐತಿಹಾಸಿಕವಾಗಿ ಭಾರತವು ತನ್ನ ಚಾಲ್ತಿ ಲೆಕ್ಕದ ಕೊರತೆಯನ್ನು ವಿದೇಶಿ ಮಾರುಕಟ್ಟೆಗಳಲ್ಲಿನ ಕಂಪನಿಗಳ ಸಾಲಗಳು ಅಥವಾ ಅನಿವಾಸಿ ಭಾರತೀಯರಿಂದ ರವಾನೆಯಾದ ಹಣ ಮತ್ತು ಸ್ವತ್ತುಗಳ ಒಳಹರಿವುಗಳ ಮೂಲಕ ತುಂಬಿಕೊಂಡಿದೆ. ಎಪ್ರಿಲ್ ೨೦೧೬ ರಿಂದ ಜನೆವರಿ ೨೦೧೭ರ ವರೆಗೆ, ೧೯೯೧ರಿಂದ ಮೊದಲ ಬಾರಿಗೆ ಭಾರತವು ತನ್ನ ಕೊರತೆಯನ್ನು ವಿದೇಶಿ ನೇರ ಬಂಡವಾಳದ ಒಳಹರಿವುಗಳ ಮೂಲಕ ತುಂಬಿಸಿಕೊಳ್ಳುತ್ತಿತ್ತು ಎಂದು ಆರ್ಬಿಐ ದತ್ತಾಂಶಗಳು ತೋರಿಸಿದವು. ಈ ಬೆಳವಣಿಗೆಯು ಸಮರ್ಥನೀಯ ಬೆಳವಣಿಗೆಗಾಗಿ ದೇಶದ ಆರ್ಥಿಕ ಅಡಿಪಾಯವನ್ನು ಬಲಪಡಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಮರ್ಥ್ಯದಲ್ಲಿ ದೀರ್ಘಾವಧಿಯ ಹೂಡಿಕೆದಾರರ ಬೆಳೆಯುತ್ತಿರುವ ವಿಶ್ವಾಸದ ಗುರುತಾಗಿದೆ ಎಂದುದಿ ಎಕನಾಮಿಕ್ ಟೈಮ್ಸ್ ಗಮನಿಸಿತು.[೨೪೧]
ಸ್ಥಾನ | ದೇಶ | ಒಳಹರಿವುಗಳು
(ದಶಲಕ್ಷ US$) |
ಒಳಹರಿವುಗಳು (%) |
---|---|---|---|
1 | ಮಾರೀಷಸ್ | 50,164 | 42.00 |
2 | ಸಿಂಗಾಪುರ | 11,275 | 9.00 |
3 | ಅಮೇರಿಕ | 8,914 | 7.00 |
4 | ಯುಕೆ | 6,158 | 5.00 |
5 | ನೆದರ್ಲಂಡ್ಸ್ | 4,968 | 4.00 |
ಪಿಪಿಪಿ ಪ್ರಕಾರ ವಿಶ್ವದಲ್ಲಿನ ಮೂರನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿರುವ ಭಾರತವು ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿದೆ.[೨೪೩] ವರ್ಷ ೨೦೧೧ ರ ಅವಧಿಯಲ್ಲಿ, ಭಾರತದೊಳಗೆ ಎಫ಼್ಡಿಐ ಒಳಹರಿವು $36.5 ಶತಕೋಟಿಯಷ್ಟಿತ್ತು, ಮತ್ತು 2010ರ ಅಂಕಿಅಂಶವಾದ $24.15 ಶತಕೋಟಿಗಿಂತ 51.1% ಹೆಚ್ಚಿತ್ತು. ಭಾರತದ ಪ್ರಾಬಲ್ಯಗಳೆಂದರೆ ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ಮೋಟಾರುವಾಹನ ಘಟಕಗಳು, ರಾಸಾಯನಿಕಗಳು, ಉಡುಪುಗಳು, ಔಷಧವಸ್ತುಗಳು ಹಾಗೂ ಆಭರಣಗಳಂತಹ ಇತರ ಗಮನಾರ್ಹ ಕ್ಷೇತ್ರಗಳು. ವಿದೇಶೀ ಹೂಡಿಕೆಗಳ ಏರಿಕೆಯ ಹೊರತಾಗಿಯೂ, ಕಟ್ಟುನಿಟ್ಟಿನ ಎಫ಼್ಡಿಐ ನೀತಿಗಳು ಗಣನೀಯವಾದ ಅಡೆತಡೆಗಳಾಗಿದ್ದವು.[೨೪೪] ಕಾಲ ಕಳೆದಂತೆ, ಭಾರತವು ಅನೇಕ ಎಫ಼್ಡಿಐ ಸುಧಾರಣೆಗಳನ್ನು ಅಳವಡಿಸಿಕೊಂಡಿದೆ.[೨೪೩] ಭಾರತವು ಕೌಶಲವುಳ್ಳ ವ್ಯವಸ್ಥಾಪಕ ಹಾಗೂ ತಾಂತ್ರಿಕ ಪರಿಣಿತಿಯ ದೊಡ್ಡ ಪೂರೈಕೆಯನ್ನು ಹೊಂದಿದೆ. ಮಧ್ಯಮ ವರ್ಗದ ಜನಸಂಖ್ಯೆಯ ಗಾತ್ರ ೩೦೦ ದಶಲಕ್ಷದಷ್ಟಿದೆ ಮತ್ತು ಇದು ಬೆಳೆಯುತ್ತಿರುವ ಗ್ರಾಹಕ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತದೆ.[೨೪೫]
ಭಾರತವು ೨೦೦೫ರಲ್ಲಿ ತನ್ನ ಎಫ಼್ಡಿಐ ನೀತಿಯನ್ನು ಉದಾರೀಕರಿಸಿ ಸಾಹಸೋದ್ಯಮಗಳಲ್ಲಿ ಎಫ಼್ಡಿಐ ಪಾಲನ್ನು 100% ವರೆಗೆ ಇರುವುದಕ್ಕೆ ಅನುಮತಿಸಿತು. ಕೈಗಾರಿಕಾ ನೀತಿಯ ಸುಧಾರಣೆಗಳು ಕೈಗಾರಿಕ ಪರವಾನಗಿ ಆವಶ್ಯಕತೆಗಳನ್ನು ಗಣನೀಯವಾಗಿ ಕಡಿಮೆಮಾಡಿವೆ, ವಿಸ್ತರಣೆ ಮೇಲಿನ ನಿರ್ಬಂಧಗಳನ್ನು ತೆಗೆದಿವೆ ಮತ್ತು ವಿದೇಶಿ ತಂತ್ರಜ್ಞಾನ ಹಾಗೂ ಹೂಡಿಕೆಗೆ ಸುಲಭ ಪ್ರವೇಶಾಧಿಕಾರವನ್ನು ಸುಗಮಗೊಳಿಸಿವೆ. ಸ್ಥಿರಾಸ್ತಿ ವಲಯದ ಮೇಲ್ಮುಖವಾದ ಬೆಳವಣಿಗೆ ವಕ್ರರೇಖೆಯ ಸ್ವಲ್ಪ ಶ್ಲಾಘನೆ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆ ಮತ್ತು ಉದಾರೀಕೃತ ಎಫ಼್ಡಿಐ ವ್ಯವಸ್ಥೆಗೆ ಸಲ್ಲಬೇಕು. ಮಾರ್ಚ್ ೨೦೦೫ರಲ್ಲಿ, ಸರ್ಕಾರವು ಸಂಕಲಿತ ಮೂಲಸೌಕರ್ಯ ಮತ್ತು ಮನೆಗಳು, ವಾಣಿಜ್ಯಿಕ ಆವರಣಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಮನೋರಂಜನಾ ಸೌಕರ್ಯಗಳು ಮತ್ತು ನಗರ ಹಾಗೂ ಪ್ರದೇಶ ಮಟ್ಟದ ಮೂಲಸೌಕರ್ಯ ಸೇರಿರುವ ನಿರ್ಮಾಣಾಭಿವೃದ್ಧಿ ಯೋಜನೆಗಳು ಸೇರಿದಂತೆ ನಿರ್ಮಾಣ ವಲಯದಲ್ಲಿ 100% ಎಫ಼್ಡಿಐಗೆ ಅನುಮತಿ ನೀಡಲು ನಿಯಮಗಳನ್ನು ತಿದ್ದುಪಡಿ ಮಾಡಿತು.[೨೪೬] ೨೦೧೨ ಮತ್ತು ೨೦೧೪ರ ನಡುವೆ, ಭಾರತವು ಈ ಸುಧಾರಣೆಗಳನ್ನು ರಕ್ಷಣಾ, ದೂರಸಂಪರ್ಕ, ತೈಲ, ಚಿಲ್ಲರೆ ವ್ಯಾಪಾರ, ವಿಮಾನಯಾನ ಮತ್ತು ಇತರ ವಲಯಗಳಿಗೆ ವಿಸ್ತರಿಸಿತು.[೨೪೭][೨೪೮]
೨೦೦೦ರಿಂದ ೨೦೧೦ರ ವರೆಗೆ, ದೇಶವು ಎಫ಼್ಡಿಐ ಆಗಿ $178 ಶತಕೋಟಿಯಷ್ಟನ್ನು ಆಕರ್ಷಿಸಿತು.[೨೪೯] ಗಣನೀಯ ತೆರಿಗೆ ಅನುಕೂಲಗಳನ್ನು ಪರಿಗಣಿಸಿ ಆ ದೇಶದ ಮೂಲಕ ಅಂತರರಾಷ್ಟ್ರೀಯ ಬಂಡವಾಳವನ್ನು ಸಾಗಿಸುವ ಕಾರಣದಿಂದ ಮಾರಿಷಸ್ನಿಂದ ಅತಿ ಹೆಚ್ಚಿನ ಪ್ರಮಾಣದ ಹೂಡಿಕೆಯಾಗುತ್ತಿದೆ – ಭಾರತ ಮತ್ತು ಮಾರಿಷಸ್ ನಡುವಿನ ಒಂದು ತೆರಿಗೆ ಒಪ್ಪಂದದ ಕಾರಣ ಇಮ್ಮಡಿ ತೆರಿಗೆಯು ತಪ್ಪುತ್ತಿದೆ, ಮತ್ತು ಮಾರಿಷಸ್ ಬಂಡವಾಳ ಲಾಭ ತೆರಿಗೆಯ ಧಾಮವಾಗಿದೆ, ಪರಿಣಾಮವಾಗಿ ಶೂನ್ಯ ತೆರಿಗೆಯ ಎಫ಼್ಡಿಐ ಸಂಪರ್ಕಮಾರ್ಗವು ಸೃಷ್ಟಿಯಾಗಿದೆ.[೨೫೦] ೨೦೧೫ರಲ್ಲಿ ಎಫ಼್ಡಿಐ ಭಾರತದ ಜಿಡಿಪಿಯ 2.1% ರಷ್ಟನ್ನು ರೂಪಿಸಿತು.[೨೫೧]
ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ೨೧ ವಲಯಗಳಿಗೆ ಅನ್ವಯಿಸುವ ೮೭ ವಿದೇಶಿ ಬಂಡವಾಳದ ನೇರ ನಿಯಮಗಳನ್ನು ಸಡಿಲಿಸಿರುವುದರಿಂದ, ಭಾರತದಲ್ಲಿ ಎಫ಼್ಡಿಐ ಒಳಹರಿವುಗಳು ೨೦೧೬ ಮತ್ತು ೨೦೧೭ರ ನಡುವೆ $60.1 ಶತಕೋಟಿಯನ್ನು ತಲುಪಿದವು.[೨೫೨][೨೫೩]
೨೦೦೦ರಿಂದ, ಭಾರತೀಯ ಕಂಪನಿಗಳು ವಿದೇಶದಲ್ಲಿ ವಿಸ್ತರಿಸಿವೆ, ಮತ್ತು ಭಾರತದ ಹೊರಗೆ ಎಫ಼್ಡಿಐ ಹೂಡಿಕೆ ಮಾಡಿ ಉದ್ಯೋಗಗಳನ್ನು ಸೃಷ್ಟಿಸಿವೆ. ೨೦೦೬ ರಿಂದ ೨೦೧೦ರ ವರೆಗೆ, ಭಾರತದ ಹೊರಗೆ ಭಾರತೀಯ ಕಂಪನಿಗಳ ಎಫ಼್ಡಿಐದ ಮೊತ್ತ ಅದರ ಜಿಡಿಪಿಯ 1.34 ಪ್ರತಿಶತವಾಗಿತ್ತು.[೨೫೪] ಭಾರತೀಯ ಕಂಪನಿಗಳು ಎಫ಼್ಡಿಐ ನ್ನು ಬಳಸಿ ಅಮೇರಿಕ[೨೫೫], ಯೂರೋಪ್ ಮತ್ತು ಆಫ಼್ರಿಕಾದಲ್ಲಿ ಕಾರ್ಯಾಚರಣೆಗಳನ್ನು ಆರಂಭಿಸಿವೆ.[೨೫೬] ಭಾರತದ ಟಾಟಾ ಕಂಪನಿ ಯುನೈಟಡ್ ಕಿಂಗ್ಡಮ್ನ ಅತಿ ದೊಡ್ಡ ಉತ್ಪಾದಕ ಮತ್ತು ಖಾಸಗಿ ವಲಯದ ಉದ್ಯೋಗದಾತವಾಗಿದೆ.[೨೫೭][೨೫೮]
೨೦೧೫ ರಲ್ಲಿ, ಇತರ ದೇಶಗಳಿಂದ ಭಾರತಕ್ಕೆ ಒಟ್ಟು $68.91 ಶತಕೋಟಿಯಷ್ಟು ಹಣವನ್ನು ರವಾನೆ ಮಾಡಲಾಗಿತ್ತು, ಮತ್ತು ಭಾರತದಲ್ಲಿನ ವಿದೇಶೀ ಕಾರ್ಮಿಕರು ತಮ್ಮ ತವರು ದೇಶಗಳಿಗೆ ಒಟ್ಟು $8.476 ಶತಕೋಟಿಯಷ್ಟು ಹಣವನ್ನು ರವಾನೆ ಮಾಡಿದ್ದರು. ಯುಎಇ, ಅಮೇರಿಕ ಮತ್ತು ಸೌದಿ ಅರೇಬಿಯಾ ಭಾರತಕ್ಕೆ ಹಣ ರವಾನಿಸಿದ ಅಗ್ರ ಮೂಲಗಳಾಗಿದ್ದವು. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳ ಭಾರತದಿಂದ ಹಣರವಾನೆಯನ್ನು ಸ್ವೀಕರಿಸಿದ ಅಗ್ರ ದೇಶಗಳಾಗಿದ್ದವು.[೨೫೯] ೨೦೧೫ರಲ್ಲಿ ಭಾರತಕ್ಕೆ ರವಾನೆಯಾದ ಹಣವು ದೇಶದ ಜಿಡಿಪಿಯ 3.32% ನಷ್ಟಿತ್ತು.[೨೫೧]
೧೯೮೫ ಮತ್ತು ೨೦೧೮ರ ನಡುವೆ ಭಾರತದ ಒಳಗೆ (ಒಳಬರುವ) ಮತ್ತು ಹೊರಗೆ (ಹೊರಹೋಗುವ) 20,846 ಒಪ್ಪಂದಗಳನ್ನು ಘೋಷಿಸಲಾಗಿದೆ. ಇದು ಒಟ್ಟು ಅಮೇರಿಕನ್ $618 ಶತಕೋಟಿಯಷ್ಟು ಮೌಲ್ಯವಾಗುತ್ತದೆ. ಮೌಲ್ಯದ ಪ್ರಕಾರ, ಹೆಚ್ಚುಕಡಿಮೆ ೬೦ ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಗಳೊಂದಿಗೆ ೨೦೧೦ ಅತ್ಯಂತ ಸಕ್ರಿಯ ವರ್ಷವಾಗಿತ್ತು. ಅತಿ ಹೆಚ್ಚು ಒಪ್ಪಂದಗಳನ್ನು ೨೦೦೭ ರಲ್ಲಿ ಮಾಡಿಕೊಳ್ಳಲಾಯಿತು (1,510).[೨೬೦]
ಕೆಳಗೆ ಭಾರತೀಯ ಕಂಪನಿಗಳು ಭಾಗವಹಿಸಿರುವ ಅಗ್ರ ೧೦ ಒಪ್ಪಂದಗಳ ಪಟ್ಟಿಯಿದೆ:
ಸ್ವಾಧೀನಪಡಿಸಿಕೊಳ್ಳುವವನ ಹೆಸರು | ಸ್ವಾಧೀನಪಡಿಸಿಕೊಳ್ಳುವವರ ಮಧ್ಯ ಕೈಗಾರಿಕೆ | ಸ್ವಾಧೀನಪಡಿಸಕೊಳ್ಳುವ ರಾಷ್ಟ್ರ | ಗುರಿಗೊಳಗಾದವರ ಹೆಸರು | ಗುರಿಗೊಳಗಾದ ಮಧ್ಯ ಕೈಗಾರಿಕೆ | ಗುರಿಗೊಳಗಾದ ರಾಷ್ಟ್ರ | ವ್ಯವಹಾರದ ಮೌಲ್ಯ ($ದಶಲಕ್ಷ) |
ಪೆಟ್ರೋಲ್ ಕಾಂಪ್ಲೆಕ್ಸ್ ಪಿಟಿಇ ಲಿ. | ತೈಲ & ಅನಿಲ | ಸಿಂಗಾಪುರ್ | ಎಸ್ಸಾರ್ ಆಯಿಲ್ ಲಿ. | ತೈಲ & ಅನಿಲ | ಭಾರತ | 12,907.25 |
ವೋಡಫ಼ೋನ್ ಗ್ರುಪ್ ಪಿಎಲ್ಸಿ | ನಿಸ್ತಂತು | ಯುನೈಟಡ್ ಕಿಂಗ್ಡಂ | ಹಚಿಸನ್ ಎಸ್ಸಾರ್ ಲಿ. | ದೂರಸಂಪರ್ಕ ಸೇವೆಗಳು | ಭಾರತ | 12,748.00 |
ವೋಡಫ಼ೋನ್ ಗ್ರುಪ್ ಪಿಎಲ್ಸಿ-ವೋಡಫ಼ೋನ್ ಅಸೆಟ್ಸ್ | ನಿಸ್ತಂತು | ಭಾರತ | ಐಡಿಯಾ ಸೆಲ್ಯುಲಾರ್ ಲಿ.-ಮೊಬೈಲ್ ಬಸ್ | ನಿಸ್ತಂತು | ಭಾರತ | 11,627.32 |
ಭಾರತಿ ಏರ್ಟೆಲ್ ಲಿ. | ನಿಸ್ತಂತು | ಭಾರತ | ಎಂಟಿಎನ್ ಗ್ರೂಪ್ ಲಿ. | ನಿಸ್ತಂತು | ದಕ್ಷಿಣ ಆಫ಼್ರಿಕಾ | 11,387.52 |
ಭಾರತಿ ಏರ್ಟೆಲ್ ಲಿ. | ನಿಸ್ತಂತು | ಭಾರತ | ಜ಼ೈನ್ ಆಫ಼್ರಿಕಾ ಬಿವಿ | ನಿಸ್ತಂತು | ನೈಜೀರಿಯಾ | 10,700.00 |
ಬಿಪಿ ಪಿಎಲ್ಸಿ | ತೈಲ & ಅನಿಲ | ಯುನೈಟಡ್ ಕಿಂಗ್ಡಂ | ರಿಲಾಯನ್ಸ್ ಇಂಡಸ್ಟ್ರೀಸ್ ಲಿ.-21 ತೈಲ | ತೈಲ & ಅನಿಲ | ಭಾರತ | 9,000.00 |
ಎಂಟಿಎನ್ ಗ್ರೂಪ್ ಲಿ. | ನಿಸ್ತಂತು | ದಕ್ಷಿಣ ಆಫ಼್ರಿಕಾ | ಭಾರತಿ ಏರ್ಟೆಲ್ ಲಿ. | ನಿಸ್ತಂತು | ಭಾರತ | 8,775.09 |
ಷೇರುದಾರರು | ಇತರ ಹಣಕಾಸು ಸಂಬಂಧಿ | ಭಾರತ | ರಿಲಾಯನ್ಸ್ ಇಂಡಸ್ಟ್ರೀಸ್ ಲಿ.-ಟೆಲಿಕಾಮ್ ಬಸ್ | ದೂರಸಂಪರ್ಕ ಸೇವೆಗಳು | ಭಾರತ | 8,063.01 |
ಒಎನ್ಜಿಸಿ ಲಿ. | ತೈಲ & ಅನಿಲ | ಭಾರತ | ಎಚ್ಪಿಸಿಎಲ್ | ಪೆಟ್ರೊರಾಸಾಯನಿಕಗಳು | ಭಾರತ | 5,784.20 |
ರಿಲಾಯನ್ಸ್ ಕಮ್ಯುನಿಕೇಷನ್ಸ್ ವೆಂಚರ್ಸ್ ಲಿ. | ದೂರಸಂಪರ್ಕ ಸೇವೆಗಳು | ಭಾರತ | ರಿಲಾಯನ್ಸ್ ಇನ್ಫೊಕಾಮ್ ಲಿ. | ದೂರಸಂಪರ್ಕ ಸೇವೆಗಳು | ಭಾರತ | 5,577.18 |
ವರ್ಷ | ಭಾ.ರೂ.₹ ಒಂದು ಅ.$ ಗೆ
(ಸರಾಸರಿ ವಾರ್ಷಿಕ)[೨೬೧] |
---|---|
1975 | 9.4058 |
1980 | 7.8800 |
1985 | 12.3640 |
1990 | 17.4992 |
1995 | 32.4198 |
2000 | 44.9401 |
2005 | 44.1000 |
2010 | 45.7393 |
2015 | 64.05 |
2016 | 67.09 |
2017 | 64.14 |
2018 | 69.71 |
ಭಾರತದ ರೂಪಾಯಿಯು ಭಾರತದ ಏಕೈಕ ನ್ಯಾಯಸಮ್ಮತ ದ್ರವ್ಯವಾಗಿದೆ, ಮತ್ತು ಇದನ್ನು ನೆರೆಯ ನೇಪಾಳ ಮತ್ತು ಭೂತಾನ್ನಲ್ಲಿಯೂ ನ್ಯಾಯಸಮ್ಮತ ದ್ರವ್ಯವಾಗಿ ಸ್ವೀಕರಿಸಲಾಗುತ್ತದೆ. ಇವೆರಡು ದೇಶಗಳು ತಮ್ಮ ಚಲಾವಣೆಯನ್ನು ಭಾರತದ ರೂಪಾಯಿಯ ಮಟ್ಟದಲ್ಲಿಡುತ್ತವೆ. ರೂಪಾಯಿಯನ್ನು ೧೦೦ ಪೈಸೆಗಳಾಗಿ ವಿಭಜಿಸಲಾಗುತ್ತದೆ. ₹2,000 ರ ನೋಟು ಅತಿ ಹೆಚ್ಚು ವರ್ಗರಾಶಿಯ ಬ್ಯಾಂಕ್ನೋಟಾಗಿದೆ; ೫೦ ಪೈಸೆಯ ನಾಣ್ಯವು ಚಲಾವಣೆಯಲ್ಲಿರುವ ಅತಿ ಕಡಿಮೆ ವರ್ಗರಾಶಿಯ ನಾಣ್ಯವಾಗಿದೆ.[೨೬೨] ೩೦ ಜೂನ್ ೨೦೧೧ರಿಂದ, ೫೦ ಪೈಸೆಗಿಂತ ಕೆಳಗಿನ ಎಲ್ಲ ವರ್ಗರಾಶಿಗಳು ನ್ಯಾಯಸಮ್ಮತ ಚಲಾವಣೆಯಾಗಿ ಉಳಿದಿಲ್ಲ.[೨೬೩][೨೬೪] ಭಾರತದ ವಿತ್ತಿಯ ವ್ಯವಸ್ಥೆಯನ್ನು ದೇಶದ ಕೇಂದ್ರೀಯ ಬ್ಯಾಂಕ್ ಆದ ಭಾರತೀಯ ರಿಜ಼ರ್ವ್ ಬ್ಯಾಂಕ್ (ಆರ್ಬಿಐ) ನಿರ್ವಹಿಸುತ್ತದೆ.[೨೬೫] ೧ ಎಪ್ರಿಲ್ ೧೯೩೫ರಲ್ಲಿ ಸ್ಥಾಪನೆಯಾದ ಮತ್ತು ೧೯೪೯ರಲ್ಲಿ ರಾಷ್ಟ್ರೀಕರಣಗೊಂಡ ಆರ್ಬಿಐ ರಾಷ್ಟ್ರದ ವಿತ್ತೀಯ ಪ್ರಾಧಿಕಾರ, ವಿತ್ತೀಯ ವ್ಯವಸ್ಥೆಯ ನಿಯಂತ್ರಕ ಹಾಗೂ ಮೇಲ್ವಿಚಾರಕ, ಸರ್ಕಾರದ ಬ್ಯಾಂಕರ್, ವಿದೇಶೀ ಹಣದ ಮೀಸಲು ನಿಧಿಯ ರಕ್ಷಕ, ಮತ್ತು ಚಲಾವಣೆಯನ್ನು ಹೊರಡಿಸುವ ಕಾರ್ಯನಿರ್ವಹಿಸುತ್ತದೆ. ಇದನ್ನು ನಿರ್ದೇಶಕರ ಒಂದು ಕೇಂದ್ರ ಮಂಡಳಿಯು ನಿರ್ವಹಿಸುತ್ತದೆ. ಭಾರತ ಸರ್ಕಾರವು ನೇಮಿಸುವ ಒಬ್ಬ ಗವರ್ನರ್ ಇದರ ಮುಖ್ಯಸ್ಥನಾಗಿರುತ್ತಾನೆ.[೨೬೬] ವಿತ್ತೀಯ ನೀತಿ ಸಮಿತಿಯು ಮಾನಕ ಬಡ್ಡಿ ದರಗಳನ್ನು ನಿಗದಿಪಡಿಸುತ್ತದೆ.
ರೂಪಾಯಿಯು ಸ್ಥಿರ ವಿನಿಮಯ ದರದ ಮೂಲಕ ೧೯೨೭ ರಿಂದ ೧೯೪೬ರ ವರೆಗೆ ಬ್ರಿಟಿಷ್ ಪೌಂಡ್ಗೆ, ಮತ್ತು ನಂತರ ೧೯೭೫ರ ವರೆಗೆ ಅಮೇರಿಕದ ಡಾಲರ್ಗೆ ಸಂಪರ್ಕ ಹೊಂದಿತ್ತು. ಸೆಪ್ಟೆಂಬರ್ ೧೯೭೫ರಲ್ಲಿ ಇದನ್ನು ಅಪಮೌಲ್ಯೀಕರಿಸಿ ಸ್ಥಿರ ಸಮಾನ ದರದ ಪದ್ಧತಿಯ ಬದಲು ನಾಲ್ಕು ಪ್ರಮುಖ ಅಂತರರಾಷ್ಟ್ರೀಯ ಚಲಾವಣೆಗಳ ಬುಟ್ಟಿಯ ಪದ್ಧತಿ ಜಾರಿಗೊಂಡಿತು: ಬ್ರಿಟಿಷ್ ಪೌಂಡ್, ಅಮೇರಿಕದ ಡಾಲರ್, ಜಪಾನ್ನ ಯೆನ್ ಮತ್ತು ಡೊಯ್ಚಿ ಮಾರ್ಕ್.[೨೬೭] ೧೯೯೧ರಲ್ಲಿ, ಅದರ ಅತಿ ದೊಡ್ಡ ವ್ಯಾಪಾರ ಪಾಲುದಾರವಾಗಿದ್ದ ಸೋವಿಯಟ್ ಒಕ್ಕೂಟದ ಪತನದ ನಂತರ, ಭಾರತವು ಗಂಭೀರವಾದ ವಿದೇಶಿ ವಿನಿಮಯದ ಬಿಕ್ಕಟ್ಟನ್ನು ಎದುರಿಸಿತು. ರೂಪಾಯಿಯನ್ನು ೧ ಮತ್ತು ೨ ಜುಲೈಗಳಂದು ಎರಡು ಹಂತಗಳಲ್ಲಿ ಸುಮಾರು 19% ನಷ್ಟು ಅಪಮೌಲ್ಯೀಕರಿಸಲಾಯಿತು. ೧೯೯೨ ರಲ್ಲಿ, ಉದಾರೀಕೃತ ವಿನಿಮಯ ದರ ವ್ಯವಸ್ಥೆಯನ್ನು (ಎಲ್ಇಆರ್ಎಮ್ಎಸ್) ಪರಿಚಯಿಸಲಾಯಿತು. ಎಲ್ಇಆರ್ಎಮ್ಎಸ್ ನ ಅಡಿ, ರಫ್ತುದಾರರು ಆರ್ಬಿಐ ನಿರ್ಧರಿತ ವಿನಿಮಯ ದರದಲ್ಲಿ ಆರ್ಬಿಐಗೆ ತಮ್ಮ ವಿದೇಶಿ ವಿನಿಮಯ ಗಳಿಕೆಯ ಶೇಕಡ 40 ರಷ್ಟನ್ನು ಒಪ್ಪಿಸಬೇಕಾಗಿತ್ತು; ಉಳಿದ 60% ನ್ನು ಮಾರುಕಟ್ಟೆ ನಿರ್ಧರಿತ ವಿನಿಮಯ ದರದ ಪ್ರಕಾರ ಪರಿವರ್ತಿಸಬಹುದಾಗಿತ್ತು. ೧೯೯೪ರಲ್ಲಿ, ರೂಪಾಯಿಯು ಕೆಲವು ಬಂಡವಾಳ ನಿಯಂತ್ರಣಗಳೊಂದಿಗೆ ಚಾಲ್ತಿ ಖಾತೆಯ ಮೇಲೆ ಪರಿವರ್ತಿತವಾಗಬಲ್ಲದ್ದಾಗಿತ್ತು.[೨೬೮]
೧೯೯೧ ರಲ್ಲಿ ತೀವ್ರ ಅಪಮೌಲ್ಯೀಕರಣ ಮತ್ತು ೧೯೯೪ ರಲ್ಲಿ ಚಾಲ್ತಿ ಖಾತೆ ಪರಿವರ್ತನೀಯತೆಗೆ ಬದಲಾವಣೆಯ ನಂತರ, ರೂಪಾಯಿಯ ಮೌಲ್ಯವು ಬಹುತೇಕವಾಗಿ ಮಾರುಕಟ್ಟೆ ಶಕ್ತಿಗಳಿಂದ ನಿರ್ಧಾರಿತವಾಗಿದೆ. 2000–2010 ದಶಕದ ಅವಧಿಯಲ್ಲಿ ರೂಪಾಯಿಯು ಸಾಕಷ್ಟು ಸ್ಥಿರವಾಗಿದೆ. ಅಕ್ಟೋಬರ್ 2018 ರಲ್ಲಿ, ರೂಪಾಯಿಯು ಅಮೇರಿಕದ ಡಾಲರ್ ಎದುರು ಸಾರ್ವಕಾಲಿಕ ನಿಮ್ನ ಮಟ್ಟವಾದ 74.90 ನ್ನು ಮುಟ್ಟಿತು.[೨೬೯]
ಭಾರತದ ತಲಾವಾರು ಒಟ್ಟು ರಾಷ್ಟ್ರೀಯ ಆದಾಯವು ೨೦೦೨ರಿಂದ ಹೆಚ್ಚಿನ ಬೆಳವಣಿಗೆ ದರಗಳನ್ನು ಅನುಭವಿಸಿತ್ತು. 2002–03 ರಲ್ಲಿ ₹19,040 ನಷ್ಟಿದ್ದ ಇದು 2010–11 ರಲ್ಲಿ ₹53,331 ಕ್ಕೆ ಏರಿ ಮೂರು ಪಟ್ಟಾಯಿತು. ಈ ಎಂಟು ವರ್ಷಗಳಲ್ಲಿ ಪ್ರತಿಯೊಂದು ವರ್ಷದಲ್ಲಿ ಸರಾಸರಿ 13.7% ನಷ್ಟು ಬೆಳೆಯಿತು, ಮತ್ತು 2010–11 ನಲ್ಲಿ 15.6% ನಷ್ಟು ಗರಿಷ್ಠ ಬೆಳವಣಿಗೆಯಾಯಿತು.[೨೭೧] ಆದರೆ ಹಣದುಬ್ಬರಕ್ಕೆ ಹೊಂದಿಸಿದ ರಾಷ್ಟ್ರದ ತಲಾವಾರು ಆದಾಯದಲ್ಲಿನ ಬೆಳವಣಿಗೆಯು 2010–11 ರಲ್ಲಿ 5.6% ನಷ್ಟು ನಿಧಾನಗೊಂಡಿತು, ಮತ್ತು ಹಿಂದಿನ ವರ್ಷ 6.4% ಇತ್ತು. ಈ ಬಳಕೆಯ ಮಟ್ಟಗಳು ವ್ಯಕ್ತಿಗತ ಆಧಾರದಲ್ಲಿವೆ.[೨೭೨] ಭಾರತದಲ್ಲಿ 2011 ನಲ್ಲಿ ಸರಾಸರಿ ಕೌಟುಂಬಿಕ ಆದಾಯವು ಮನೆಗೆ ತಲಾ $6,671 ನಷ್ಟಿತ್ತು.[೨೭೩]
೨೦೧೧ರ ಜನಗಣತಿಯ ದತಾಂಶಗಳ ಪ್ರಕಾರ, ಭಾರತವು ಸುಮಾರು ೩೩೦ ದಶಲಕ್ಷ ಮನೆಗಳು ಮತ್ತು ೨೪೭ ದಶಲಕ್ಷ ಕುಟುಂಬಗಳನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಕುಟುಂಬದ ಗಾತ್ರವು ಕಡಿಮೆಯಾಗಿದೆ. 50% ಕುಟುಂಬಗಳು ನಾಲ್ಕು ಅಥವಾ ಕಡಿಮೆ ಸದಸ್ಯರನ್ನು ಹೊಂದಿವೆ, ಮತ್ತು ಪ್ರತಿ ಕುಟುಂಬದಲ್ಲಿ ಬದುಕಿರುವ ಅಜ್ಜ ಅಜ್ಜಿಯರು ಸೇರಿದಂತೆ ಸರಾಸರಿಯಾಗಿ 4.8 ಸದಸ್ಯರಿದ್ದಾರೆ ಎಂದು ೨೦೧೧ರ ಜನಗಣತಿಯು ವರದಿಮಾಡಿತು.[೨೭೪][೨೭೫] ಈ ಕುಟುಂಬಗಳು ಸುಮಾರು $1.7 ಟ್ರಿಲಿಯನ್ನಷ್ಟು ಜಿಡಿಪಿಯನ್ನು ಸೃಷ್ಟಿಸಿದವು.[೨೭೬] ಸುಮಾರು 67% ಕುಟುಂಬಗಳು ಅಡಿಗೆಗಾಗಿ ಉರುವಲು, ಬೆಳೆ ಶೇಷಗಳು ಅಥವಾ ಬೆರಣಿಯನ್ನು ಬಳಸುತ್ತವೆ; 53% ಕುಟುಂಬಗಳು ತಮ್ಮ ಮನೆಯಲ್ಲಿ ನೈರ್ಮಲ್ಯ ಅಥವಾ ಚರಂಡಿ ಸೌಕರ್ಯಗಳನ್ನು ಹೊಂದಿಲ್ಲ; 83% ಕುಟುಂಬಗಳು ನಗರ ಪ್ರದೇಶಗಳಲ್ಲಿ ತಮ್ಮ ಮನೆಯಲ್ಲಿ ಅಥವಾ ತಮ್ಮ ಮನೆಯಿಂದ ೧೦೦ ಮೀಟರ್ ದೂರದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಮನೆಯಿಂದ ೫೦೦ ಮೀಟರ್ ದೂರದಲ್ಲಿ ನೀರಿನ ಪೂರೈಕೆಯನ್ನು ಹೊಂದಿವೆ; 67% ಕುಟುಂಬಗಳು ವಿದ್ಯುಚ್ಛಕ್ತಿಯನ್ನು ಪಡೆದಿವೆ; 63% ಕುಟುಂಬಗಳು ಲ್ಯಾಂಡ್ಲೈನ್ ಅಥವಾ ಮೊಬೈಲ್ ದೂರವಾಣಿ ಸೇವೆಯನ್ನು ಹೊಂದಿವೆ; 43% ಕುಟುಂಬಗಳು ಒಂದು ಟಿ.ವಿ.ಯನ್ನು ಹೊಂದಿವೆ; 26% ಕುಟುಂಬಗಳು ದ್ವಿಚಕ್ರ ಅಥವಾ ನಾಲ್ಕು ಗಾಲಿಗಳ ಮೋಟಾರು ವಾಹನವನ್ನು ಹೊಂದಿವೆ ಎಂದು ಬಳಕೆಯ ವಿನ್ಯಾಸಗಳು ಗಮನಿಸುತ್ತವೆ. ೨೦೦೧ಕ್ಕೆ ಹೋಲಿಸಿದರೆ, ಈ ಆದಾಯ ಮತ್ತು ಬಳಕೆಯ ಪ್ರವೃತ್ತಿಗಳು ಮಧ್ಯಮದಿಂದ ಗಮನಾರ್ಹವಾದ ಸುಧಾರಣೆಗಳನ್ನು ಪ್ರತಿನಿಧಿಸುತ್ತವೆ.[೨೭೪] ಅಧಿಕ ಆದಾಯದ ಕುಟುಂಬಗಳ ಸಂಖ್ಯೆ ಕಡಿಮೆ ಆದಾಯದ ಕುಟುಂಬಗಳ ಸಂಖ್ಯೆಗಿಂತ ಹೆಚ್ಚಿದೆ ಎಂದು ೨೦೧೦ರಲ್ಲಿನ ಒಂದು ವರದಿ ಸಾಧಿಸಿತು.[೨೭೭]
ನ್ಯೂ ವರ್ಲ್ಡ್ ವೆಲ್ತ್ ದೇಶಗಳ ಒಟ್ಟು ಸಂಪತ್ತನ್ನು ಪತ್ತೆಹಚ್ಚುವ ವರದಿಗಳನ್ನು ಪ್ರಕಟಿಸುತ್ತದೆ. ದೇಶದ ಸಂಪತ್ತನ್ನು ದೇಶದ ಎಲ್ಲ ನಿವಾಸಿಗಳು ಹೊಂದಿರುವ ಖಾಸಗಿ ಸಂಪತ್ತಾಗಿ ಅಳೆಯಲಾಗುತ್ತದೆ. ನ್ಯೂ ವರ್ಲ್ಡ್ ವೆಲ್ತ್ ಪ್ರಕಾರ, ಭಾರತದ ಒಟ್ಟು ಸಂಪತ್ತು ೨೦೦೭ರಲ್ಲಿ $3,165 ಶತಕೋಟಿಯಷ್ಟಿದ್ದು ೨೦೧೭ರಲ್ಲಿ $8,230 ಶತಕೋಟಿಗೆ (೧೬೦% ನಷ್ಟು ಬೆಳವಣಿಗೆ ದರ) ಹೆಚ್ಚಿತು. ಭಾರತದ ಒಟ್ಟು ಸಂಪತ್ತು ೨೦೧೭ರಲ್ಲಿ $8.23 ಟ್ರಿಲಿಯನ್ನಿಂದ ೨೦೧೮ರಲ್ಲಿ $8.148 ಟ್ರಿಲಿಯನ್ ಆಗಿ ೧% ನಷ್ಟು ಕಡಿಮೆಯಾಗಿ ಭಾರತವು ವಿಶ್ವದಲ್ಲಿನ ಆರನೇ ಅತಿ ಶ್ರೀಮಂತ ರಾಷ್ಟ್ರವೆಂದೆನಿಸಿಕೊಂಡಿತು. ಭಾರತದ 20,730 ಬಹು ಲಕ್ಷಾಧಿಪತಿಗಳು (ವಿಶ್ವದಲ್ಲಿ ೭ನೇ ಅತಿ ಹೆಚ್ಚು)[೨೭೮] ಮತ್ತು 118 ಶತಕೋಟ್ಯಧಿಪತಿಗಳಿದ್ದಾರೆ (ವಿಶ್ವದಲ್ಲಿ ೩ನೇ ಅತಿ ಹೆಚ್ಚು). 327,100 ಉನ್ನತ ಒಟ್ಟು ಸಂಪತ್ತಿನ ವ್ಯಕ್ತಿಗಳೊಂದಿಗೆ (ಎಚ್ಎನ್ಡಬ್ಲ್ಯುಐ) ಭಾರತವು ವಿಶ್ವದಲ್ಲಿ ೯ನೇ ಅತಿ ಹೆಚ್ಚು ಸಂಖ್ಯೆಯ ಎಚ್ಎನ್ಡಬ್ಲ್ಯುಐಗಳನ್ನು ಹೊಂದಿದೆ. ೨೦೧೮ರಲ್ಲಿ $941 ಶತಕೋಟಿಯಷ್ಟು ಒಟ್ಟು ನಿವ್ವಳ ಸಂಪತ್ತು ಹೊಂದಿದ್ದ ಮುಂಬಯಿ ಭಾರತದ ಅತಿ ಶ್ರೀಮಂತ ನಗರ ಮತ್ತು ವಿಶ್ವದಲ್ಲಿನ ೧೨ನೇ ಅತಿ ಶ್ರೀಮಂತ ನಗರವಾಗಿದೆ. ಈ ನಗರದಲ್ಲಿ ಇಪ್ಪತ್ತೆಂಟು ಶತಕೋಟ್ಯಧಿಪತಿಗಳು ವಾಸವಾಗಿದ್ದು ವಿಶ್ವಾದ್ಯಂತವಾಗಿ ಒಂಭತ್ತನೆ ಸ್ಥಾನ ಪಡೆದಿದೆ.[೨೭೯] ೨೦೧೬ರ ವೇಳೆಗೆ, ಭಾರತದಲ್ಲಿನ ಮುಂದಿನ ಅತಿ ಶ್ರೀಮಂತ ನಗರಗಳೆಂದರೆ ದೆಹಲಿ ($450 ಶತಕೋಟಿ), ಬೆಂಗಳೂರು ($320 ಶತಕೋಟಿ), ಹೈದರಾಬಾದ್ ($310 ಶತಕೋಟಿ), ಕೊಲ್ಕತ್ತಾ ($290 ಶತಕೋಟಿ), ಚೆನ್ನೈ ($150 ಶತಕೋಟಿ) ಮತ್ತು ಗುರ್ಗಾಂವ್ ($110 ಶತಕೋಟಿ).[೨೮೦][೨೮೧]
೨೦೧೮ರಲ್ಲಿ ಭಾರತದಿಂದ ೫,೦೦೦ ಎಚ್ಎನ್ಡಬ್ಲ್ಯುಐಗಳು (ಅಥವಾ ದೇಶದ ಸುಮಾರು ೨% ಎಚ್ಎನ್ಡಬ್ಲ್ಯುಐಗಳು) ವಲಸೆ ಹೋದರು ಎಂದು ನ್ಯೂ ವರ್ಲ್ ವೆಲ್ತ್ ಪ್ರಕಟಿಸಿದ ಜಾಗತಿಕ ಸಂಪತ್ತು ವಲಸೆ ಪರಿಷ್ಕರಣೆ ವರದಿ ಕಂಡುಕೊಂಡಿತು. ವಲಸೆ ಹೋದ ಅಗ್ರ ದೇಶಗಳ ಪೈಕಿ ಆಸ್ಟ್ರೇಲಿಯಾ, ಕೆನಡಾ ಮತ್ತು ಅಮೇರಿಕ ಇದ್ದವು.[೨೮೨] ಭಾರತದಲ್ಲಿನ ಖಾಸಗಿ ಸಂಪತ್ತು ೧೮೦% ನಷ್ಟು ಬೆಳೆದು ೨೦೨೮ರ ವೇಳೆಗೆ $22,814 ಶತಕೋಟಿ ತಲುಪುವುದು ಎಂದೂ ಈ ವರದಿ ಅಂದಾಜಿಸಿತು.[೨೭೯]
ಮೇ ೨೦೧೪ರಲ್ಲಿ, ವಿಶ್ವ ಬ್ಯಾಂಕ್ ತನ್ನ ಬಡತನ ಗಣನಾ ವಿಧಾನವನ್ನು ಪರಿಶೀಲಿಸಿ, ಪರಿಷ್ಕರಣೆಗಳನ್ನು ಪ್ರಸ್ತಾಪಿಸಿತು. ಈ ಪರಿಷ್ಕೃತ ವಿಧಿವಿಧಾನಗಳ ಪ್ರಕಾರ, ಭಾರತದಲ್ಲಿ ಬಡತನ ರೇಖೆಯ ಕೆಳಗೆ 179.6 ದಶಲಕ್ಷ ಜನರಿದ್ದರು. ವಿಶ್ವದ ಒಟ್ಟು ಜನಸಂಖ್ಯೆಯ 17.5% ನಷ್ಟನ್ನು ಹೊಂದಿದ್ದ ಭಾರತ, ೨೦೧೩ ರಲ್ಲಿ ವಿಶ್ವದ ಕಡುಬಡವರಲ್ಲಿ ಭಾರತದ ಪಾಲು 20.6% ಆಗಿತ್ತು.[೨೮೩] 2005–2006ರ ಒಂದು ಸಮೀಕ್ಷೆಯ ಪ್ರಕಾರ,[೨೮೪] ಭಾರತವು ದೀರ್ಘಕಾಲಿಕವಾಗಿ ನ್ಯೂನ ಪೋಷಿತ ೫ ವರ್ಷ ವಯಸ್ಸಿಗಿಂತ ಕಡಿಮೆಯಿರುವ ೬೧ ದಶಲಕ್ಷ ಮಕ್ಕಳನ್ನು ಹೊಂದಿತ್ತು. ೧೯೯೦ ಮತ್ತು ೨೦೧೦ರ ನಡುವೆ, ಭಾರತವು ೫ ವರ್ಷಕ್ಕಿಂತ ಕಡಿಮೆಯವರ ಮರಣ ಪ್ರಮಾಣದಲ್ಲಿ ೪೫ ಪ್ರತಿಶತ ಇಳಿತವನ್ನು ಸಾಧಿಸಿತು ಎಂದು ೨೦೧೧ರ ಒಂದು ಯೂನಿಸೆಫ಼್ ವರದಿ ಹೇಳಿತು. ಈಗ ಭಾರತವು ಈ ಮಾಪನದಲ್ಲಿ ೧೮೮ ದೇಶಗಳಲ್ಲಿ ೪೬ನೇ ಸ್ಥಾನ ಪಡೆದಿದೆ.[೨೮೫]
೧೯೬೦ರ ದಶಕದ ಮುಂಚಿನ ವರ್ಷಗಳಿಂದ, ಬಡತನವನ್ನು ತಗ್ಗಿಸಲು ಅನುಕ್ರಮದ ಸರ್ಕಾರಗಳು ಕೇಂದ್ರ ಯೋಜನೆಯಡಿ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಿವೆ. ಇವುಗಳಿಗೆ ಭಾಗಶಃ ಯಶಸ್ಸು ದೊರೆತಿದೆ.[೨೮೬] ೨೦೦೫ರಲ್ಲಿ, ಸರ್ಕಾರವು ಭಾರತದ ಎಲ್ಲ ಜಿಲ್ಲೆಗಳಲ್ಲಿನ ಪ್ರತಿಯೊಂದು ಗ್ರಾಮೀಣ ಮನೆಗೆ ೧೦೦ ದಿನಗಳ ಕನಿಷ್ಠ ಕೂಲಿಯ ಉದ್ಯೋಗವನ್ನು ಖಾತರಿಗೊಳಿಸುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (ಮನರೇಗಾ) ಜಾರಿಗೊಳಿಸಿತು.[೨೮೭] ೨೦೧೧ರಲ್ಲಿ, ಭ್ರಷ್ಟ ಅಧಿಕಾರಿಗಳು, ಹಣದ ಮೂಲವಾಗಿ ಕೊರತೆ ಹಣಕಾಸು ಪೂರೈಕೆ, ಯೋಜನೆಯಡಿ ನಿರ್ಮಿಸಲ್ಪಟ್ಟ ಮೂಲಸೌಕರ್ಯದ ಕಳಪೆ ಗುಣಮಟ್ಟ ಮತ್ತು ಅನುದ್ದೇಶಿತ ವಿನಾಶಕಾರಿ ಪರಿಣಾಮಗಳ ಕಾರಣದಿಂದ ಇದನ್ನು ವ್ಯಾಪಕವಾಗಿ ಟೀಕಿಸಲಾಯಿತು ಮತ್ತು ಇದು ವಿವಾದದಿಂದ ಆವರಿಸಲ್ಪಟ್ಟಿತು.[೨೮೮][೨೮೯][೨೯೦] ಈ ಕಾರ್ಯಕ್ರಮವು ಕೆಲವು ಸಂದರ್ಭಗಳಲ್ಲಿ ಗ್ರಾಮೀಣ ಬಡತನವನ್ನು ಕಡಿಮೆಮಾಡಲು ನೆರವಾಗಿದೆ ಎಂದು ಇತರ ಅಧ್ಯಯನಗಳು ಸೂಚಿಸುತ್ತವೆ.[೨೯೧][೨೯೨] ಭಾರತದ ಆರ್ಥಿಕ ಬೆಳವಣಿಗೆಯು ಸುಸ್ಥಿರ ಉದ್ಯೋಗ ಮತ್ತು ಬಡತನವನ್ನು ಕಡಿಮೆಮಾಡುವುದಕ್ಕೆ ಚಾಲಕವಾಗಿದೆ ಎಂದು ಇನ್ನೂ ಇತರ ಅಧ್ಯಯನಗಳು ವರದಿ ಮಾಡುತ್ತವೆ. ಆದರೆ ಗಣನೀಯ ಸಂಖ್ಯೆಯ ಜನರು ಬಡವರಾಗಿ ಉಳಿದಿದ್ದಾರೆ.[೨೯೩][೨೯೪] ೨೦೦೬ ಮತ್ತು ೨೦೧೬ರ ನಡುವೆ ಭಾರತವು ೨೭೧ ದಶಲಕ್ಷ ಜನರನ್ನು ಬಡತನದಿಂದ ಹೊರಗೆ ಎತ್ತಿ ಈ ಅವಧಿಯಲ್ಲಿ ಸ್ವತ್ತುಗಳು, ಅಡುಗೆ ಇಂಧನ, ನೈರ್ಮಲ್ಯ ಮತ್ತು ಪೌಷ್ಟಿಕತೆಯಂತಹ ಕ್ಷೇತ್ರಗಳಲ್ಲಿ ಉತ್ತಮವಾದ ಸುಧಾರಣೆಗಳೊಂದಿಗೆ ಬಹುಆಯಾಮದ ಬಡತನ ಸೂಚ್ಯಂಕದ ಪರಿಮಾಣಗಳಲ್ಲಿ ಅತಿ ವೇಗದ ಕಡಿತವನ್ನು ದಾಖಲಿಸಿತು.[೨೯೫]
೨೦೧೯ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು (೧೧೭ ದೇಶಗಳಲ್ಲಿ) ೧೦೨ನೇ ಸ್ಥಾನ ಪಡೆಯಿತು ಮತ್ತು ತೀವ್ರತೆಯಲ್ಲಿ 'ಗಂಭೀರ' ಎಂದು ವರ್ಗೀಕರಿಸಲ್ಪಟ್ಟಿತು.
ಕೃಷಿ ಮತ್ತು ಸಂಬಂಧಿತ ವಲಯಗಳು 2009–10 ರಲ್ಲಿ ಒಟ್ಟು ಕಾರ್ಯಪಡೆಯ ಸುಮಾರು ೫೨.೧% ರಷ್ಟನ್ನು ರೂಪಿಸಿದ್ದವು. ಕಾಲ ಕಳೆದಂತೆ ಉದ್ಯೋಗದಲ್ಲಿರುವ ಕಾರ್ಮಿಕರ ಪ್ರತಿಶತದಲ್ಲಿ ಕೃಷಿ ಉದ್ಯೋಗವು ಕಡಿಮೆಯಾಗಿದೆಯಾದರೂ, ನಿರ್ಮಾಣ ಮತ್ತು ಮೂಲಸೌಕರ್ಯ ಸೇರಿದಂತೆ ಸೇವೆಗಳ ಭಾಗವು ಉದ್ಯೋಗದಲ್ಲಿ ಸ್ಥಿರವಾಗಿ ಬೆಳೆದಿದೆ ಮತ್ತು 2012–13 ರಲ್ಲಿ 20.3% ರಷ್ಟನ್ನು ರೂಪಿಸಿತ್ತು.[೨೯೬] ಒಟ್ಟು ಕಾರ್ಯಪಡೆಯಲ್ಲಿ, 7% ಸಂಘಟಿತ ವಲಯದಲ್ಲಿದೆ. ಇದರಲ್ಲಿ ಮೂರನೇ ಎರಡು ಭಾಗ ಸರ್ಕಾರ ನಿಯಂತ್ರಿತ ಸಾರ್ವಜನಿಕ ವಲಯದಲ್ಲಿದೆ.[೨೯೭] ಸುಮಾರು 51.2% ಕಾರ್ಯಪಡೆಯು ಸ್ವ ಉದ್ಯೋಗಿಯಾಗಿದೆ.[೨೯೬] 2005–06ರ ಒಂದು ಸಮೀಕ್ಷೆಯ ಪ್ರಕಾರ, ಉದ್ಯೋಗ ಮತ್ತು ಸಂಬಳಗಳಲ್ಲಿ ಲಿಂಗ ಅಂತರವಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಪುರುಷರು ಮತ್ತು ಮಹಿಳೆಯರಿಬ್ಬರೂ ಮುಖ್ಯವಾಗಿ ಸ್ವ ಉದ್ಯೋಗಿಗಳಾಗಿದ್ದಾರೆ, ಬಹುತೇಕವಾಗಿ ಕೃಷಿಯಲ್ಲಿ. ನಗರ ಪ್ರದೇಶಗಳಲ್ಲಿ, ೨೦೦೬ರಲ್ಲಿ ಸಂಬಳವಿರುವ ಕೆಲಸವು ಗಂಡಸರು ಮತ್ತು ಹೆಂಗಸರು ಇಬ್ಬರಿಗೂ ಉದ್ಯೋಗದ ಅತಿ ದೊಡ್ಡ ಮೂಲವಾಗಿತ್ತು.[೨೯೮]
ಭಾರತದಲ್ಲಿ ನಿರುದ್ಯೋಗವು ದೀರ್ಘಕಾಲೀನ (ಮರೆಮಾಚಲ್ಪಟ್ಟ) ನಿರುದ್ಯೋಗದ ವಿಶೇಷ ಗುಣವನ್ನು ಹೊಂದಿದೆ. ಬಡತನ ಮತ್ತು ನಿರುದ್ಯೋಗ ಇವೆರಡೂ ಇತ್ತೀಚಿನ ದಶಕಗಳಲ್ಲಿ ಲಕ್ಷಾನುಗಟ್ಟಲೆ ಬಡ ಮತ್ತು ಕೌಶಲ್ಯರಹಿತ ಜನರು ಜೀವನೋಪಾಯದ ಹುಡುಕಾಟದಲ್ಲಿ ನಗರ ಪ್ರದೇಶಗಳಿಗೆ ಹೋಗುವಂತೆ ಮಾಡಿದೆ. ಇವೆರಡರ ನಿರ್ಮೂಲನೆಯ ಗುರಿಹೊಂದಿರುವ ಸರ್ಕಾರದ ಯೋಜನೆಗಳು ವ್ಯಾಪಾರಗಳನ್ನು ಪ್ರಾರಂಭಿಸಲು, ಕೌಶಲಗಳನ್ನು ಉತ್ತಮಗೊಳಿಸಲು, ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಸ್ಥಾಪಿಸಲು, ಸರ್ಕಾರಗಳಲ್ಲಿ ಮೀಸಲಾತಿ, ಇತ್ಯಾದಿಗಳಿಗೆ ಹಣಕಾಸು ನೆರವು ನೀಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತವೆ. ಉದಾರೀಕರಣದ ನಂತರ ಸಾರ್ವಜನಿಕ ವಲಯದ ತಗ್ಗಿದ ಪಾತ್ರದ ಕಾರಣದಿಂದ ಉಂಟಾದ ಸಂಘಟಿತ ಉದ್ಯೋಗದಲ್ಲಿನ ಇಳಿತವು ಉತ್ತಮ ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಅಗತ್ಯದ ಮೇಲೆ ಮತ್ತಷ್ಟು ಒತ್ತು ನೀಡಿ ಇನ್ನಷ್ಟು ಸುಧಾರಣೆಗಳಿಗೆ ರಾಜಕೀಯ ಒತ್ತಡವನ್ನು ಸೃಷ್ಟಿಸಿದೆ.[೨೯೯][೩೦೦] ಅಭಿವೃದ್ಧಿಶೀಲ ದೇಶಗಳ ಗುಣಮಟ್ಟಗಳ ಪ್ರಕಾರವೂ ಭಾರತದ ಕಾರ್ಮಿಕ ನಿಯಂತ್ರಣಗಳು ತ್ರಾಸದಾಯಕವಾಗಿವೆ, ಮತ್ತು ಪರಿಸರವನ್ನು ಉದ್ಯೋಗ ಸೃಷ್ಟಿಗೆ ಹೆಚ್ಚು ಅನುಕೂಲಕರವಾಗಿ ಮಾಡಲು ಇವನ್ನು ತೆಗೆದುಹಾಕುವಂತೆ ಅಥವಾ ಮಾರ್ಪಾಡು ಮಾಡುವಂತೆ ವಿಶ್ಲೇಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.[೩೦೧][೩೦೨] ೧೧ನೇ ಪಂಚವಾರ್ಷಿಕ ಯೋಜನೆಯೂ ಬೇಕಾಗಿರುವ ಪರವಾನಗಿಗಳ ಮತ್ತು ಇತರ ಅಧಿಕಾರಶಾಹಿ ಅನುಮತಿಗಳ ಸಂಖ್ಯೆಯನ್ನು ಕಡಿಮೆಮಾಡುವ ಮೂಲಕ ಉದ್ಯೋಗ ಸೃಷ್ಟಿಗೆ ಹಿತಕರವಾದ ಪರಿಸರವನ್ನು ಸೃಷ್ಟಿಸುವ ಅಗತ್ಯವನ್ನು ಗುರುತಿಸಿದೆ.[೩೦೩] ಶಿಕ್ಷಣ ವ್ಯವಸ್ಥೆಯಲ್ಲಿನ ಅಸಮಾನತೆಗಳು ಮತ್ತು ಅಭಾವಗಳನ್ನು ಒಂದು ಅಡೆತಡೆಯೆಂದು ಗುರುತಿಸಲಾಗಿದೆ. ಇವು ಹೆಚ್ಚಿದ ಉದ್ಯೋಗಾವಕಾಶಗಳ ಲಾಭಗಳು ಸಮಾಜದ ಎಲ್ಲ ವಲಯಗಳಿಗೆ ತಲುಪುವುದನ್ನು ತಡೆಗಟ್ಟುತ್ತವೆ.[೩೦೪]
ಭಾರತದಲ್ಲಿ ಬಾಲ ಕಾರ್ಮಿಕ ಪದ್ಧತಿಯು ಬಡತನದಲ್ಲಿ ಬೇರುಗಳನ್ನು ಹೊಂದಿರುವ ಸಂಕೀರ್ಣವಾದ ಸಮಸ್ಯೆಯಾಗಿದೆ. ೧೯೯೦ರ ದಶಕದಿಂದ, ಬಾಲ ಕಾರ್ಮಿಕ ಪದ್ಧತಿಯನ್ನು ನಿವಾರಿಸಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಇವುಗಳಲ್ಲಿ ಶಾಲೆಗಳ ಸ್ಥಾಪನೆ, ಉಚಿತ ಶಾಲಾ ಊಟದ ಕಾರ್ಯಕ್ರಮಗಳ ಪ್ರಾರಂಭ, ವಿಶೇಷ ತನಿಖಾ ಕೋಶಗಳ ಸೃಷ್ಟಿ, ಇತ್ಯಾದಿಗಳು ಸೇರಿವೆ.[೩೦೫][೩೦೬] ಭಾರತದಲ್ಲಿನ ಬಾಲಕಾರ್ಮಿಕ ಪದ್ಧತಿ ಮೇಲಿನ ಇತ್ತೀಚಿನ ಅಧ್ಯಯನಗಳು ಕೈಗಾರಿಕೆಗಳ ಕೆಲವು ವಿವಿಕ್ತ ಪ್ರದೇಶಗಳಲ್ಲಿ ಮಕ್ಕಳನ್ನು ನೇಮಿಸಿಕೊಳ್ಳಲಾಗಿದೆ, ಆದರೆ ಒಟ್ಟಾರೆಯಾಗಿ, ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯಲ್ಲಿ ಭಾರತೀಯ ಮಕ್ಕಳು ಉದ್ಯೋಗ ಮಾಡುತ್ತಿದ್ದಾರೆಂದು ಪತ್ತೆಹಚ್ಚಿವೆ ಎಂದು ಲೇಖಕಿ ಸೋನಾಲ್ಡೆ ದೇಸಾಯಿ ಹೇಳಿದರು. ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಾರ್ಮಿಕರು ಈಗ ಅಪರೂಪವಾಗಿದ್ದಾರೆ. 10–14 ವಯೋವರ್ಗದಲ್ಲಿ, ಕೇವಲ ೨% ಮಕ್ಕಳು ಕೂಲಿಗಾಗಿ ಕೆಲಸಮಾಡುತ್ತಾರೆ, ಅನ್ಯ ೯% ಮಕ್ಕಳು ಬಿತ್ತನೆ ಮತ್ತು ಬೆಳೆಗಳ ಕೊಯ್ಲಿನಂತಹ ಹೆಚ್ಚಿನ ಕೆಲಸದ ಬೇಡಿಕೆಯ ಸಮಯದಲ್ಲಿ ತಮ್ಮ ತಂದೆತಾಯಿಗಳಿಗೆ ನೆರವಾಗಲು ತಮ್ಮ ಮನೆಯಲ್ಲಿ ಅಥವಾ ಗ್ರಾಮೀಣ ಹೊಲಗಳಲ್ಲಿ ಕೆಲಸಮಾಡುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಗಳು ಕಂಡುಕೊಂಡಿವೆ.[೩೦೭]
ಭಾರತವು ವಿಶ್ವದಾದ್ಯಂತ ಅತಿ ಹೆಚ್ಚಿನ ಸಂಖ್ಯೆಯ ವಲಸಿಗರನ್ನು ಹೊಂದಿದೆ (ಅಂದಾಜು ೧೬ ದಶಲಕ್ಷ ಜನರು[೩೦೮]). ಇವರಲ್ಲಿ ಅನೇಕರು ವಿದೇಶದಲ್ಲಿ ಕೆಲಸಮಾಡಿ ಹಣವನ್ನು ಸ್ವದೇಶದಲ್ಲಿರುವ ತಮ್ಮ ಕುಟುಂಬಗಳಿಗೆ ರವಾನೆ ಮಾಡುತ್ತಾರೆ. ಮಧ್ಯಪ್ರಾಚ್ಯ ಪ್ರದೇಶವು ವಿದೇಶವಾಸಿ ಭಾರತೀಯರ ಉದ್ಯೋಗದ ಅತಿ ದೊಡ್ಡ ಮೂಲವಾಗಿದೆ. ಸೌದಿ ಅರೇಬಿಯಾದ ಕಚ್ಚಾತೈಲ ಉತ್ಪಾದನೆ ಮತ್ತು ಮೂಲಸೌಕರ್ಯ ಉದ್ಯಮವು ೨ ದಶಲಕ್ಷಕ್ಕಿಂತ ಹೆಚ್ಚಿನ ವಲಸಿಗ ಭಾರತೀಯರಿಗೆ ಉದ್ಯೋಗ ನೀಡಿದೆ. ಸಂಯುಕ್ತ ಅರಬ್ ಎಮಿರೇಟ್ಸ್ನಲ್ಲಿನ ದುಬೈ ಮತ್ತು ಅಬು ಧಾಬಿಯಂತಹ ನಗರಗಳು ಇತ್ತೀಚಿನ ದಶಕಗಳಲ್ಲಿನ ನಿರ್ಮಾಣ ಭರಾಟೆಯ ಸಮಯದಲ್ಲಿ ಅನ್ಯ ೨ ದಶಲಕ್ಷ ಭಾರತೀಯರಿಗೆ ಉದ್ಯೋಗ ನೀಡಿವೆ.[೩೦೯] 2009–10ರಲ್ಲಿ, ವಿದೇಶದಲ್ಲಿರುವ ಭಾರತೀಯ ವಲಸೆ ಕಾರ್ಮಿಕರು ರವಾನಿಸಿದ ಹಣವು ೫೫.೫ ಶತಕೋಟಿ ಡಾಲರ್ಗಳಷ್ಟಿತ್ತು. ಇದು ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣವಾಗಿದೆ, ಆದರೆ ಎಫ಼್ಡಿಐನಲ್ಲಿ ಅವುಗಳ ಪಾಲು ಸುಮಾರು ೧% ನಷ್ಟಿದ್ದು ಕಡಿಮೆಯಿದೆ.[೩೧೦]
ಭಾರತದಲ್ಲಿ ಭ್ರಷ್ಟಾಚಾರವು ವ್ಯಾಪಕವಾದ ಸಮಸ್ಯೆಯಾಗಿದೆ.[೩೧೧] ೨೦೦೫ರಲ್ಲಿ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ (ಟಿಐ) ನಡೆಸಿದ ಅಧ್ಯಯನದಲ್ಲಿ ಸಮೀಕ್ಷೆಗೊಳಗಾದ ಅರ್ಧಕ್ಕಿಂತ ಹೆಚ್ಚು ಜನ ಹಿಂದಿನ ವರ್ಷದಲ್ಲಿ ಒಂದು ಸಾರ್ವಜನಿಕ ಕಚೇರಿಯಲ್ಲಿ ಒಂದು ಕೆಲಸ ಮಾಡಿಸಿಕೊಳ್ಳಲು ಲಂಚ ನೀಡಿದ ಅಥವಾ ಪ್ರಭಾವವನ್ನು ಬಳಸಿದ ನೇರವಾದ ಅನುಭವ ಹೊಂದಿದ್ದು ಕಂಡುಬಂದಿತು.[೩೧೨] ಇದನ್ನು ಅನುಸರಿಸಿ ೨೦೦೮ರಲ್ಲಿ ನಡೆಸಿದ ಒಂದು ಅಧ್ಯಯನವು ಈ ಪ್ರಮಾಣವು ೪೦ ಪ್ರತಿಶತವೆಂದು ಕಂಡುಕೊಂಡಿತು.[೩೧೩] ೨೦೧೧ರಲ್ಲಿ, ಸಾರ್ವಜನಿಕ ವಲಯದ ಭ್ರಷ್ಟಾಚಾರದ ಗ್ರಹಿಸಿದ ಮಟ್ಟದಲ್ಲಿ ೧೮೩ ದೇಶಗಳಲ್ಲಿ ಭಾರತವು ೯೫ನೇ ಸ್ಥಾನಪಡೆಯಿತು.[೩೧೪] ೨೦೧೬ರ ವೇಳೆಗೆ, ಭಾರತದಲ್ಲಿ ಭ್ರಷ್ಟಾಚಾರ ಇಳಿದು ಅದರ ಸ್ಥಾನ ೭೯ಕ್ಕೆ ಸುಧಾರಿಸಿತು.[೩೧೫]
೧೯೯೬ರಲ್ಲಿ, ಕೆಂಪುಪಟ್ಟಿ, ಆಡಳಿತಶಾಹಿ ಮತ್ತು ಲೈಸೆನ್ಸ್ ರಾಜ್ಗಳು ಸಂಸ್ಥೀಕರಣಗೊಂಡ ಭ್ರಷ್ಟಾಚಾರ ಮತ್ತು ಅದಕ್ಷತೆಗೆ ಒಂದು ಕಾರಣವೆಂದು ಎಂದು ಸೂಚಿಸಲಾಗಿತ್ತು.[೩೧೬] ಭ್ರಷ್ಟಾಚಾರದ ಕಾರಣಗಳಲ್ಲಿ ಅತಿಯಾದ ನಿಯಂತ್ರಣಗಳು ಹಾಗೂ ಮಂಜೂರಾತಿ ಅಗತ್ಯಗಳು, ಕಡ್ಡಾಯದ ವ್ಯಯಿಸುವ ಕಾರ್ಯಕ್ರಮಗಳು, ಸರ್ಕಾರಿ ನಿಯಂತ್ರಣದ ಸಂಸ್ಥೆಗಳಿಂದ ಕೆಲವು ಸರಕುಗಳು ಹಾಗೂ ಸೇವೆ ಒದಗಿಸುವವರ ಏಕಸ್ವಾಮ್ಯ, ವಿವೇಚನಾಧಿಕಾರಗಳಿರುವ ಅಧಿಕಾರಶಾಹಿ, ಮತ್ತು ಪಾರದರ್ಶಕ ಕಾನೂನುಗಳು ಹಾಗೂ ಪ್ರಕ್ರಿಯೆಗಳ ಕೊರತೆ ಸೇರಿವೆ ಎಂದು ಹೆಚ್ಚು ಇತ್ತೀಚಿನ ವರದಿಗಳು ಸೂಚಿಸಿದವು.[೩೧೭][೩೧೮][೩೧೯]
ಸೇವೆಗಳ ಗಣಕೀಕರಣ, ವಿವಿಧ ಕೇಂದ್ರ ಹಾಗೂ ರಾಜ್ಯ ನಿಗಾ ಆಯೋಗಗಳು ಮತ್ತು ೨೦೦೫ರ ಮಾಹಿತಿ ಹಕ್ಕು ಕಾಯ್ದೆಗಳು (ಇದರ ಪ್ರಕಾರ ಸರ್ಕಾರಿ ಅಧಿಕಾರಿಗಳು ನಾಗರಿಕರು ಕೇಳಿದ ಮಾಹಿತಿಯನ್ನು ಒದಗಿಸಬೇಕು ಇಲ್ಲದಿದ್ದರೆ ದಂಡನಾತ್ಮಕ ಕ್ರಮವನ್ನು ಎದುರಿಸಬೇಕು) ಭ್ರಷ್ಟಾಚಾರವನ್ನು ಗಣನೀಯವಾಗಿ ಕಡಿಮೆಮಾಡಿ ಕ್ಲೇಶನಿವಾರಣೆಗೆ ದಾರಿಗಳನ್ನು ತೆರೆದಿವೆ.[೩೨೦]
೨೦೧೧ರಲ್ಲಿ, ಬಹುತೇಕ ಖರ್ಚುಗಳು ಅವುಗಳ ಉದ್ದೇಶಿತ ಗ್ರಾಹಿಗಳನ್ನು ತಲುಪುವಲ್ಲಿ ವಿಫಲವಾಗುತ್ತವೆಂದು ಭಾರತದ ಸರ್ಕಾರವು ತೀರ್ಮಾನಕ್ಕೆ ಬಂದಿತು, ಏಕೆಂದರೆ ದೊಡ್ಡ ಮತ್ತು ಅಸಮರ್ಥ ಅಧಿಕಾರಶಾಹಿಯು ಸ್ವಲ್ಪ ಪಾಲನ್ನು ಕಬಳಿಸುತ್ತದೆ.[೩೨೧] ಭಾರತದ ಗೈರುಹಾಜರಿ ಪ್ರಮಾಣಗಳು ವಿಶ್ವದಲ್ಲಿನ ಅತಿ ಕಳಪೆ ಪ್ರಮಾಣಗಳ ಪೈಕಿ ಇವೆ; ೨೫% ಸರ್ಕಾರಿ ವಲಯದ ಶಿಕ್ಷಕರು ಮತ್ತು ೪೦% ಸರ್ಕಾರಿ ಸ್ವಾಮ್ಯದ ಸರ್ಕಾರಿ ವಲಯದ ವೈದ್ಯಕೀಯ ಕಾರ್ಮಿಕರು ಕಾರ್ಯಸ್ಥಳದಲ್ಲಿ ಕಂಡುಬರುವುದಿಲ್ಲ ಎಂದು ಒಂದು ಅಧ್ಯಯನವು ಕಂಡುಕೊಂಡಿತು.[೩೨೨][೩೨೩] ಅದೇ ರೀತಿ, ಭಾರತೀಯ ವಿಜ್ಞಾನಿಗಳು ಎದುರಿಸುವ ಅನೇಕ ಸಮಸ್ಯೆಗಳಿವೆ. ಪಾರದರ್ಶಕತೆ, ಯೋಗ್ಯತಾಶಾಹಿ ವ್ಯವಸ್ಥೆ, ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಮೇಲ್ವಿಚಾರಣೆ ನೋಡಿಕೊಳ್ಳುವ ಅಧಿಕಾರಿಶಾಹಿ ಸಂಸ್ಥೆಗಳ ಕೂಲಂಕಷ ಪರೀಕ್ಷೆಗೆ ಬೇಡಿಕೆಗಳಿವೆ.[೩೨೪]
ಭಾರತವು ಭೂಗತ ಅರ್ಥವ್ಯವಸ್ಥೆಯನ್ನು ಹೊಂದಿದ್ದು, ಸ್ವಿಸ್ ಬ್ಯಾಂಕ್ಗಳಲ್ಲಿ ಹೆಚ್ಚುಕಡಿಮೆ $1,456 ಶತಕೋಟಿಯಷ್ಟು ಹಣ ಅಡಗಿಸಿಟ್ಟಿದ್ದು ಭಾರತವು ಕಾಳಧನದ ವಿಶ್ವವ್ಯಾಪಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ೨೦೦೬ರ ಒಂದು ವರದಿಯು ಆಪಾದಿಸಿತು. ಇದು ದೇಶದ ಒಟ್ಟು ಬಾಹ್ಯ ಸಾಲದ ೧೩ ಪಟ್ಟಾಗುತ್ತದೆ.[೩೨೫][೩೨೬] ಸ್ವಿಸ್ ಬ್ಯಾಂಕಿಂಗ್ ಸಂಘವು ಈ ಆಪಾದನೆಗಳನ್ನು ನಿರಾಕರಿಸಿದೆ. ಪ್ರಧಾನಮಂತ್ರಿ ಮೋದಿ ೮ ನವೆಂಬರ್ ೨೦೧೬ರಂದು ತೆಗೆದುಕೊಂಡ ಇತ್ತೀಚಿನ ಕ್ರಮವು ಕಾಳಧನವನ್ನು ಅರ್ಥವ್ಯವಸ್ಥೆಯೊಳಗೆ ವಾಪಸು ಮಾಡುವ ಸಲುವಾಗಿ ಎಲ್ಲ ೫೦೦ ಮತ್ತು ೧೦೦೦ ರೂಪಾಯಿಯ ಬ್ಯಾಂಕ್ನೋಟ್ಗಳ ಅಮಾನ್ಯೀಕರಣವನ್ನು (ಇವುಗಳನ್ನು ಹೊಸ ೫೦೦ ಮತ್ತು ೨೦೦೦ ರೂಪಾಯಿ ನೋಟಿಗಳಿಂದ ಬದಲಿಸಲಾಯಿತು) ಒಳಗೊಂಡಿತ್ತು.[೩೨೭][೩೨೮]
ಪ್ರಾಥಮಿಕ ಶಿಕ್ಷಣದ ಹಾಜರಿ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮತ್ತು ಸಾಕ್ಷರತೆಯನ್ನು ಜನಸಂಖ್ಯೆಯ ಸುಮಾರು ಶೇಕಡ ೭೫ಕ್ಕೆ ವಿಸ್ತರಿಸುವಲ್ಲಿ ಭಾರತವು ಪ್ರಗತಿ ಸಾಧಿಸಿದೆ.[೩೨೯] ೧೯೯೧ರಲ್ಲಿ ೫೨.೨% ಇದ್ದ ಸಾಕ್ಷರತಾ ಪ್ರಮಾಣ ೨೦೧೧ರಲ್ಲಿ ೭೪.೦೪% ಗೆ ಏರಿತು. ಪ್ರಾಥಮಿಕ ಮಟ್ಟದಲ್ಲಿ ಶಿಕ್ಷಣದ ಹಕ್ಕನ್ನು ೨೦೦೨ರ ಎಂಭತ್ತಾರನೇ ತಿದ್ದುಪಡಿಯ ಅಡಿಯಲ್ಲಿನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿ ಮಾಡಲಾಗಿದೆ, ಮತ್ತು ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸುವ ಉದ್ದೇಶಕ್ಕೆ ನೆರವಾಗಲು ಕಾನೂನನ್ನು ಜಾರಿಗೊಳಿಸಲಾಗಿದೆ.[೩೩೦] ಆದರೆ, ಸಾಕ್ಷರತಾ ಪ್ರಮಾಣವು ವಿಶ್ವವ್ಯಾಪಿ ಸರಾಸರಿಗಿಂತ ಕಡಿಮೆಯಿದೆ ಮತ್ತು ಶಿಕ್ಷಣವನ್ನು ನಡುವೆ ನಿಲ್ಲಿಸುವ ಪ್ರಮಾಣ ದೇಶದಲ್ಲಿ ಹೆಚ್ಚಿದೆ.[೩೩೧] ಸಾಕ್ಷರತಾ ಪ್ರಮಾಣಗಳು ಮತ್ತು ಶೈಕ್ಷಣಿಕ ಅವಕಾಶಗಳು ಪ್ರದೇಶ, ಲಿಂಗ, ನಗರ ಹಾಗೂ ಗ್ರಾಮೀಣ ಪ್ರದೇಶಗಳು, ಮತ್ತು ವಿಭಿನ್ನ ಸಾಮಾಜಿಕ ಗುಂಪುಗಳು ಬದಲಾದಂತೆ ಬದಲಾಗುತ್ತವೆ.[೩೩೨][೩೩೩]
ಬಡತನ, ಮೂಲಸೌಕರ್ಯದ ಲಭ್ಯತೆ ಮತ್ತು ಸಮಾಜಾರ್ಥಿಕ ಅಭಿವೃದ್ಧಿಯ ಸಂಬಂಧವಾಗಿ, ಭಾರತದ ವಿಭಿನ್ನ ರಾಜ್ಯಗಳು ಮತ್ತು ಪ್ರಾಂತ್ಯಗಳ ನಡುವೆ ಇರುವ ತೀವ್ರವಾದ ಮತ್ತು ಬೆಳೆಯುತ್ತಿರುವ ಪ್ರಾದೇಶಿಕ ವ್ಯತ್ಯಾಸಗಳು ಭಾರತದ ಆರ್ಥಿಕ ವ್ಯವಸ್ಥೆಯು ಎದುರಿಸುತ್ತಿರುವ ಗಂಭೀರ ಸಮಸ್ಯೆಯಾಗಿದೆ.[೩೩೪] ಆರು ಕಡಿಮೆ ಆದಾಯದ ರಾಜ್ಯಗಳಾದ – ಅಸ್ಸಾಂ, ಛತ್ತೀಸ್ಗಢ್, ನಾಗಾಲ್ಯಾಂಡ್, ಮಧ್ಯ ಪ್ರದೇಶ, ಒಡಿಶಾ ಮತ್ತು ಉತ್ತರ ಪ್ರದೇಶಗಳಲ್ಲಿ – ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗ ನೆಲೆಸಿದೆ.[೩೩೫] ಆದಾಯ, ಸಾಕ್ಷರತಾ ಪ್ರಮಾಣಗಳು, ಆಯುರ್ನಿರೀಕ್ಷೆ ಮತ್ತು ಇರುವ ಪರಿಸ್ಥಿತಿಗಳ ಸಂಬಂಧವಾಗಿ ರಾಜ್ಯಗಳ ನಡುವೆ ಗಂಭೀರವಾದ ಅಸಮಾನತೆಗಳಿವೆ.[೩೩೬]
ಪಂಚವಾರ್ಷಿಕ ಯೋಜನೆಗಳು, ವಿಶೇಷವಾಗಿ ಉದಾರೀಕರಣ ಪೂರ್ವ ಯುಗದಲ್ಲಿ, ಆಂತರಿಕ ಪ್ರದೇಶಗಳಲ್ಲಿ ಕೈಗಾರಿಕಾಭಿವೃದ್ಧಿಯನ್ನು ಪ್ರೋತ್ಸಾಹಿಸುವ ಮತ್ತು ಕೈಗಾರಿಕೆಗಳನ್ನು ರಾಜ್ಯಗಳಾದ್ಯಂತ ಹಂಚುವ ಮೂಲಕ ಪ್ರಾದೇಶಿಕ ಅಸಮಾನತೆಗಳನ್ನು ತಗ್ಗಿಸಲು ಪ್ರಯತ್ನಿಸಿದವು. ಇದರ ಪರಿಣಾಮಗಳು ನಿರುತ್ಸಾಹಗೊಳಿಸುವಂತಿವೆ ಏಕೆಂದರೆ ಈ ಕ್ರಮಗಳು ಅದಕ್ಷತೆಯನ್ನು ಹೆಚ್ಚಿಸಿದವು ಮತ್ತು ಪರಿಣಾಮಕಾರಿ ಕೈಗಾರಿಕಾ ಬೆಳವಣಿಗೆಗೆ ತಡೆಯೊಡ್ಡಿದವು.[೩೩೭] ಸುವಿಕಸಿತ ಮೂಲಸೌಕರ್ಯ ಮತ್ತು ಸುಶಿಕ್ಷಿತ ಹಾಗೂ ಕೌಶಲ್ಯಯುತ ಕಾರ್ಯಪಡೆಯನ್ನು ಹೊಂದಿರುವ ಹೆಚ್ಚು ಮುಂದುವರಿದ ರಾಜ್ಯಗಳು ಉದಾರೀಕರಣದಿಂದ ಪ್ರಯೋಜನ ಪಡೆಯಲು ಹೆಚ್ಚು ಉತ್ತಮ ಸ್ಥಿತಿಯಲ್ಲಿವೆ ಏಕೆಂದರೆ ಇವು ಉತ್ಪಾದನಾ ಮತ್ತು ಸೇವಾ ವಲಯಗಳನ್ನು ಆಕರ್ಷಿಸುತ್ತವೆ. ಕಡಿಮೆ ಅಭಿವೃದ್ಧಿಹೊಂದಿದ ರಾಜ್ಯಗಳ ಸರ್ಕಾರಗಳು ತೆರಿಗೆ ತಗ್ಗಿಸುವ ಮತ್ತು ಅಗ್ಗದ ಭೂಮಿಯನ್ನು ನೀಡುವ ಮೂಲಕ ಅಸಮಾನತೆಗಳನ್ನು ಕಡಿಮೆಮಾಡಲು ಪ್ರಯತ್ನಿಸಿವೆ, ಮತ್ತು ಇತರ ವಲಯಗಳಿಗಿಂತ ಹೆಚ್ಚು ವೇಗವಾಗಿ ಅಭಿವೃದ್ಧಿಹೊಂದಬಹುದಾದ ಪ್ರವಾಸೋದ್ಯಮದಂತಹ ವಲಯಗಳ ಮೇಲೆ ಕೇಂದ್ರೀಕರಿಸಿವೆ.[೩೩೮][೩೩೯] ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್ಡಿಪಿ) ಪ್ರಕಾರ, ಭಾರತದ ಆದಾಯ ಜಿನಿ ಗುಣಾಂಕವು 33.9 ಆಗಿದೆ. ಒಟ್ಟಾರೆ ಆದಾಯ ಹಂಚಿಕೆಯು ಪೂರ್ವ ಏಷ್ಯಾ, ಲ್ಯಾಟಿನ್ ಅಮೇರಿಕಾ ಮತ್ತು ಆಫ಼್ರಿಕಾಗಿಂತ ಹೆಚ್ಚು ಏಕಪ್ರಕಾರವಾಗಿದೆ ಎಂದು ಇದು ಸೂಚಿಸುತ್ತದೆ.[೩೪೦] ಭಾರತದ ಒಟ್ಟು ಸಂಪತ್ತಿನ 48% ನಷ್ಟನ್ನು ಹೆಚ್ಚಿನ ಒಟ್ಟು ಆದಾಯವಿರುವ ವ್ಯಕ್ತಿಗಳು ಹೊಂದಿದ್ದಾರೆ ಎಂದು ನ್ಯೂ ವರ್ಲ್ಡ್ ವೆಲ್ತ್ ಪ್ರಕಟಿಸಿದ ಜಾಗತಿಕ ಸಂಪತ್ತು ವಲಸೆ ಅವಲೋಕನ ೨೦೧೯ ವರದಿಯು ಅಂದಾಜಿಸಿತು.[೩೪೧]
ಭಾರತದ ಆರ್ಥಿಕ ವಿಸ್ತರಣೆಯು ಬಡವರ ಪರವೋ ಅಥವಾ ಬಡತನ ವಿರೋಧಿಯೋ ಎಂಬ ಬಗ್ಗೆ ಮುಂದುವರಿದ ಚರ್ಚೆ ನಡೆದಿದೆ.[೩೪೨] ಆರ್ಥಿಕ ಬೆಳವಣಿಗೆಯು ಬಡವರ ಪರವಾಗಿದೆ ಮತ್ತು ಭಾರತದಲ್ಲಿನ ಬಡತನವನ್ನು ಕಡಿಮೆಮಾಡಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ.[೩೪೨][೩೪೩]
ಜುಲೈ ೧೮೭೫ರಲ್ಲಿ ಮುಂಬೈ ಷೇರುಪೇಟೆ ಮತ್ತು ೧೮೯೪ರಲ್ಲಿ ಅಹ್ಮದಾಬಾದ್ ಷೇರುಪೇಟೆಯ ಆರಂಭದೊಂದಿಗೆ ಭಾರತದ ಭದ್ರತಾಪತ್ರ ಮಾರುಕಟ್ಟೆಗಳ ಬೆಳವಣಿಗೆಯು ಆರಂಭವಾಯಿತು. ಅಂದಿನಿಂದ, ೨೨ ಇತರ ಷೇರುಪೇಟೆಗಳು ಭಾರತೀಯ ನಗರಗಳಲ್ಲಿ ವ್ಯವಹಾರ ನಡೆಸಿವೆ. ೨೦೧೪ರಲ್ಲಿ, ಭಾರತದ ಷೇರುಪೇಟೆಯು ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯದ ಪ್ರಕಾರ ವಿಶ್ವದ ೧೦ ನೇ ಅತಿ ದೊಡ್ಡ ಮಾರುಕಟ್ಟೆಯಾಯಿತು, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾದವುಗಳ ಸ್ವಲ್ಪ ಮೇಲೆ.[೩೪೫] ವಿಶ್ವ ಷೇರುಪೇಟೆಗಳ ಒಕ್ಕೂಟದ ಪ್ರಕಾರ, ಫ಼ೆಬ್ರುವರಿ ೨೦೧೫ರ ವೇಳೆಗೆ, ಭಾರತದ ಎರಡು ಪ್ರಮುಖ ಷೇರುಪೇಟೆಗಳಾದ ಬಿಎಸ್ಇ ಮತ್ತು ಭಾರತದ ರಾಷ್ಟ್ರೀಯ ಷೇರುಪೇಟೆಗಳು (ಎನ್ಎಸ್ಇ) $1.71 ಟ್ರಿಲಿಯನ್ ಮತ್ತು $1.68 ಟ್ರಿಲಿಯನ್ನಷ್ಟು ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯವನ್ನು ಹೊಂದಿದ್ದವು.[೩೪೬][೩೪೭]
ಎನ್ವೈಎಸ್ಇ ಮತ್ತು ನ್ಯಾಸ್ಡ್ಯಾಕ್ಗೆ ಹೋಲಿಸಿದರೆ ಭಾರತದಲ್ಲಿನ ಆರಂಭಿಕ ಸಾರ್ವಜನಿಕ ಅರ್ಪಣೆಯ (ಐಪಿಒ) ಮಾರುಕಟ್ಟೆಯು ಚಿಕ್ಕದಾಗಿದ್ದು ೨೦೧೩ರಲ್ಲಿ $300 ದಶಲಕ್ಷದಷ್ಟು ಮತ್ತು ೨೦೧೨ರಲ್ಲಿ $1.4 ಶತಕೋಟಿಯಷ್ಟು ಸಂಗ್ರಹಿಸಿತು. ತಗ್ಗಿದ ಐಪಿಒ ಚಟುವಟಿಕೆಯು ಮಾರುಕಟ್ಟೆ ಪರಿಸ್ಥಿತಿಗಳು, ನಿಧಾನವಾದ ಸರ್ಕಾರಿ ಸಮ್ಮತಿ ಪ್ರಕ್ರಿಯೆಗಳು ಮತ್ತು ಸಂಕೀರ್ಣವಾದ ನಿಬಂಧನೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅರ್ನ್ಸ್ಟ್ ಮತ್ತು ಯಂಗ್ ಹೇಳಿತು.[೩೪೮] ೨೦೧೩ಕ್ಕಿಂತ ಮೊದಲು, ಭಾರತದ ಕಂಪನಿಗಳು ಮೊದಲು ಭಾರತದಲ್ಲಿ ಒಂದು ಐಪಿಒವನ್ನು ಮುಗಿಸುವ ಮುನ್ನ ಅಂತರರಾಷ್ಟ್ರೀಯವಾಗಿ ತಮ್ಮ ಭದ್ರತಾಪತ್ರಗಳನ್ನು ದಾಖಲಿಸುವಂತಿರಲಿಲ್ಲ. ೨೦೧೩ರಲ್ಲಿ, ಈ ಭದ್ರತಾಪತ್ರದ ಕಾನೂನುಗಳನ್ನು ಸುಧಾರಿಸಲಾಯಿತು ಮತ್ತು ಈಗ ಭಾರತೀಯ ಕಂಪನಿಗಳು ತಾವು ಎಲ್ಲಿ ಮೊದಲು ದಾಖಲಿಸಲು ಬಯಸುತ್ತವೆಂಬುದನ್ನು ಆಯ್ಕೆಮಾಡಬಹುದು: ವಿದೇಶದಲ್ಲಿ, ದೇಶೀಯವಾಗಿ, ಅಥವಾ ಒಂದೇ ಕಾಲದಲ್ಲಿ ಎರಡೂ ಕಡೆ.[೩೪೯] ಇದರ ಜೊತೆಗೆ, ಮೊದಲೇ ದಾಖಲಾಗಿರುವ ಕಂಪನಿಗಳ ವಿದೇಶಿ ದಾಖಲೆಗಳನ್ನು ಸರಾಗವಾಗಿಸಲು, ಭಾರತೀಯ ಕಂಪನಿಗಳಲ್ಲಿ ಖಾಸಗಿ ಸಮಭಾಗ ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರಿಗೆ ದ್ರವತೆಯನ್ನು ಹೆಚ್ಚಿಸಲು ಭದ್ರತಾಪತ್ರಗಳ ಕಾನೂನುಗಳನ್ನು ಪರಿಷ್ಕರಿಸಲಾಗಿದೆ.[೩೪೮]
<ref>
tag; no text was provided for refs named oecd
<ref>
tag; no text was provided for refs named nyt
<ref>
tag; no text was provided for refs named Maddison379
<ref>
tag; no text was provided for refs named maddison261
{{cite web}}
: CS1 maint: url-status (link)[ಶಾಶ್ವತವಾಗಿ ಮಡಿದ ಕೊಂಡಿ]
<ref>
tag; no text was provided for refs named RBI_reserves
<ref>
tag; no text was provided for refs named IMF_Public Debt
<ref>
tag; no text was provided for refs named ET_Fiscal
<ref>
tag; no text was provided for refs named CIA_data2
<ref>
tag; no text was provided for refs named bs_India2
<ref>
tag; no text was provided for refs named WTTCBenchmark
<ref>
tag; no text was provided for refs named irrigation2
<ref>
tag; no text was provided for refs named India's Food Transportation Ordeal
<ref>
tag; no text was provided for refs named WTTCBenchmark6
<ref>
tag; no text was provided for refs named dnbgems2
<ref>
tag; no text was provided for refs named WTTCBenchmark7
<ref>
tag; no text was provided for refs named quandl.com2
<ref>
tag; no text was provided for refs named PIB
<ref>
tag; no text was provided for refs named PIB2
<ref>
tag; no text was provided for refs named IATA2
<ref>
tag; no text was provided for refs named WTTCBenchmark2
<ref>
tag; no text was provided for refs named CIA2
<ref>
tag; no text was provided for refs named WTTCBenchmark3
{{cite journal}}
: Cite journal requires |journal=
(help)
<ref>
tag; no text was provided for refs named healthDNA2
{{cite web}}
: CS1 maint: archived copy as title (link)
<ref>
tag; no text was provided for refs named ficcimine
<ref>
tag; no text was provided for refs named mospimines2
<ref>
tag; no text was provided for refs named WTTCBenchmark5
{{cite journal}}
: Cite journal requires |journal=
(help)
<ref>
tag; no text was provided for refs named HDI2
<ref>
tag; no text was provided for refs named HDI
{{cite news}}
: CS1 maint: unrecognized language (link)
<ref>
tag; no text was provided for refs named 2005-TI-study
<ref>
tag; no text was provided for refs named GINI index
<ref>
tag; no text was provided for refs named Global Wealth Migration Review