ಸತಿಯನ್ನು ದಾಕ್ಷಾಯಣಿ ಎಂದೂ ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಸತಿಯು ವಿವಾಹ ಸೌಖ್ಯ ಮತ್ತು ದೀರ್ಘಾಯುಷ್ಯದ ದೇವತೆ. ಆದಿ ಪರಾಶಕ್ತಿಯ ಅಂಶವಾದ ದಾಕ್ಷಾಯಣಿಯು ಶಿವನ ಮೊದಲ ಪತ್ನಿ. ಪಾರ್ವತಿ ಎರಡನೇ ಪತ್ನಿ ಮತ್ತು ಸತಿಯ ಪುನರ್ಜನ್ಮವಾಗಿದ್ದಾಳೆ.
ಹಿಂದೂ ಪುರಾಣದಲ್ಲಿ, ಸತಿ ಮತ್ತು ಪಾರ್ವತಿಯರು ಅನುಕ್ರಮವಾಗಿ ಶಿವನನ್ನು ತಪಸ್ವಿ ಪ್ರತ್ಯೇಕತೆಯಿಂದ ಜಗತ್ತಿನೊಂದಿಗೆ ಸೃಜನಶೀಲ ಭಾಗವಹಿಸುವಿಕೆಯಲ್ಲಿ ತರುವ ಪಾತ್ರ ವಹಿಸುತ್ತಾರೆ.[೧] ನಿಷ್ಠೆ ಮತ್ತು ಭಕ್ತಿಯ ಅಂತಿಮ ಹಾಗೂ ಪರಿಪೂರ್ಣ ಕ್ರಿಯೆಯಾಗಿ ಹಿಂದೂ ವಿಧವೆಯು ತನ್ನ ಗಂಡನ ಚಿತೆಯ ಮೇಲೆ ಆತ್ಮಾಹುತಿ ಮಾಡಿಕೊಳ್ಳುವ ಸತಿ ಪದ್ಧತಿಯನ್ನು ಈ ದೇವತೆಯು ತನ್ನ ಗಂಡನ ಗೌರವವನ್ನು ಎತ್ತಿಹಿಡಿಯಲು ಮಾಡಿದ ಸಾಹಸಕಾರ್ಯದ ನಂತರ ಮಾದರಿಯಂತೆ ರೂಪಿಸಲಾಗಿದೆ.
ರಾಣಿ ಪ್ರಸೂತಿಗೆ ಮಗಳ ಬಯಕೆಯಾಯಿತು. ಬ್ರಹ್ಮನು ಪ್ರಸೂತಿ ಮತ್ತು ದಕ್ಷರಿಗೆ ಆದಿ ಪರಾಶಕ್ತಿಯ ಧ್ಯಾನಮಾಡುವಂತೆ ಸಲಹೆನೀಡಿದನು. ಅವರಿಬ್ಬರು ತಮ್ಮ ರಾಜ ಉಡುಪುಗಳನ್ನು ಬಿಟ್ಟುಕೊಟ್ಟು, ಸಂನ್ಯಾಸಿಗಳ ವೇಷ ಧರಿಸಿ, ಕಾಡಿನಲ್ಲಿ ಕುಳಿತು ಆದಿ ಪರಾಶಕ್ತಿಯ ಧ್ಯಾನ ಮಾಡಿದರು. ದೀರ್ಘ ಸಮಯದ ನಂತರ, ಆದಿ ಪರಾಶಕ್ತಿಯು ಪ್ರತ್ಯಕ್ಷಳಾಗಿ ದಕ್ಷ ಮತ್ತು ಪ್ರಸೂತಿಯರನ್ನು ಅವರ ತಪಸ್ಸಿನಿಂದ ಎಬ್ಬಿಸಿದಳು. ಆದಿ ಪರಾಶಕ್ತಿಯು ವರವನ್ನು ಬೇಡಲು ಆಮಂತ್ರಿಸಿದಳು. ದಕ್ಷನು ಆಕೆಯೇ ತಮ್ಮ ಮಗಳಾಗಿ ಮತ್ತೆ ಜನಿಸುವಂತೆ ಕೇಳಿಕೊಂಡನು. ದೇವಿಯು ಒಪ್ಪಿಗೆ ನೀಡಿದಳು, ಆದರೆ ಅವಳಿಗೆ ಎಂದಾದರೂ ಅವಮಾನಮಾಡಿದರೆ ತನ್ನ ಸ್ವರ್ಗಲೋಕದ ರೂಪವನ್ನು ತೆಗೆದುಕೊಂಡು ಅವರನ್ನು ತ್ಯಜಿಸುವಳು ಎಂಬ ಎಚ್ಚರಿಕೆಯನ್ನೂ ನೀಡಿದಳು. ದಕ್ಷ ಮತ್ತು ಪ್ರಸೂತಿಯರು ಅವಳ ಸರಿಯಾಗಿ ನೋಡಿಕೊಳ್ಳಲು ಒಪ್ಪಿದರು.
ಅವರಿಬ್ಬರು ತಮ್ಮ ಅರಮನೆಗೆ ಹಿಂದಿರುಗಿದರು. ಆದಿ ಪರಾಶಕ್ತಿಯು ಮಾನವ ಜನ್ಮ ತಾಳಿದಳು. ದಕ್ಷ ಮತ್ತು ಪ್ರಸೂತಿಯರು ತಮ್ಮ ಮಗಳಿಗೆ ಸತಿ ಎಂಬ ಹೆಸರಿಟ್ಟರು. ಮಗುವಾಗಿದ್ದಾಗಲೇ ಸತಿಯು ನಾರದರು ಹೇಳಿದ ಶಿವನಿಗೆ ಸಂಬಂಧಿಸಿದ ಕಥೆಗಳು ಮತ್ತು ಪುರಾಣಗಳನ್ನು ತುಂಬಾ ಇಷ್ಟಪಡುತ್ತಿದ್ದಳು ಮತ್ತು ಶಿವನ ಉತ್ಕಟ ಭಕ್ತೆಯಾಗಿ ಬೆಳೆದಳು. ವಯಸ್ಕಳಾದಾಗ, ತನ್ನ ತಂದೆ ಉದ್ದೇಶಿಸಿದಂತೆ ಬೇರೆ ಯಾರನ್ನಾದರೂ ವಿವಾಹವಾಗುವ ಕಲ್ಪನೆ ಅವಳಿಗೆ ಸರಿಯಲ್ಲದಾಯಿತು.
ತಪಸ್ವಿ ಶಿವನ ಗೌರವ ಗಳಿಸಲು, ಸತಿಯು ತನ್ನ ತಂದೆಯ ಅರಮನೆಯ ಸುಖಭೋಗಗಳನ್ನು ತೊರೆದು ಅರಣ್ಯಕ್ಕೆ ಹೋದಳು. ಅಲ್ಲಿ ಅವಳು ಶಿವನ ಆರಾಧನೆ ಮತ್ತು ತಪಸ್ಸಿನಲ್ಲಿ ನಿರತಳಾದಳು. ಅವಳ ತಪಸ್ಸು ಎಷ್ಟು ಕಠೋರವಾಗಿತ್ತೆಂದರೆ ಅವಳು ಕ್ರಮೇಣ ಆಹಾರವನ್ನೇ ತ್ಯಜಿಸಿದಳು, ಒಂದು ಹಂತದಲ್ಲಿ ದಿನಕ್ಕೆ ಒಂದು ಎಲೆ ಮಾತ್ರ ಸೇವಿಸುತ್ತಿದ್ದಳು, ನಂತರ ಅದನ್ನೂ ವರ್ಜಿಸಿದಳು; ಈ ನಿಗ್ರಹ ಅವಳಿಗೆ ಅಪರ್ಣೆ ಎಂಬ ಹೆಸರು ತಂದುಕೊಟ್ಟಿತು.